ಧರ್ಮಪುರಿಯ ರೋಚಕ ಲವ್ ಸ್ಟೋರಿ ದುರಂತ ಅಂತ್ಯ!
ಇಳವರಸನ್ (19)ನನ್ನು ಮದುವೆಯಾಗಿದ್ದ ದಿವ್ಯಾ (21), ನಾನು ಆತನ ಜೊತೆ ಹೋಗುವುದಿಲ್ಲ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಳು. ಈ ಹೇಳಿಕೆಗಳು ಪ್ರಕಟವಾದ ತಕ್ಷಣ ಇಳವರಸನ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
ಶುಕ್ರವಾರ ಧರ್ಮಪುರಿಯ ರೈಲ್ವೆ ನಿಲ್ದಾಣದಿಂದ ಸಮೀಪದಲ್ಲೇ ಇಳವರಸನ್ ಮೃತದೇಹ ಪತ್ತೆಯಾಗಿದೆ. ಪೊಲೀಸರು ಇದು ಆತ್ಮಹತ್ಯೆ ಪ್ರಕರಣ, ಇಳವರಸನ್ ಬರೆದಿಟ್ಟ ಡೆತ್ ನೋಟ್ ಸಿಕ್ಕಿದೆ ಎಂದು ಹೇಳಿದ್ದಾರೆ.
ಮರು ಪರೀಕ್ಷೆಗೆ ಆಗ್ರಹ : ಇಳವರಸನ್ ಕುಟುಂಬ ಸದಸ್ಯರು ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಹೇಳಿಕೆಯನ್ನು ನಿರಾಕರಿಸಿದ್ದಾರೆ. ಮರು ಮರಣೋತ್ತರ ಪರೀಕ್ಷೆ ನಡೆಸುವಂತೆ ಆಗ್ರಹಿಸಿದ್ದಾರೆ. ಇಳವರಸನ್ ಮೃತದೇಹವನ್ನು ಮತ್ತೊಮ್ಮೆ ಮರಣೋತ್ತರ ಪರೀಕ್ಷೆ ನಡೆಸಲು ಸುರಕ್ಷಿತವಾಗಿ ಕಾಯ್ದಿರಿಸಬೇಕೆಂದು ಮದ್ರಾಸ್ ಹೈಕೋರ್ಟ್ ಆದೇಶಿಸಿದೆ.
ಪ್ರಕರಣವೇನು : ದಲಿತ ಯುವಕ ಇಳವರಸನ್ ವನ್ನಿಯಾರ್ ಸಮುದಾಯದ ದಿವ್ಯಾ ಪರಸ್ಪರ ಪ್ರೀತಿಸುತ್ತಿದ್ದರು. ದಲಿತ ಯುವಕನ ಜೊತೆ ವಿವಾಹಕ್ಕೆ ದಿವ್ಯಾ ಮನೆಯವರು ವಿರೋಧ ವ್ಯಕ್ತಪಡಿಸಿದ್ದರು.
ನವೆಂಬರ್ ತಿಂಗಳಿನಲ್ಲಿ ಈ ಜೋಡಿ ಪಲಾಯನಗೈದು ವಿವಾಹವಾಗಿದ್ದರು. ಇದರಿಂದ ಮನನೊಂದ ದಿವ್ಯಾಳ ತಂದೆ ನಾಗರಾಜನ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಸಾಯುವ ಮುನ್ನಾ ಅವರು, ನನ್ನ ಮಗಳು ಕಾಣೆಯಾಗಿದ್ದಾಳೆ ಎಂದು ಮದ್ರಾಸ್ ಹೈಕೋರ್ಟ್ ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು.
ನಾಗರಾಜನ್ ಸಾವಿನ ನಂತರ, ಎರಡು ಜಾತಿಗಳ ನಡುವಿನ ಸಂಘರ್ಷಕ್ಕೆ ಉಂಟಾಗಿತ್ತು. ಚೆನ್ನೈ ಸಮೀಪದ ಮರಕ್ಕಾನಮ್ ಎಂಬಲ್ಲಿರುವ 200 ದಲಿತರ ಗುಡಿಸಲುಗಳಿಗೆ ದಿವ್ಯಾ ಜಾತಿಯ ಜನರು ಬೆಂಕಿ ಹಚ್ಚಿದ್ದರು.
ಜಾತಿ ಸಂಘರ್ಷ ಮತ್ತು ಹೈಕೋರ್ಟ್ ವಿಚಾರಣೆ ನಂತರ ದಿವ್ಯಾ ಮನೆಗೆ ಮರಳಿದ್ದವು. ಗುರುವಾರ ಆಕೆ ನಾನು ಇಳವರಸನ್ ಜೊತೆಗೆ ಹೋಗುವುದಿಲ್ಲ ಎಂದು ಹೇಳಿಕೆ ನೀಡಿದ್ದಳು. ಇದರ ನಂತರ ಇಳವರಸನ್ ಮೃತದೇಹ ರೈಲ್ವೆ ಹಳಿಯ ಮೇಲೆ ಪತ್ತೆಯಾಗಿ ಪ್ರೇಮಕಥೆ ದುರಂತ ಅಂತ್ಯವಾಗಿದೆ.