ಹಾರ, ತುರಾಯಿ, ಸನ್ಮಾನ ಬೇಡವೆಂದ ಸಿಎಂ!
ಬೆಂಗಳೂರಿನಲ್ಲಿ ಸೋಮವಾರ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಯಾವುದೇ ಸಭೆ ಮತ್ತು ಸಮಾರಂಭಗಳಲ್ಲಿ ಇನ್ನು ಮುಂದೆ ನಾನು ಸನ್ಮಾನ ಮಾಡಿಸಿಕೊಳ್ಳುವುದಿಲ್ಲ ಎಂದು ಘೋಷಿಸಿದರು. ಜೊತೆಗೆ ಸನ್ಮಾನಕ್ಕಾಗಿ ಸಾವಿರಾರು ರೂ.ಹಣವನ್ನು ಖರ್ಚು ಮಾಡಬೇಡಿ ಎಂದು ಸೂಚಿಸಿದರು.
ಸೋಮವಾರ ಜನತಾ ದರ್ಶನದ ವೇಳೆ, ಪಕ್ಷದ ಕೆಲವು ಕಾರ್ಯಕರ್ತರು ಸಿಎಂ ಅವರಿಗೆ ಸನ್ಮಾನ ಮಾಡಲು ಮುಂದಾದಾಗ, ಸಿಎಂ ಈ ನಿರ್ಧಾರ ಕೈಗೊಂಡಿದ್ದಾರೆ. ಹಾರ, ತುರಾಯಿ ಹಿಡಿದು ಬಂದ ಅವರತ್ತ ಕೋಪದ ನೋಟ ಬೀರಿದ್ದಾರೆ.
ಹಾರ, ಶಾಲು ಎಂದು ಸಾವಿರಾರು ರೂ.ಗಳನ್ನು ಖರ್ಚು ಮಾಡಬೇಡಿ. ಅದೇ ಹಣವನ್ನು ಬಡ ಜನರಿಗೆ ನೀಡಿ ಅವರು ಒಂದು ಹೊತ್ತಿನ ಊಟ ಮಾಡುತ್ತಾರೆ. ನನಗೆ ಮುಂದೆ ಯಾವುದೇ ಸನ್ಮಾನ ಮಾಡಬಾರದು ಎಂದು ಸಿಎಂ ಅಪ್ಪಣೆ ಹೊರಡಿಸಿದ್ದಾರೆ.
ಕಾಲಿಗೂ ಬೀಳುವಂತಿಲ್ಲ : ಪಕ್ಷದ ಕಾರ್ಯಕರ್ತರು ಮತ್ತು ಜನರು ತಮ್ಮ ಕಾಲಿಗೆ ಬೀಳಬಾರದು ಎಂಬ ಮತ್ತೊಂದು ನಿಯಮವನ್ನು ಸಿದ್ದರಾಮಯ್ಯ ಅಲಿಖಿತವಾಗಿ ಜಾರಿಗೆ ತಂದಿದ್ದಾರೆ. ಜನರ ಸಮಸ್ಯೆ ಹೇಳಿದರೆ, ಅದನ್ನು ಬಗೆಹರಿಸುತ್ತೇನೆ.
ಅದಕ್ಕಾಗಿ ಕಾಲಿಗೆ ಬೀಳುವುದು. ಸನ್ಮಾನ ಮಾಡುವುದು ಮುಂತಾದವುಗಳನ್ನು ಮಾಡಬೇಡಿ ಎಂದು ಸಿಎಂ ಕಾರ್ಯಕರ್ತರಿಗೆ ಮತ್ತು ಜನರಿಗೆ ಸೂಚಿಸಿದ್ದಾರೆ. ಇದರಿಂದ ಮುಂದಿನ ಬಾರಿ ನೀವು ಸಿಎಂ ಭೇಟಿ ಮಾಡಲು ಹೋಗುವಾಗ ಹಾರ ಹಿಡಿದು ಹೋದರೆ ನಿಮಗೆ ನೋ ಎಂಟ್ರಿ.
ಕೆಪಿಸಿಸಿ ಫರ್ಮಾನು : ಉತ್ತರಾಖಂಡ ಪ್ರವಾಹಕ್ಕೆ ಸಿಲುಕಿ ಸಾವಿರಾರು ಜನರು ಮೃತಪಟ್ಟು, ನಿರಾಶ್ರಿತರಾಗಿರುವ ಸಂರ್ಭದಲ್ಲಿ ಮುಖ್ಯಮಂತ್ರಿ ಮತ್ತು ಸಚಿವರು ಸನ್ಮಾನ ಸಮಾರಂಭಗಳಲ್ಲಿ ಭಾಗವಹಿಸಬಾರದು.
ಪಕ್ಷದ ಕಾರ್ಯಕರ್ತರು ಸನ್ಮಾಸ ಸಮಾರಂಭ ನಡೆಸಬಾರದು ಇಂತಹ ಹಣವನ್ನು ಪ್ರವಾಹ ಸಂತ್ರಸ್ತರ ಪರಿಹಾರ ನಿದಿಗೆ ಕೊಡಬೇಕು ಎಂದು ಶನಿವಾರ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಫರ್ಮಾನು ಹೊರಡಿಸಿದ್ದರು.
ಈ ಆದೇಶ ಹೊರಬಂದ ಬಳಿಕ ಸಿಎಂ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿಸುವುದಿಲ್ಲ ಎಂದು ಘೋಷಿಸಿದ್ದಾರೆ. ಸೋ ಸಿಎಂ ಅವರನ್ನು ಕಾರ್ಯಕ್ರಮಕ್ಕೆ ಕರೆದು ನೆನಪಿನ ಕಾಣಿಕೆ ಕೊಡುವ ಮೊದಲು ನೂರು ಬಾರಿ ಆಲೋಚಿಸಿ.