ಒಮಾಶ್ರಮ : ಯಾರಿಗೂ ಬೇಡವಾದವರ ಕಥೆ-ವ್ಯಥೆ
ಇದು ಕೇವಲ ಕಥೆಯಲ್ಲ, ಕಲ್ಪನೆಯೂ ಅಲ್ಲ. ಮನಕಲಕುವ ನಿಜವಾದ ಕಥೆ. ನಡೆದಾಡಲು, ಓಡಾಡಲು ಸ್ವತಂತ್ರವಾಗಿ ಬದುಕಲು ಕಲಿಸಿದವರನ್ನು ದೂರವಿಟ್ಟ ಕಥೆ.
ಅವಳಿಗೆ ಕಾಡು ಬಾ ಅನ್ನುತ್ತಿತ್ತು, ಊರು ಹೋಗು ಅನ್ನುತ್ತಿತ್ತು. ವಯಸ್ಸಿನ ಕಾರಣದಿಂದಾಗಿ ಅವಳೆರಡೂ ಕಾಲುಗಳು ಶಕ್ತಿ ಕಳೆದುಕೊಂಡಿದ್ದವು. ಅವಳಿಗೊಬ್ಬ ಮಗನಿದ್ದ. ಆದ್ರೆ ಆ ಪುಣ್ಯಾತ್ಮನಿಗೆ ಈ ಜೀವಕೊಟ್ಟ ತಾಯಿಯೇ ಬೇಡವಾಗಿದ್ದಳು. ಮನೆಗೆ ಬಂದ ಸೊಸೆಯೇ ಗಂಡನಿಂದ ತಾಯಿಯನ್ನು ದೂರ ಮಾಡಿದ್ದಳು. ಹೀಗಾಗಿ ಅವನು ಬೇರೆ ದಾರಿಯಿಲ್ಲದೆ ಎಂಟು ತಿಂಗಳ ಹಿಂದೆ ಈ ಮುದುಕಿಯನ್ನು ವೃದ್ಧಾಶ್ರಮ ಸೇರಿಸಿದ್ದ. ಅವತ್ತೇ ಕೊನೆ ಆತ ಮತ್ತೆಂದೂ ತನ್ನನ್ನು ಸಾಕಿ ಸಲುಹಿದ ತಾಯಿಯನ್ನು ನೋಡಲು ಬರಲಿಲ್ಲ. ಊರಿಗೆ ಅರಸನಾದರೂ ತಾಯಿಗೆ ಮಗ ಮಗನೇ. ಹೀಗಾಗಿ ತನ್ನ ಕೊನೆ ಘಳಿಗೆಯಲ್ಲೂ ಆ ಮಹಾತಾಯಿ ವೃದ್ಧಾಶ್ರಮದಲ್ಲೇ ಮಗನಿಗಾಗಿ ಕಣ್ಣೀರಿಟ್ಟಿದ್ದಳು. ಮಗ, ಮೊಮ್ಮಗ ಯಾರಾದ್ರೂ ಬಂದೇ ಬರ್ತಾರೆ ಅನ್ನೋದನ್ನ ಆಸೆ ಕಣ್ಣಿನಿಂದ ಕಾಯುತ್ತಿದ್ದಳು. ಆದ್ರೆ ಅವಳ ಆಸೆಗಳೆಲ್ಲಾ ಕೇವಲ ಕಲ್ಪನೆ ಮಾತ್ರ ಆಗಿತ್ತು.
ಒಂದು ದಿನ ಆ ಮಹಾತಾಯಿ ಈ ಜಗತ್ತನ್ನೇ ತೊರೆದುಬಿಟ್ಟಳು. ಅನಾಥಾಶ್ರಮದ ಮಂದಿ ಮಗನಿಗೆ ಅಮ್ಮನ ಸಾವಿನ ಬಗ್ಗೆ ಸುದ್ದಿ ಮುಟ್ಟಿಸಿದ್ದರು. ಆದ್ರೆ ಬದಲಾಗಿದ್ದ ಮಗ ತಾಯಿಯ ಕೊನೆಯ ದರ್ಶನಕ್ಕೂ ಮನಸ್ಸು ಮಾಡಲಿಲ್ಲ. ಅಂತ್ಯ ಸಂಸ್ಕಾರ ಮಾಡಿ ಪುಣ್ಯ ಕಟ್ಟಿಕೊಳ್ಳುವ ಬದಲು ಅಮ್ಮನ ದೇಹವನ್ನು ಆಸ್ಪತ್ರೆಗೆ ದಾನ ಮಾಡಿ ಅಂತ ಹೇಳಿಬಿಟ್ಟ. ಆದ್ರೆ ಆ ವೃದ್ಧಾಶ್ರಮಕ್ಕೆ ಸ್ವಂತ ವಾಹನವೂ ಇರಲಿಲ್ಲ. ಹೇಗೋ ಅನಾಥವಾಗಿದ್ದ ಶವವನ್ನು ವೃದ್ಧಾಶ್ರಮದ ಸಿಬ್ಬಂದಿ ಆಸ್ಪತ್ರೆಗೆ ದಾನ ಮಾಡಿಬಿಟ್ರು.
ಒಮಾಶ್ರಮದ ಫೌಂಡರ್ ಟ್ರಸ್ಟಿ ಮತ್ತು ಕೇರ್ ಟೇಕರ್ ಆಗಿರುವ ಗೀತಾ ಶಂಕರ್ಗೆ ಮನುಷ್ಯನ ಈ ವಿಚಿತ್ರ ಮನಸ್ಥಿತಿಯ ಬಗ್ಗೆ ಕೇಳಿದ್ರೆ ಸಿಟ್ಟು ನೆತ್ತಿಗೇರುತ್ತದೆ. ತನ್ನ ಮಗಳು, ಸೊಸೆ ಹಾಗೂ ತಂಗಿಯ ಜೊತೆ ಸೇರಿಕೊಂಡು ಒಮಾಶ್ರಮ ಎಂಬ ವೃದ್ಧಾಶ್ರಮವನ್ನು ನಡೆಸುತ್ತಿದ್ದಾರೆ. ಇಲ್ಲಿ ಸುಮಾರು 50ಕ್ಕಿಂತಲೂ ಅಧಿಕ ಅನಾಥ ಹಿರಿಯರಿದ್ದಾರೆ. ಗೀತಾ ಶಂಕರ್ ಅವರೆಲ್ಲರ ಸೇವೆ ಮಾಡುತ್ತಿದ್ದಾರೆ. ನಿಮಗೆ ಕಣ್ಣೀರು ಒರೆಸುವ ತಾಕತ್ತಿದ್ದರೆ ಹಿರಿಯ ಅನಾಥವಾಗಿರುವ ಹಿರಿಯ ನಾಗರೀಕರ ಕಣ್ಣೀರು ಒರೆಸಿ ಅಂತ ಕಿವಿಮಾತು ನೀಡುತ್ತಾರೆ.
ಇವತ್ತು ಪೋಷಕರು ಮಕ್ಕಳಿಗಾಗಿ ಎಲ್ಲವನ್ನೂ ತ್ಯಾಗ ಮಾಡಿರುತ್ತಾರೆ. ಕರುಳ ಬಳ್ಳಿಯನ್ನು ಹೆತ್ತು-ಹೊತ್ತು ಸಾಕಿರುತ್ತಾರೆ. ಶಿಕ್ಷಣದಿಂದ ಹಿಡಿದು ಮಕ್ಕಳಿಗೆ ಬೇಕಾಗುವ ಎಲ್ಲಾ ವ್ಯವಸ್ಥೆಯನ್ನು ಮಾಡಿಕೊಟ್ಟಿರುತ್ತಾರೆ. ಆದರೆ ಮಕ್ಕಳು ದೊಡ್ಡವರಾದ ಮೇಲೆ ವಿದೇಶಕ್ಕೆ ಹಾರುತ್ತಾರೆ. ಹಣ ಸಂಪಾದನೆಯ ನೆಪದಲ್ಲಿ ಪೋಷಕರು ತಂದೆ-ತಾಯಿಗಳು ಮರೆತೇ ಹೋಗುತ್ತಾರೆ. ಹೆತ್ತು ಹೊತ್ತವರನ್ನು ವೃದ್ಧಾಶ್ರಮ ಸೇರಿಸಿ ಮನುಷ್ಯತ್ವ ಕಳೆದುಕೊಳ್ಳುತ್ತಾರೆ. ನಾವು ಬಿತ್ತಿದ್ದನ್ನು ನಾವೇ ಉಣ್ಣಬೇಕು ಅನ್ನೋ ಮಾತಿದೆ. ಆದರೆ ನಮ್ಮ ವೃದ್ಧರಿಗೆ ಇದು ಸಿಗುತ್ತಿಲ್ಲ. ಅವರ ಕೊನೆಯ ದಿನಗಳಲ್ಲಿ ಅವರಿಗೆ ನೋವೇ ಹೆಚ್ಚಾಗಿರುತ್ತದೆ ಅಂತ ಹೇಳುವಾಗ ಗೀತಾಶಂಕರ್ ಕಣ್ಣು ಕೂಡ ಒದ್ದೆಯಾಗಿತ್ತು.