ಕಸಮುಕ್ತ ಬೆಂಗಳೂರು ಓಕೆ, ಐಟಿಸಿ ಏಕೆ?
ಸೋಮವಾರ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಕಸ ವಿಲೇವಾರಿ ಸಂಬಂಧ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಸ ವಿಲೇವಾರಿಗೆ ಡಂಪಿಂಗ್ ಯಾರ್ಡ್ ಸಮಸ್ಯೆ ಸೃಷ್ಟಿಯಾಗಿದೆ. ಹೀಗಾಗಿ ಪ್ರಸ್ತುತ ಇರುವ ಸ್ಥಳಗಳಲ್ಲಿ ವಿಲೇವಾರಿ ಮಾಡಬೇಕಿದೆ ಎಂದರು.
ಐಟಿಸಿ ಕಂಪೆನಿ ನಗರದ 12 ವಾರ್ಡ್ ಗಳಲ್ಲಿ ಉಚಿತವಾಗಿ ಕಸ ವಿಂಗಡಣೆಗೆ ಸಮ್ಮತಿಸಿದ್ದು, ಶೀಘ್ರದಲ್ಲಿ 22 ವಾರ್ಡ್ ಗಳಲ್ಲಿ ಇದೇ ರೀತಿ ಯೋಜನೆ ಆರಂಭಿಸಲಾಗುವುದು, ಇದರಿಂದ 34 ವಾರ್ಡ್ ಗಳು ಕಸದ ಸಮಸ್ಯೆಯಿಂದ ಮುಕ್ತವಾಗಲಿವೆ ಮುಂದೆ ಇದೇ ಮಾದರಿ ಎಲ್ಲಾ 198 ವಾರ್ಡ್ ಗಳಲ್ಲೂ ಯೋಜನೆ ಮುಂದುವರೆಸಲಾಗುತ್ತದೆ ಎಂದಿದ್ದರು.
ನಗರದಲ್ಲಿ ಪ್ರತಿದಿನ 5 ಸಾವಿರ ಮೆಟ್ರಿಕ್ ಟನ್ ಕಸ ಉತ್ಪತ್ತಿ ಆಗುತ್ತಿದ್ದು, ಇದನ್ನು ಪರಿಹರಿಸಲು ಕ್ರಮ ಕೈಗೊಳ್ಳುತ್ತೇವೆ. ರದ್ದಿ ಆಯುವವರ ಜೀವನೋಪಾಯ ಸುಧಾರಣೆಗಾಗಿ ಐಟಿಸಿ ಯೋಜನೆ ಹಮ್ಮಿಕೊಂಡಿದ್ದು ಬಿಬಿಎಂಪಿ ಕೂಡಾ ಇದೆ ಕೈಜೋಡಿಸಿ ಎಂದು ಸಚಿವರು ಹೇಳಿದ್ದರು.
ಕಸ ವಿಲೇವಾರಿಗಾಗಿ ಭೂಮಿ ಸ್ವಾಧೀನಕ್ಕೆ ಸುಪ್ರೀಂ ಕೋರ್ಟ್ ವಿರೋಧ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಕಸದ ಸಮಸ್ಯೆ ಸೃಷ್ಟಿಯಾಗಿದ್ದು ನಾಗರಿಕರು ತ್ಯಾಜ್ಯ ವಿಲೇವಾರಿಗೆ ಸಹಕರಿಸಬೇಕೆಂದು ಬೆಂಗಳೂರು ಉಸ್ತುವಾರಿ ಹಾಗೂ ಸಚಿವ ರಾಮಲಿಂಗಾರೆಡ್ಡಿ ಮನವಿ ಮಾಡಿದ್ದಾರೆ.
ಕಸ ಮುಕ್ತ ಬೆಂಗಳೂರು ಮಾಡುವುದು ಒಳ್ಳೆ ಯೋಜನೆ ಆದರೆ, ಐಟಿಸಿ ಇದರಲ್ಲಿ ಭಾಗಿಯಾದರೆ ಪರೋಕ್ಷವಾಗಿ ತಂಬಾಕು ಉತ್ಪನ್ನಗಳಿಗೆ ಪ್ರಚಾರ ಸಿಗುತ್ತದೆ. ಹೀಗಾಗಿ ಬಿಬಿಎಂಪಿ ಈ ಕೂಡಲೇ ಯೋಜನೆಯಿಂದ ಐಟಿಸಿಯನ್ನು ಬೇರ್ಪಡಿಸಬೇಕು ಎಂದು Consortium for Tobacco-Free Karnataka (CFTFK) ಆಗ್ರಹಿಸಿದೆ.
2010ರಲ್ಲಿ ಸರ್ಕಾರಿ ಕಾರ್ಯಕ್ರಮವೊಂದಕ್ಕೆ ಇಂಡಿಯನ್ ಟೊಬ್ಯಾಕೋ ಬೋರ್ಡ್ ಪ್ರಾಯೋಜಕತ್ವವನ್ನು ರದ್ದುಗೊಳಿಸುವಂತೆ ಹೈಕೋರ್ಟ್ ಆದೇಶ ನೀಡಿತ್ತು. ಅದರಂತೆ ಐಟಿಸಿ ಕೂಡಾ ತಂಬಾಕು ಉತ್ಪನ್ನಗಳ ಕುರಿತದ (Prohibition of Advertisement and Regulation of Trade and Commerce, Production, Supply and Distribution) ಕಾಯ್ದೆ ಸೆಕ್ಷನ್ 5 ರ ನಿಯಮ ಮೀರಿದೆ. ಹೀಗಾಗಿ ಐಟಿಸಿಯನ್ನು ದೂರ ಇಡಿ ಎಂದು CFTFK ಹೇಳಿದೆ.