ಜ್ಞಾನ ಗಂಗಾ ವಿವಿಯಲ್ಲಿ ಅಜ್ಞಾನದ ಆಹ್ವಾನಪತ್ರ!
ಅವರೇ ಗುಲಬರ್ಗ ವಿಶ್ವವಿದ್ಯಾಲಯ 'ಜ್ಞಾನ ಗಂಗಾ'ದ ಕುಲಪತಿ ಪ್ರೊ.ಈ.ಟಿ.ಪುಟ್ಟಯ್ಯ. ಅವರು ತಮ್ಮ ಹುಟ್ಟುಹಬ್ಬದ ಆಚರಣೆಗೂ ಸರ್ಕಾರಿ ಆದೇಶ ಹೊರಡಿಸಿ, ಅಜ್ಞಾನ (ಜಾಣತನ) ಮರೆದಿದ್ದಾರೆ. ವೈಯುಕ್ತಿಕ ಕಾರಣಕ್ಕಾಗಿ ಸರ್ಕಾರಿ ಹುದ್ದೆ ಮತ್ತು ಪದವಿ ಬಳಸಿ ಅಧಿಕಾರದ ದುರ್ಬಳಕೆ ಮಾಡಿಕೊಳ್ಳುವುದು ಎಂತಹ ಮಟ್ಟಕ್ಕೆ ಹೋಗಿದೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ.
ಪ್ರೊ. ಈ.ಟಿ.ಪುಟ್ಟಯ್ಯನವರ 60ನೇ ಹುಟ್ಟುಹಬ್ಬದ ಅಂಗವಾಗಿ ಕುಲಪತಿಗಳ ನಿವಾಸದಲ್ಲಿ ಬುಧವಾರ ಸಂಜೆ ಔತಣಕೂಟ ಏರ್ಪಡಿಸಲಾಗಿತ್ತು. ಅಚ್ಚರಿ ಅಂದರೆ ಈ ಔತಣಕೂಟದಲ್ಲಿ ಪಾಲ್ಗೊಳ್ಳಿ ಅಂತ ಸರ್ಕಾರಿ ಆಹ್ವಾನ ಪತ್ರವನ್ನು ಒಂದು ದಿನ ಮುಂಚೆಯೇ ಹೊರಡಿಸಲಾಗಿತ್ತು. ತಮ್ಮದೇ ಲೆಟರ್ ಹೆಡ್ನಲ್ಲಿ ಎಲ್ಲರಿಗೂ ಆಹ್ವಾನವನ್ನು ಪುಟ್ಟಯ್ಯ ಅವರು ಕಳುಹಿಸಿದ್ದಾರೆ.
ಕುಲಪತಿಗಳ ನಿವಾಸದಲ್ಲಿ ಔತಣಕೂಟ ಏರ್ಪಡಿಸಲಾಗಿದ್ದು, ವಿಶ್ವವಿದ್ಯಾಲಯದ ಎಲ್ಲ ಶಿಕ್ಷಕ ಹಾಗೂ ಶಿಕ್ಷಕೇತರ ಸಹೋದ್ಯೋಗಿಗಳು ಈ ಔತಣಕೂಟದಲ್ಲಿ ಪಾಲ್ಗೊಳ್ಳುವಂತೆ ಮಾನ್ಯ ಕುಲಪತಿಗಳು ಕೋರಿರುತ್ತಾರೆ ಎಂದು ತಿಳಿಸಲು ಸಂತೋಷವೆನಿಸ್ತದೆ ಅಂತ ಕುಲಸಚಿವರು ಕಡತ ಸಂಖ್ಯೆ ಹಾಕಿ ಆಹ್ವಾನ ಪತ್ರ ಹೊರಡಿಸಿದ್ದಾರೆ. ಬಂದವರೆಲ್ಲರೆದಿರುವ ಕೇಕ್ ಕಟ್ ಮಾಡಿ ಮಡದಿ ಕೈಯಾರೆ ಕೇಕ್ ತಿನ್ನಿಸಿಕೊಂಡ ಮೈಸೂರು ಪೇಟ್ಧಾರಿ ಪುಟ್ಟಯ್ಯ, ಎಲ್ಲರಿಗೂ ಊಟ ಹಾಕಿಸಿ ತೃಪ್ತಿಪಟ್ಟುಕೊಂಡರು.
ಜುಲೈ 3 ಪ್ರೊ.ಈ.ಟಿ.ಪುಟ್ಟಯ್ಯ ಅವರ ಹುಟ್ಟುಹಬ್ಬ ಮಾತ್ರವಲ್ಲ. ವಿವಾಹ ಮಹೋತ್ಸವದ ದಿನವೂ ಆಗಿತ್ತು ಎಂಬುದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಎರಡು ಸಮಾರಂಭಕ್ಕೆ ಒಂದೇ ಊಟ ಹಾಕಿಸಿ ತಮ್ಮ ಜಾಣತನವನ್ನೂ ಪುಟ್ಟಯ್ಯ ಮೆರೆದಿದ್ದಾರೆ. ವೈಯುಕ್ತಿಕ ಕಾರ್ಯಕ್ರಮದ ಈ ಖರ್ಚನ್ನು ಸರ್ಕಾರಿ ವೆಚ್ಚದಲ್ಲಿ ಸೇರಿಸೋ ಹುನ್ನಾರ ಇದಾಗಿರಬಹುದು ಅನ್ನೋ ಅನುಮಾನಗಳು ಮೂಡಿಬಂದಿವೆ. ಯಾರ್ದೋ ದುಡ್ಡು ಯಲ್ಲಮ್ಮನ ಜಾತ್ರೆ!
ಕೆಲ ದಿನಗಳ ಹಿಂದೆ ಮೈಸೂರು ವಿಶ್ವವಿದ್ಯಾಲಯ ಕೂಡ ವಿವಾದಕ್ಕೆ ಸಿಲುಕಿತ್ತು. ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಕೆಎಸ್ ರಂಗಪ್ಪ ಅವರ ಬೀಗರಾದ ಡಾ. ಮಂಜುನಾಥ್ ಹೆಸರು ಪಟ್ಟಿಯಲ್ಲಿ ಸೇರಿರುವ ಬಗ್ಗೆ ಆಕ್ಷೇಪ ಕೇಳಿ ಬಂದಿತ್ತು. ನಂತರ ಡಾ. ಮಂಜುನಾಥ್ ಅವರು ಡಾಕ್ಟರೇಟ್ ನಿರಾಕರಿಸಿ ವಿವಾದ ತಣ್ಣಗಾಗಿಸಿದ್ದರು. ಈಗ ಗುಲಬರ್ಗ ವಿಶ್ವವಿದ್ಯಾಲಯದ ಕುಲಸಚಿವು ತಮ್ಮ ಸ್ವಹಿತಾಸಕ್ತಿಗಾಗಿ ವಿಶ್ವವಿದ್ಯಾಲಯವನ್ನು ವಿವಾದದ ಕೇಂದ್ರಬಿಂದುವಾಗಿಸಿದ್ದಾರೆ.