ಕರ್ನಾಟಕದಲ್ಲಿ ಎಫ್ ಡಿಐಗೆ ಬಾಗಿಲು ತೆರೆದ ಸಿಎಂ!
ನವದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಹಣಕಾಸು ಸಚಿವ ಪಿ.ಚಿದಂಬಂರಂ ಜೊತೆಗಿನ ಮಾತುಕತೆಯ ಬಳಿಕ, ಬಹು ಬ್ರಾಂಡ್ ಚಿಲ್ಲರೆ ಮಾರಾಟ ಕ್ಷೇತ್ರದಲ್ಲಿ ಶೇ 51ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗೆ ಕರ್ನಾಟಕದಲ್ಲಿ ಅವಕಾಶ ನೀಡಿದ್ದಾರೆ.
ಕೇಂದ ಸರ್ಕಾರ ಕಳೆದ ವರ್ಷದ ಸೆಪ್ಟೆಂಬರ್ ಬಲ್ಲಿ ಚಿಲ್ಲರೆ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅವಕಾಶ ಕಲ್ಪಿಸಿತ್ತು. ಅದರಂತೆ 11 ರಾಜ್ಯಗಳನ್ನು ಎಫ್.ಡಿ.ಐಗೆ ಅವಕಾಶ ನೀಡಿದ್ದವು. ಕರ್ನಾಟಕ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅವಕಾಶ ನೀಡಿರುವ 12ನೇ ರಾಜ್ಯವಾಗಿದೆ ಎಂದು ಕೇಂದ್ರ ಕೈಗಾರಿಕಾ ಇಲಾಖೆ ಕಾರ್ಯದರ್ಶಿ ಸೌರಭ್ ಚಂದ್ರ ತಿಳಿಸಿದ್ದಾರೆ.
ಯಾವ ಜಿಲ್ಲೆಗಳಲ್ಲಿ ಜಾರಿ : ಕೇಂದ್ರ ಸರ್ಕಾರ ಎಫ್.ಡಿ.ಐಗೆ ಅವಕಾಶ ನೀಡುವ ಸಂದರ್ಭದಲ್ಲಿ 10 ಲಕ್ಷ ಮತ್ತು ಅದಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ನಗರಗಳಲ್ಲಿ ಮಾತ್ರ ವಿದೇಶಿ ಕಂಪನಿಗಳು ಮಳಿಗೆಗಳನ್ನು ಆರಂಭಿಸಬಹುದು ಎಂಬ ಷರತ್ತು ವಿಧಿಸಿತ್ತು.
ಕರ್ನಾಟಕದಲ್ಲಿ ಬೆಂಗಳೂರು, ಮೈಸೂರು, ಹುಬ್ಬಳ್ಳಿ-ಧಾರವಾಡ, ಮಂಗಳೂರು ಮತ್ತು ಗುಲ್ಬರ್ಗಾ ಜಿಲ್ಲೆಗಳಲ್ಲಿ 10 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಜನಸಂಖ್ಯೆ ಇದೆ. ಆದ್ದರಿಂದ ಎಫ್.ಡಿ.ಐ ಮೂಲಕ ವಿದೇಶಿ ಕಂಪನಿಗಳು ಈ ಜಿಲ್ಲೆಗಳಲ್ಲಿ ಮಾತ್ರ ತಮ್ಮ ಮಳಿಗೆಗಳನ್ನು ಪ್ರಾರಂಭಿಸಬಹುದಾಗಿದೆ.
ಏನಿದು ಬಹುಬ್ರಾಂಡ್ ರಿಟೇಲ್ : ಪ್ರಸ್ತುತ ವಿದೇಶಿ ಕಂಪನಿಗಳು ಮಳಿಗೆ ತೆರೆದು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶವಿದೆ. ಆದರೆ, ಬಹುಬ್ರಾಂಡ್ ರಿಟೇಲ್ ಗಳಿಗೆ ಅವಕಾಶ ಕಲ್ಪಿಸಿದ್ದರಿಂದ ಕಿರಾಣಿ ಅಂಗಡಿ ನಡೆಸುತ್ತಿರುವ ಸುಮಾರು 2.5 ಲಕ್ಷ ಜನರಿಗೆ ತೊಂದರೆ ಉಂಟಾಗಲಿದೆ.
ಹೇರ್ ಪಿನ್ ನಿಂದ ಮೊಬೈಲ್ ಫೋನ್ ವರಗೆ ಎಲ್ಲಾ ವಸ್ತುಗಳನ್ನು ವಿದೇಶಿ ಕಂಪನಿಗಳು ಒಂದೇ ಮಳಿಗೆಯಲ್ಲಿ ಮಾರಾಟ ಮಾಡುತ್ತವೆ. ಇದರಿಂದ ಚಿಲ್ಲರೆ ಅಂಗಡಿ ನಂಬಿ ಬದುಕು ನಡೆಸುತ್ತಿರುವ ಜನರು ಸಂಕಷ್ಟಕ್ಕೆ ಸಿಲುಕಲಿದ್ದಾರೆ. (ಎಫ್ ಡಿಐ ನಿಂದ ಲಾಭವೋ? ನಷ್ಟವೋ?)
ಪ್ರತಿಕ್ರಿಯೆ ತಿಳಿಸಿ : ವಿದೇಶಿ ನೇರ ಬಂಡವಾಳ ಹೂಡಿಕೆಗೆ ರಾಜ್ಯದಲ್ಲಿ ಅನುಮತಿ ನೀಡಿದರೆ, ಕೃಷಿ ಮತ್ತು ವಾಣಿಜ್ಯ ಕ್ಷೇತ್ರದ ಮೇಲೆ ಅಗಾಧ ಪರಿಣಾಮ ಬೀರಲಿದೆ ಎಂದು ಜನರು ಪ್ರತಿಭಟನೆ ನಡೆಸಿದ್ದರು. ಸರ್ಕಾರ ಜನರ ವಿರೋಧದ ನಡುವೆಯೇ ಎಫ್.ಡಿ.ಐಗೆ ಅನುಮತಿ ನೀಡಿದೆ ಈ ಕುರಿತು ನಿಮ್ಮ ಅಭಿಪ್ರಾಯವನ್ನು ತಿಳಿಸಿ.