ಡಾ. ಮಂಜುನಾಥ್ ಗೇಕೆ ವಿವಿ ಡಾಕ್ಟರೇಟ್ ?
ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಕೆಎಸ್ ರಂಗಪ್ಪ ಅವರ ಬೀಗರಾದ ಡಾ. ಮಂಜುನಾಥ್ ಹೆಸರು ಪಟ್ಟಿಯಲ್ಲಿ ಸೇರಿರುವ ಬಗ್ಗೆ ಆಕ್ಷೇಪ ಕೇಳಿ ಬಂದಿದೆ. ಪ್ರೊ. ರಂಗಪ್ಪ ಅವರ ನೇಮಕಾತಿ ಹಿಂದೆ ಮಾಜಿ ಪ್ರಧಾನಿ ದೇವೇಗೌಡ ಅವರ ಕೈವಾಡ ಇದೆ ಎಂಬ ಲೇಖನ ಈ ಹಿಂದೆ ಓದಿದ್ದು ನಿಮಗೆ ನೆನಪಿರಬಹುದು.
ಮೈಸೂರು ವಿವಿಯ ಗೌರವ ಡಾಕ್ಟರೇಟ್ ಪಡೆಯಲು ಜಯದೇವ ಆಸ್ಪತ್ರೆ ಮುಖ್ಯಸ್ಥ ಡಾ. ಮಂಜುನಾಥ್ ಅವರು ಸಂಪೂರ್ಣವಾಗಿ ಅರ್ಹರಾಗಿದ್ದಾರೆ. ಪದ್ಮಶ್ರೀ ಪ್ರಶಸ್ತಿ ವಿಜೇತ ಮಂಜುನಾಥ್ ಅವರು ನಾಡಿನ ಖ್ಯಾತ, ನುರಿತ ಹೃದ್ರೋಗ ತಜ್ಞರಲ್ಲಿ ಒಬ್ಬರು.
ಆದರೆ, ಪ್ರೊ. ರಂಗಪ್ಪ ಅವರ ಸ್ವಜನ ಹಿತಾಸಕ್ತಿ ಇಲ್ಲಿ ಪ್ರಶ್ನೆಯಾಗಿದೆ. ಮಂಜುನಾಥ್ ಅವರ ಹೆಸರನ್ನು ರಂಗಪ್ಪ ಅವರು ಪ್ರಸ್ತಾಪಿಸಿದರೂ ಸಿಂಡಿಕೇಟ್ ಸಭೆಯಲ್ಲಿ ಯಾರೊಬ್ಬರೂ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿಲ್ಲ ಏಕೆ? ವಿವಿ ಕುಲಪತಿ ರಾಜ್ಯಪಾಲರು ಕೂಡಾ ಪೂರ್ವಾಪರ ತಿಳಿಯದೆ ಅಂಕಿತ ಹಾಕಿ ಕಳಿಸಿದರೆ? ಎಂಬ ಪ್ರಶ್ನೆಗಳು ಹಾಗೆ ಉಳಿಯುತ್ತದೆ.
ಡಾ. ಮಂಜುನಾಥ್ ಅವರ ಪುತ್ರಿಗೆ ಪ್ರೊ. ರಂಗಪ್ಪ ಅವರ ಪುತ್ರನನ್ನು ಕೊಟ್ಟು ಕಳೆದ ಫೆಬ್ರವರಿಯಲ್ಲಿ ಮದುವೆ ಮಾಡಲಾಗಿತ್ತು. ದೇವೇಗೌಡರ ಅಳಿಯ ಡಾ. ಮಂಜುನಾಥ್ ಅವರಿಗೆ 2011ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದಿಂದ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗಿದೆ.
ರಂಗಪ್ಪ ನೇಮಕ ವಿವಾದ?: ಪ್ರೊ.ಕೆ.ಎಸ್. ರಂಗಪ್ಪ ಅವರನ್ನು ಕುಲಪತಿಯನ್ನಾಗಿ ನೇಮಕ ಮಾಡುವ ವಿಚಾರದಲ್ಲಿ ಸರ್ಕಾರ ಮತ್ತು ರಾಜ್ಯಪಾಲರ ನಡೆ ಬಗ್ಗೆ ಸಂಶಯಗಳು ವ್ಯಕ್ತವಾಗಿತ್ತು.
ಶೋಧನಾ ಸಮಿತಿ ಸಭೆಯಲ್ಲಿ ಪ್ರೊ.ರಂಗಪ್ಪ, ಪ್ರೊ.ಎನ್.ಎಸ್. ಅಶೋಕಕುಮಾರ್, ಪ್ರೊ.ಜಿ.ಕೆ. ಕಾರಂತ್ ಹಾಗೂ ಪ್ರೊ. ಮೇವಾ ಸಿಂಗ್ ಹೆಸರುಗಳು ಪ್ರಸ್ತಾಪವಾಗಿದ್ದವು. ರಂಗಪ್ಪ ಹೆಸರನ್ನು ಶಿಫಾರಸು ಮಾಡುವ ಸಂಬಂಧ ಪರ - ವಿರೋಧದ ಅಭಿಪ್ರಾಯಗಳು ವ್ಯಕ್ತವಾಗಿದ್ದವು.ಸಹಮತ ವ್ಯಕ್ತವಾಗಿರಲಿಲ್ಲ
ಕರ್ನಾಟಕ ವಿಶ್ವವಿದ್ಯಾಲಯ ಕಾಯ್ದೆ- 2000 ಪ್ರಕಾರ ಎರಡನೇ ಬಾರಿಗೆ ಕುಲಪತಿ ಹುದ್ದೆ ಹೊಂದಲು ಅವಕಾಶವಿಲ್ಲ. ಆದರೆ, ಈ ಕಾಯ್ದೆ ಕರ್ನಾಟಕ ರಾಜ್ಯ ಮುಕ್ತವಿಶ್ವವಿದ್ಯಾಲಯಕ್ಕೆ ಅನ್ವಯವಾಗುವುದಿಲ್ಲ. ಹೀಗಾಗಿ ಮುಕ್ತ ವಿ.ವಿ.ಯಲ್ಲಿ ರಂಗಪ್ಪ ಅವರು ಕುಲಪತಿಯಾಗಿ ಕಾರ್ಯನಿರ್ವಹಿಸಿದ ಅವಧಿಯನ್ನು ರಾಜ್ಯಪಾಲರು ಗಣನೆಗೆ ತೆಗೆದುಕೊಂಡಿರಲಿಕ್ಕಿಲ್ಲ' ಎಂದು ಶಿಕ್ಷಣ ತಜ್ಞರೊಬ್ಬರು ಹೇಳಿದ್ದಾರೆ.
ಮೈಸೂರಿನ ಯುವರಾಜ ಕಾಲೇಜಿನಲ್ಲಿ ತಮ್ಮ ಪುತ್ರನಿಗೆ ಅಕ್ರಮವಾಗಿ ಸೀಟು ಕೊಡಿಸಿದ ಆರೋಪ ರಂಗಪ್ಪ ಅವರ ಮೇಲಿದೆ. ಆದರೆ, ನಂತರ ಕೇಸು ಮುಗಿದು ಕನ್ನಡದ ಪ್ರಮುಖ ದಿನಪತ್ರಿಕೆ ಮೇಲೆ 5 ಕೋಟಿ ಮಾನಹಾನಿ ನಷ್ಟ ಹೂಡಿದರು.
ಮಾಜಿ ಕ್ರಿಕೆಟ್ ಆಟಗಾರ ಅನಿಲ್ ಕುಂಬ್ಳೆ, ಏರೋನಾಟಿಕಲ್ ವಿಜ್ಞಾನಿ ರೊದ್ದಮ್ ನರಸಿಂಹ, ಹೃದಯ ತಜ್ಞ ಡಾ. ಎನ್ ಮಂಜುನಾಥ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೂ. ರಂಗಸ್ವಾಮಿ, ಕಾನೂನು ತಜ್ಞ ಟಿ.ಕೆ ವಿಶ್ವನಾಥನ್ ಅವರಿಗೆ ಜು.5 ರಂದು ನಡೆಯುವ 93ನೇ ವಿವಿ ಘಟಿಕೋತ್ಸವ ಸಮಾರಂಭದಲ್ಲಿ ಪ್ರದಾನ ಮಾಡಲಾಗುತ್ತದೆ ವಿವಿ ಪ್ರಕಟಿಸಿದೆ.