ಡಿಸಿಎಂ ಹುದ್ದೆ ಇಲ್ಲ, ದಿಗ್ವಿಜಯ ಸಿಂಗ್ ಘೋಷಣೆ!
ಬೆಂಗಳೂರಿನಲ್ಲಿ ಪಕ್ಷದ ಶಾಸಕರ ಜೊತೆಗಿನ ಉಪಹಾರಕೂಟದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ದಿಗ್ವಿಜಯ ಸಿಂಗ್, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಉತ್ತಮವಾಗಿ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಅವರಿಗೆ ಡಿಸಿಎಂ ಪದವಿ ನೀಡುವ ಯಾವುದೇ ಪ್ರಸ್ತಾಪವಿಲ್ಲ ಎಂದರು.
ಮಂಗಳವಾರ ಕಾಂಗ್ರೆಸ್ ಪಕ್ಷದ ಹಲವು ಶಾಸಕರು, ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬರಲು ಪರಮೇಶ್ವರ್ ಅವರ ಶ್ರಮ ಮುಖ್ಯವಾದುದು. ಅವರಿಗೆ ಉಪ ಮುಖ್ಯಮಂತ್ರಿ ಹುದ್ದೆ ನೀಡಬೇಕೆಂದು ದಿಗ್ವಿಜಯ ಸಿಂಗ್ ಅವರಿಗೆ ಮನವಿ ಮಾಡಿದ್ದರು.
ಈ ಹಿನ್ನೆಲೆಯಲ್ಲಿ ಡಿಸಿಎಂ ಹುದ್ದೆ ಸೃಷ್ಟಿಯಾಗಲಿದೆಯೇ? ಎಂಬ ಪ್ರಶ್ನೆ ಉದ್ಭವವಾಗಿತ್ತು. ಆದರೆ, ಈ ಕುರಿತು ಸ್ಪಷ್ಟನೆ ನೀಡಿರುವ ದಿಗ್ವಿಜಯ ಸಿಂಗ್, ಮುಂದಿನ ಲೋಕಸಭೆ ಚುನಾವಣೆಯನ್ನು ಪರಮೇಶ್ವರ್ ಅವರ ನೇತೃತ್ವದಲ್ಲಿ ಎದುರಿಸಲಾಗುವುದು ಎಂದು ಹೇಳಿದ್ದಾರೆ.
ಪಕ್ಷ ಪರಮೇಶ್ವರ್ ಅವರಿಗೆ ಬೇರೆ ಹುದ್ದೆ ನೀಡುವ ಬಗ್ಗೆ ಯಾವುದೇ ನಿರ್ಣಯ ಕೈಗೊಂಡಿಲ್ಲ. ಪಕ್ಷವನ್ನು ಅಧಿಕಾರಕ್ಕೆ ತಂದ ಪರಮೇಶ್ವರ್ ಶ್ರಮವನ್ನು ಪಕ್ಷ ಮರೆತಿಲ್ಲ. ಅವರಿಗೆ ಸೂಕ್ತ ಸ್ಥಾನಮಾನ ನೀಡುತ್ತದೆ ಎಂದು ಸಿಂಗ್ ತಿಳಿಸಿದರು.
25 ಸ್ಥಾನ ಗೆಲ್ಲಬೇಕು : ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷ ರಾಜ್ಯದಲ್ಲಿ 25 ಸ್ಥಾನಗಳನ್ನು ಗೆಲ್ಲುವುದು ಗುರಿಯಾಗಿದೆ. ಎಲ್ಲಾ ನಾಯಕರು ಒಗ್ಗಟ್ಟಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡು ಚುನಾವಣೆಯ ಗೆಲುವಿಗೆ ಶ್ರಮಿಸಬೇಕು ಎಂದು ಸಿಂಗ್ ಕರೆ ನೀಡಿದರು.
ಎಐಸಿಸಿಯಿಂದ ಪ್ರತಿ ಲೋಕಸಭೆ ಕ್ಷೇತ್ರಕ್ಕೆ ನೇಮಿಸಿರುವ ವೀಕ್ಷಕರು ಮುಂದಿನ ವಾರದಿಂದ ಕ್ಷೇತ್ರಗಳಿಗೆ ತೆರಳಿ ಜನರ ಅಭಿಪ್ರಾಯ ಸಂಗ್ರಹಿಸಲಿದ್ದಾರೆ. ಲೋಕಸಭೆ ಚುನಾವಣೆಗೆ ಸಿದ್ಧತೆ ಪ್ರಾರಂಭಿಸಿದೆ ಎಂದು ಸಿಂಗ್ ಹೇಳಿದರು.
ನಿಷ್ಠಾವಂತರಿಗೆ ನಿಗಮ-ಮಂಡಳಿ : ಬಜೆಟ್ ಅಧಿವೇಶನ ಮುಗಿದ ಬಳಿಕ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನ ನೀಡುವಂತೆ ಸಿಂಗ್ ನಾಯಕರಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ. (ಕಾಂಗ್ರೆಸ್ ನಾಯಕರಿಗೆ ಸಿಂಗ್ ನೀತಿ ಪಾಠ)
ಎರಡು ಹುದ್ದೆಯೂ ಇಲ್ಲ : ಪದಾಧಿಕಾರಿ ಹುದ್ದೆಯೊಂದಿಗೆ ಸಚಿವರಾದವರು ಪಕ್ಷದ ಜವಾಬ್ದಾರಿಯಿಂದ ತಕ್ಷಣ ಬಿಡುಗಡೆ ಹೊಂದಿ ಇತರರಿಗೆ ಅವಕಾಶ ಮಾಡಿಕೊಡಬೇಕು. ಸತತ 3 ಸಭೆಗೆ ಗೈರು ಹಾಜರಾದ ಪದಾಧಿಕಾರಿಗಳನ್ನು ವಜಾ ಮಾಡಬೇಕು ಎಂದು ಸಿಂಗ್ ಎಚ್ಚರಿಕೆ ನೀಡಿದ್ದಾರೆ.