ನೈಸ್ ವಿರುದ್ಧ ಲೋಕಾಯುಕ್ತ ತನಿಖೆ ರದ್ದು
ಪೊಲೀಸ್ ಅಧಿಕಾರಿಗಳಾದ ಲೋಕೇಶ್ ಮತ್ತು ನಿಜಾಮುದ್ದಿನ್ ಅವರನ್ನೊಳಗೊಂಡಿದ್ದ ಡಿವೈಎಸ್ ಪಿ ಫಾಲಾಕ್ಷಯ್ಯ ಅವರ ನೇತೃತ್ವದ ವಿಶೇಷ ತಂಡದ ತನಿಖೆ ಈ ಕೂಡಲೇ ನಿಲ್ಲಿಸುವಂತೆ ಹೈಕೋರ್ಟ್ ಏಕ ಸದಸ್ಯ ಆದೇಶ ನೀಡಿದೆ. ಇದರ ಜೊತೆಗೆ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಸಂಗ್ರಹಿಸಿದ ಶುಲ್ಕ ಮುಟ್ಟುಗೋಲು ಹಾಕಿಕೊಳ್ಳುವಂತೆ ಲೋಕಾಯುಕ್ತ ಕೋರ್ಟ್ ನೀಡಿದ ಆದೇಶ [ಆದೇಶದ ಸಂಪೂರ್ಣ ವಿವರ ಇಲ್ಲಿ ಓದಿ]ಕ್ಕೆ ಹೈಕೋರ್ಟ್ ತಡೆ ನೀಡಿದೆ.
ಬೆಂಗಳೂರು ಮೈಸೂರು ಹೆದ್ದಾರಿ ಯೋಜನೆಯಲ್ಲಿ ರೈತರಿಗೆ ಅನ್ಯಾಯ ಮಾಡಲಾಗಿದೆ, ಭೂ ಅಕ್ರಮ ಎಸಗಲಾಗಿದೆ ಎಂದು ಆರೋಪಿಸಿ ಮಾಜಿ ಪ್ರಧಾನಿ, ನೈಸ್ ಚೇರ್ಮನ್, ಮಾಜಿ ಮುಖ್ಯಮಂತ್ರಿಗಳು, ಹಲವು ಪಕ್ಷಗಳ ನಾಯಕರು ಸೇರಿದಂತೆ 102 ಜನರ ವಿರುದ್ಧ ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ ಅವರು ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದರು.
ಆರೋಪದ ವಿವರಣೆ: 1995 ರಲ್ಲಿ ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯ ಸರ್ಕಾರ ಹಾಗೂ ನೈಸ್ ಸಂಸ್ಧೆಯ ನಾಲ್ವರು ನಿದೇರ್ಶಕರ ಜತೆ ಒಡಂಬಡಿಕೆಯಾಗಿತ್ತು. ಆಗ ಈ ಯೋಜನೆಗೆ 522 ಕೋಟಿ ರೂಪಾಯಿ ಬಂಡವಾಳ ತೊಡಗಿಸುವುದಾಗಿ ನೈಸ್ ಸಂಸ್ಧೆ ಹೇಳಿಕೊಂಡಿತ್ತು. ಉಳಿದ 1500 ಕೋಟಿ ರೂಪಾಯಿ ಹಣವನ್ನು ಬ್ಯಾಂಕ್ ಸಾಲದ ಮೂಲಕ ಯೋಜನೆಗೆ ಹಣ ಹೊಂದಿಸುವ ಭರವಸೆ ನೀಡಲಾಯಿತು.
ಆದರೆ, ನೈಸ್ ಸಂಸ್ಧೆಗೆ ಭೂ ಸ್ವಾಧೀನಕ್ಕಾಗಿ ಕೆಐಎಡಿಬಿಗೆ ನೀಡಲು ಹತ್ತು ಕೋಟಿ ರೂಪಾಯಿ ಹಣ ಇರಲಿಲ್ಲ. ಆಗ ಸರ್ಕಾರದ ಬಳಿ ಇದ್ದ 1,913 ಎಕರೆ ಭೂಮಿಯನ್ನು ಪ್ರತಿ ಎಕರೆಗೆ ಹತ್ತು ರೂಪಾಯಿಯಂತೆ ಗುತ್ತಿಗೆ ಆಧಾರದ ಮೇಲೆ ಪಡೆದುಕೊಂಡು ಐಸಿಐಸಿ ಬ್ಯಾಂಕ್ ನಲ್ಲಿ ಒತ್ತೆ ಇಟ್ಟು 150 ಕೋಟಿ ರೂಪಾಯಿ ಸಾಲ ಪಡೆಯಲಾಗಿತ್ತು.
ಈ 150 ಕೋಟಿ ರೂಪಾಯಿ ಹಣದಲ್ಲಿ ಕೆಐಎಡಿಬಿಗೆ 2003 ರಲ್ಲಿ 10 ಕೋಟಿ ರೂಪಾಯಿ ಹಣವನ್ನು ಠೇವಣಿ ರೂಪದಲ್ಲಿ ನೀಡಿತ್ತು. ನಂತರ ಬೆಂಗಳೂರಿನಲ್ಲಿ ಒಟ್ಟಾರೆ 4500 ಎಕರೆ ಭೂಮಿ ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಲಾಯಿತು. ಈ ಭೂಮಿಯನ್ನು ನಂತರ ಕಂಪೆನಿ ಹೆಸರಿಗೆ ನೊಂದಣಿ ಮಾಡಿಸಲಾಯಿತು. ಇದಕ್ಕೆ ಒಂದೇ ಒಂದು ಪೈಸೆಯನ್ನೂ ಸಹ ತೊಡಗಿಸಲಿಲ್ಲ.
1997 ರಲ್ಲಿ ರೈತರಿಂದ ಸ್ವಾಧೀನಪಡಿಸಿಕೊಂಡ ಭೂಮಿಗೆ ಪ್ರತಿ ಎಕರೆಗೆ ರೈತರಿಗೆ ಕೇವಲ 6 ಲಕ್ಷ ರೂಪಾಯಿ ಪರಿಹಾರ ನೀಡಲಾಗಿದೆ. ಇದೇ ಭೂಮಿಯನ್ನು ನೈಸ್ ಸಂಸ್ಧೆ ಪ್ರತಿ ಎಕರೆಗೆ 3.5 ಕೋಟಿ ರೂಪಾಯಿಗೆ ಮಾರಾಟ ಮಾಡಲಾಗಿದೆ ಎಂದು ಅಬ್ರಹಾಂ ದೂರಿದ್ದಾರೆ.
147 ಪುಟಗಳ ದೂರು ಹಾಗೂ 3,368 ಪುಟಗಳಷ್ಟು ದಾಖಲೆಗಳನ್ನು ನ್ಯಾಯಾಲಯಕ್ಕೆ ಒದಗಿಸಲಾಗಿದೆ. ಒಟ್ಟು ಎಂಟು ಬಗೆಯ ಅಕ್ರಮಗಳು ನಡೆದಿದ್ದು, ಯಾವುದೇ ಸರ್ಕಾರ ಈ ಬಗ್ಗೆ ಪರಿಶೀಲನೆ ನಡೆಸಿಲ್ಲ.