ರುದ್ರಪ್ರಳಯ: ನಮ್ಮ ವೀರಯೋಧರಿಗೊಂದು ಸೆಲ್ಯೂಟ್
ಡೆಹ್ರಾಡೂನ್, ಜೂ 29: ಹಿಮಾಲಯ ಸುನಾಮಿಯಿಂದ ತತ್ತರಿಸಿರುವ ಉತ್ತರಾಖಂಡ ರಾಜ್ಯದಲ್ಲಿ ಇನ್ನೂ ಸಿಲುಕಿರುವ ಸಂತ್ರಸ್ತರನ್ನು ರಕ್ಷಿಸುವ ಕಾರ್ಯವನ್ನು ಭಾರತೀಯ ಸೈನಿಕರು ಮಳೆ, ಚಳಿ, ಹಿಮಪಾತದ ನಡುವೆಯೂ ಭರದಿಂದ ಮುಂದುವರಿಸಿದ್ದಾರೆ.
ಜೀವದ ಹಂಗು ತೊರೆದು ರಕ್ಷಣಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿರುವ ಸೈನಿಕರ ಕಾರ್ಯವೈಖರಿ ವ್ಯಾಪಕ ಪ್ರಶಂಸನೆಗೆ ಒಳಗಾಗಿದೆ. ಸಂತ್ರಸ್ತರಿಗೆ ಧೈರ್ಯ ತುಂಬುವ ಕೆಲಸವನ್ನೂ ಸೈನಿಕರು ಮಾಡುತ್ತಿದ್ದಾರೆ.
ಉತ್ತರಾಖಂಡ ಸರಕಾರದ ಹೇಳಿಕೆಯ ಪ್ರಕಾರ ಇನ್ನೂ ಮೂರು ಸಾವಿರ ಮಂದಿ ಪತ್ತೆಯಾಗಿಲ್ಲ. ಇದುವರೆಗೆ ಸೈನಿಕರು ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಅಧಿಕ ಯಾತ್ರಾರ್ಥಿಗಳನ್ನು ರಕ್ಷಿಸಿದ್ದಾರೆ.
ಮೃತ ದೇಹಗಳಿಂದಾಗಿ ಸಾಂಕ್ರಾಮಿಕ ರೋಗ ಹರಡುತ್ತಿದ್ದು, ಕೇದಾರನಾಥದಲ್ಲಿ ಮೃತ ದೇಹಗಳ ಸಾಮೂಹಿಕ ಅಂತ್ಯಕ್ರಿಯೆ ಮಾಡಲಾಗಿದೆ.
ಉತ್ತರಾಖಂಡ ಜಲಪ್ರಳಯ
ಪ್ರವಾಹದ ಭೀತಿ ಇನ್ನೂ ಮಾಸುವ ಮುನ್ನವೇ ಮತ್ತೆ ಶುಕ್ರವಾರದಿಂದ ಉತ್ತರಕಾಶಿಯಲ್ಲಿ ಮತ್ತೆ ಪ್ರವಾಹದ ಭೀತಿ ಉಂಟಾಗಿದೆ. ಭಾರೀ ಮಳೆಯಿಂದ ಭಾಗೀರಥಿ ನದಿಯಲ್ಲಿ ನೀರು ಅಕ್ಕಪಕ್ಕ ಪ್ರದೇಶಗಳ ಕಟ್ಟಡಗಳಿಗೆ ನುಗ್ಗತೊಡಗಿದೆ.
ಇನ್ನೂ 1500 ಮಂದಿ ಅತಂತ್ರ
ಹದಿಮೂರು ದಿನಗಳ ಬಳಿಕ ಜಲಪ್ರಳದಲ್ಲಿ ಸಿಕ್ಕವರನ್ನು ರಕ್ಷಿಸುವ ಕಾರ್ಯಾಚರಣೆ ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿದೆ. ಹರ್ಶಿಲ್ ಸೆಕ್ಟರ್ ಎನ್ನುವ ಪ್ರದೇಶದಲ್ಲಿ ಸಿಲುಕಿರುವ ಎಲ್ಲರನ್ನೂ ರಕ್ಷಿಸಲಾಗಿದೆ ಎಂದು ಸೇನೆ ಹೇಳಿಕೊಂಡಿದೆ. ಆದರೆ ಬದರೀನಾಥದಲ್ಲಿ ಇನ್ನೂ 1500 ಮಂದಿ ಸಿಲುಕಿ ಕೊಂಡಿದ್ದಾರೆ.
ಹಿರಿಯ ಸೇನಾಧಿಕರಿಗಳ ಸಾಥ್
ಜೀವನ್ಮರಣದ ಭಯದಲ್ಲಿರುವ ಯಾತ್ರಾರ್ಥಿಗಳಿಗೆ ಧೈರ್ಯ ತುಂಬುವ ಕೆಲಸಕ್ಕೆ ಸೈನಿಕರು ಮುಂದಾಗಿದ್ದಾರೆ. ಅವರ ಜೊತೆ ಹೆಜ್ಜೆ ಹಾಕಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಸೇನೆಯ ಕೆಲವು ಹಿರಿಯ ಅಧಿಕಾರಿಗಳು ಯಾತ್ರಾರ್ಥಿಗಳಿಗೆ ಸಾಥ್ ನೀಡುತ್ತಿದ್ದಾರೆ.
ಕಾಪ್ಟರ್ ದುರಂತದಲ್ಲಿ ಮಡಿದವರಿಗೆ ವಂದನೆ
ರಕ್ಷಣಾ ಕಾರ್ಯದಲ್ಲಿ ತೊಡಗಿದ್ದ ಹೆಲಿಕಾಪ್ಟರ್ ದುರಂತದಲ್ಲಿ ಸಾವನ್ನಪ್ಪಿದ ಇಪ್ಪತ್ತು ಯೋಧರಿಗೆ ಗೃಹ ಸಚಿವ, ಭೂಸೇನಾ ಪಡೆಯ ಮುಖ್ಯಸ್ಥ ಮತ್ತು ಉತ್ತರಾಖಂಡ ಮುಖ್ಯಮಂತ್ರಿ ಅಂತಿಮ ವಂದನೆ ಸಲ್ಲಿಸಿದ್ದಾರೆ.
ಮೃತಪಟ್ಟ ಯೋಧರಿಗೆ ಸೈನಿಕರ ವಂದನೆ
ಮೃತಪಟ್ಟ ಯೋಧರಿಗೆ ಸೈನಿಕರು ಅಂತಿಮ ವಂದನೆ ಸಲ್ಲಿಸಿ ಸಾಮೂಹಿಕ ಅಂತ್ಯಸಂಸ್ಕಾರ ನಡೆಸಿದ್ದಾರೆ.
ನೆರೆ ಪರಿಹಾರ
ಉತ್ತರಾಖಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕೋಲ್ ಇಂಡಿಯಾ ಸಂಸ್ಥೆ ಐವತ್ತು ಕೋಟಿ ಪರಿಹಾರದ ಚೆಕ್ ಅನ್ನು ಸಿಎಂ ಬಹುಗುಣಗೆ ನೀಡಿದೆ.