ಡಾ. ಮಂಜುನಾಥ್ ರಿಂದ ಡಾಕ್ಟರೇಟ್ ನಿರಾಕರಣೆ
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ.ಮಂಜುನಾಥ್ ಗೌರವ ಡಾಕ್ಟರೆಟ್ಗೆ ಎಲ್ಲ ರೀತಿಯಿಂದಲೂ ಅರ್ಹರಾದರೂ ಮೈಸೂರು ವಿವಿ ಕುಲಪತಿ ಡಾ.ಕೆ.ಎಸ್. ರಂಗಪ್ಪ ಅವರ ಬೀಗರು ಎಂಬ ಕಾರಣಕ್ಕಾಗಿ ಟೀಕೆ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಅವರು ಡಾಕ್ಟರೇಟ್ ಸ್ವೀಕರಿಸಲು ನಿರಾಕರಿಸಿರುವುದಾಗಿ ವಿವಿ ಮೂಲಗಳು ಖಚಿತಪಡಿಸಿವೆ.
ಮಂಜುನಾಥ್ ಅವರ ಹೆಸರನ್ನು ರಂಗಪ್ಪ ಅವರು ಪ್ರಸ್ತಾಪಿಸಿದರೂ ಸಿಂಡಿಕೇಟ್ ಸಭೆಯಲ್ಲಿ ಯಾರೊಬ್ಬರೂ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿಲ್ಲ ಏಕೆ? ವಿವಿ ಕುಲಪತಿ ರಾಜ್ಯಪಾಲರು ಕೂಡಾ ಪೂರ್ವಾಪರ ತಿಳಿಯದೆ ಅಂಕಿತ ಹಾಕಿ ಕಳಿಸಿದರೆ? ಎಂಬ ಪ್ರಶ್ನೆಗಳು ಹಾಗೆ ಉಳಿಯುತ್ತದೆ.
ಡಾ. ಮಂಜುನಾಥ್ ಅವರ ಪುತ್ರಿಗೆ ಪ್ರೊ. ರಂಗಪ್ಪ ಅವರ ಪುತ್ರನನ್ನು ಕೊಟ್ಟು ಕಳೆದ ಫೆಬ್ರವರಿಯಲ್ಲಿ ಮದುವೆ ಮಾಡಲಾಗಿತ್ತು. ದೇವೇಗೌಡರ ಅಳಿಯ ಡಾ. ಮಂಜುನಾಥ್ ಅವರಿಗೆ 2011ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದಿಂದ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗಿದೆ.
ಶ್ರೀಗಳಿಂದಲೂ ನಿರಾಕರಣೆ: ಈ ನಡುವೆ ಬೆಂಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಗೆ ತಮ್ಮ ಹೆಸರು ಶಿಫಾರಸು ಮಾಡದಂತೆ ಆದಿಚುಂಚನಗಿರಿ ಮಠಾಧೀಶ ನಿರ್ಮಲಾನಂದನಾಥ ಸ್ವಾಮೀಜಿ ವಿವಿಗೆ ತಿಳಿಸಿದ್ದಾರೆ. ತಮಗಿಂತ ಹಿರಿಯರು ಹಾಗೂ ಸಾಧಕರು ಬಹಳಷ್ಟು ಜನರಿದ್ದು, ತಾವಿನ್ನೂ ಸಾಧಿಸಬೇಕಾದ್ದು ಸಾಕಷ್ಟಿದೆ. ಈಗಲೇ ಗೌರವ ಡಾಕ್ಟರೇಟ್ ಸ್ವೀಕರಿಸುವುದು ಸರಿಯಲ್ಲ ಹಾಗಾಗಿ ತಮ್ಮ ಹೆಸರನ್ನು ಗೌರವ ಡಾಕ್ಟರೆಟ್ ಗೆ ಶಿಫಾರಸು ಮಾಡುವುದು ಬೇಡ ಅವರು ಸಲಹೆ ನೀಡಿರುವುದಾಗಿ ವಿವಿ ಮೂಲಗಳು ಹೇಳಿವೆ.
ಮಾಜಿ ಕ್ರಿಕೆಟ್ ಆಟಗಾರ ಅನಿಲ್ ಕುಂಬ್ಳೆ, ಏರೋನಾಟಿಕಲ್ ವಿಜ್ಞಾನಿ ರೊದ್ದಮ್ ನರಸಿಂಹ, ಹೃದಯ ತಜ್ಞ ಡಾ. ಎನ್ ಮಂಜುನಾಥ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೂ. ರಂಗಸ್ವಾಮಿ, ಕಾನೂನು ತಜ್ಞ ಟಿ.ಕೆ ವಿಶ್ವನಾಥನ್ ಅವರಿಗೆ ಜು.5 ರಂದು ನಡೆಯುವ 93ನೇ ವಿವಿ ಘಟಿಕೋತ್ಸವ ಸಮಾರಂಭದಲ್ಲಿ ಪ್ರದಾನ ಮಾಡಲಾಗುತ್ತದೆ ವಿವಿ ಪ್ರಕಟಿಸಿದೆ.