ಕೇದಾರನಾಥನನ್ನೇ ದೋಚಿದ ಸಾಧು ಸಂತರು
ಉತ್ತರಾಖಂಡ್, ಜೂ.25: ಲೋಕರಕ್ಷಕ, ದೀನನಾಥ ಕೇದಾರನಾಥ ಈಗ ಅನಾಥನಷ್ಟೇ ಅಲ್ಲ ಬರಿಗೈ ಬೈರಾಗಿಯಾಗಿದ್ದಾನೆ. ಗಂಗೆಯ ಆರ್ಭಟಕ್ಕೆ ಕೇದಾರನಾಥದ ಸುಂದರ ದೇಗುಲ ಧ್ವಂಸಗೊಂಡ ನಂತರ ಸಾಧು ಸಂತರ ಪಡೆ ಪರಮಶಿವನನ್ನು ದೋಚಿರುವ ಘಟನೆ ಬೆಳಕಿಗೆ ಬಂದಿದೆ.
ಉತ್ತರಾಖಂಡ್ ನ ಉತ್ತರಕಾಶಿ, ರುದ್ರಪ್ರಯಾಗ್ ಜಿಲ್ಲೆಗಳಲ್ಲಿ ಸಿಲುಕಿರುವ ಅಷ್ಟೂ ಭಕ್ತಾದಿಗಳನ್ನು ಹಾಗೂ ಹೀಗೂ ಹುಡುಕಿದ ಭಾರತೀಯ ಸೇನೆ ಯೋಧರು ರಕ್ಷಣಾ ಕಾರ್ಯದಲ್ಲಿ ಮಗ್ನರಾಗಿರುವ ವೇಳೆಯಲ್ಲಿ ಕೇದಾರನಾಥನ ಗುಡಿಯ ಸುತ್ತಾ 50ಕ್ಕೂ ಅಧಿಕ ಸಾಧುಗಳು ಬೀಡುಬಿಟ್ಟಿರುವ ಸುದ್ದಿ ಬಂದಿತ್ತು.
ಆದರೆ, ಕೇದಾರನಾಥನ ಸನ್ನಿಧಿಯಲ್ಲಿ ರಕ್ಷಣೆ ಪಡೆದಿದ್ದ ಸಾಧುಗಳು ಹಾಗೂ ಕೆಲವು ಸ್ಥಳೀಯರು ರಕ್ಷಣೆಗಾಗಿ ಹೊರಗೆ ಕಾಲಿಡಲು ಸಾಧ್ಯವಿರಲಿಲ್ಲ. ಜೊತೆಗೆ ಅದು ಅವರಿಗೆ ಬೇಕಿರಲಿಲ್ಲ ಎಂದು ತಿಳಿದು ಬಂದಿದೆ.
ಕೇದಾರನಾಥನ ದೇವಸ್ಥಾನದ ಸುತ್ತಾ 6 ಅಡಿಗೂ ಅಧಿಕ ಆಳದ ಮಣ್ಣು ಕುಸಿತ ಆರಂಭವಾಗಿತ್ತು. ಆಗಲೇ ದೇಗುಲದ ಸಮಸ್ತ ಆಸ್ತಿ, ಆಭರಣಗಳು ಕೊಚ್ಚಿ ಹೋಗಿದ್ದವು. ಆದರೂ ಸಾಧುಗಳು ಶಂಕರನ ರಕ್ಷಣೆಗೆ ನಿಂತಿದ್ದರು. ಕೊನೆಗೂ ಇವರನ್ನು ಪತ್ತೆ ಹಚ್ಚಲು ಐಟಿಬಿಪಿ ಪಡೆ ಹರಸಾಹಸ ಪಡಬೇಕಾಯಿತು. ಸಾಧುಗಳ ಬಳಿ ಬರೋಬ್ಬರಿ 1.14 ಕೋಟಿ ಚಿನ್ನಾಭರಣ, ನಗದು ಇತ್ತು ಮುಂದೆ ಓದಿ
ಸಾಧುಗಳ ಉಪಾಯ
ಕೇದಾರನಾಥ ದೇಗುಲಕ್ಕೆ ಸೇರಿದ ಚಿನ್ನಾಭರಣ, ಬದುಕುಳಿದ ಯಾತ್ರಾರ್ಥಿಗಳಿಂದ ದೋಚಿದ ಆಭರಣ, ಸತ್ತ ಹೆಣಗಳ ಮೈಮೇಲಿನ ಒಡವೆಗಳೆಲ್ಲವೂ ಸಾಧು ಸಂತರ ಪಾಲಾಗಿದೆ. ಇದೆಲ್ಲವನ್ನು ದೊಡ್ಡ ದೊಡ್ಡ ಬ್ಯಾಗ್ ಗಳಲ್ಲಿ ತುಂಬಿಕೊಂಡು ಕೆಲವರು ಹೆಲಿಕಾಪ್ಟರ್ ಕಡೆಗೆ ಹೊರಟರೆ ಮತ್ತೆ ಕೆಲವರು ಇನ್ನಷ್ಟು ದೋಚುವ ಆಸೆಯಿಂದ ಅಲ್ಲೇ ಉಳಿದಿದ್ದಾರೆ.
ಸಾಧುಗಳ ತಂತ್ರ
ಕೆಲವು ಸಾಧುಗಳು ಕೇದಾರನಾಥನ ಸನ್ನಿಧಿಯಲ್ಲೇ ಬೀಡುಬಿಟ್ಟಿರುವ ಸುದ್ದಿ ಪಕ್ಕಾ ಆಗುತ್ತಿದ್ದಂತೆ ಹೆಲಿಕಾಪ್ಟರ್ ಬಳಿ ಇದ್ದ ಸಾಧುಗಳ ಬ್ಯಾಗ್ ಚೆಕ್ ಮಾಡಲಾಗಿದೆ. ಆಗ ವಿಷಯ ಬೆಳಕಿಗೆ ಬಂದಿದೆ ಎಂದು ಐಟಿಬಿಪಿ ಮುಖ್ಯಸ್ಥ ಅಜಯ್ ಛಡ್ಡಾ ಹೇಳಿದ್ದಾರೆ.
ಆದರೆ, ಉಳಿದ ಸಾಧುಗಳು ಹಾಗೂ ಕೆಲವರು ಸನ್ನಿಧಿ ಹಾಗೂ ಮಂದಾಕಿನಿ ಕಣಿವೆಯನ್ನು ಬಿಟ್ಟು ಬರಲು ಒಪ್ಪಿಲ್ಲ. ಸ್ಥಳೀಯ ಪೊಲೀಸರಿಗೆ ಈ ಬಗ್ಗೆ ಸೂಚಿಸಲಾಗಿತ್ತು. ಡೆಹ್ರಾಡೂನ್ ಪೊಲೀಸರು ಮುಂದಿನ ಕ್ರಮ ಜರುಗಿಸಲಿದ್ದಾರೆ ಎಂದಿದ್ದಾರೆ.
ಆನುಮಾನಕ್ಕೆ ಕಾರಣ
ಗೌರಿಗುಂಡದಲ್ಲಿದ್ದ ಒಬ್ಬ ಯಾತ್ರಾರ್ಥಿಯೊಬ್ಬರು ನೇಪಾಳಿಗಳಂತೆ ಮುಖಚಹರೆ ಇದ್ದ ಕೆಲವರು ನಮ್ಮ ತಂಡವನ್ನು ಬೆದರಿಸಿ ನಮ್ಮ ಬಳಿ ಇದ್ದ 25,000 ನಗದು ದೋಚಿದರು ಎಂದು ಪೊಲೀಸರಿಗೆ ದೂರು ನೀಡಿದ್ದರು. ಇದೇ ರೀತಿ ಮಹಿಳೆಯೊಬ್ಬರನ್ನು ಚಾಕು ತೋರಿಸಿ ಸ್ಥಳೀಯನೊಬ್ಬ ಹಣ ದೋಚಿದ ಪ್ರಕರಣ ನಡೆದಿತ್ತು.
ಸ್ಥಳೀಯ ಕಳ್ಳರ ಜೊತೆ ಕೆಲವು ಅಸೆ ಬುರುಕ ಸಾಧುಗಳು ಸೇರಿಕೊಂಡು ದುಷ್ಕೃತ್ಯದಲ್ಲಿ ತೊಡಗಿದ್ದಾರೆ ಎಂದು ಐಟಿಬಿಪಿ ಅಮಿತ್ ಪ್ರಸಾದ್ ಹೇಳಿದರು. ಸಾಧುಗಳನ್ನು ಬಲವಂತವಾಗಿ ಇಲ್ಲಿಂದ ಜಾಗ ಖಾಲಿ ಮಾಡಿಸಲಾಗುತ್ತಿದೆ ಎಂದಿದ್ದಾರೆ.
ಯಾತ್ರಿಗಳ ಬವಣೆ
ಬದರಿನಾಥ್, ಕೇದಾರನಾಥ್, ಗಂಗೋತ್ರಿ ಮತ್ತು ಯಮುನೋತ್ರಿ ಉತ್ತರಕಾಂಡದ ನಾಲ್ಕು ಪ್ರಸಿದ್ಧ ಭಕ್ತಿಧಾಮಗಳು. ಚಾರ್ ಧಾಮ್ ಯಾತ್ರಿ ಮುಗಿಸಲು ಬಂದಿದ್ದ ಯಾತ್ರಿಗಳ ಕತೆಯನ್ನು ಗಂಗೆ ಮುಗಿಸಿದ್ದಾಳೆ. ಗಂಗೆ ಆರ್ಭಟ ಸ್ವಯಂ ಶಿವ ಕೂಡಾ ಮೆತ್ತಗಾಗಿದ್ದಾನೆ. ಇದು ನಿರೀಕ್ಷಿತ ಎಂಬ ಭಾವದಲ್ಲಿ ಸುಮ್ಮನಾಗಿದ್ದಾನೆ.
ಅಂತಿಮಕ್ರಿಯೆ
ದೇಹಗಳು ಕೊಳೆತು ನಾರುತ್ತಿರುವುದರಿಂದ ಸಾಂಕ್ರಾಮಿಕ ರೋಗಗಳು ಹಬ್ಬುವುದನ್ನು ತಪ್ಪಿಸಲು ಸಾರ್ವತ್ರಿಕವಾಗಿ ಅಂತ್ಯಸಂಸ್ಕಾರ ನಡೆಸಲು ಸಿದ್ಧತೆಗಳು ನಡೆದಿವೆ. ಇದಕ್ಕೆ ಧಾರ್ಮಿಕ ಮುಖಂಡರು ಕೂಡ ಅನುಮತಿ ನೀಡಿದ್ದಾರೆ. ದೇಹಗಳ ಗುರುತುಪತ್ತೆ, ಮರಣೋತ್ತರ ಪರೀಕ್ಷೆ ಮತ್ತು ಡಿಎನ್ಎ ಮಾದರಿ ಸಂಗ್ರಹಣೆ ಆದ ನಂತರ ಅಂತಿಮಕ್ರಿಯೆ ನೆರವೇರಲಿದೆ.
ಕೇದಾರನಾಥ ಪ್ರಮುಖ ದೇಗುಲ
ಸಮುದ್ರಮಟ್ಟದಿಂದ 3584 ಮೀ ಎತ್ತರದಲ್ಲಿರುವ ಕೇದಾರನಾಥ ಪ್ರಮುಖ ದೇಗುಲವಾದರೂ ಶೈವರಿಂದ ದೂರವಾಗಿದೆ.
ಆದಿ ಶಂಕರಾಚಾರ್ಯರು ಜಾರಿಗೆ ತಂದ ಹಲವಾರು ಸುಧಾರಣೆಗಳಂತೆ ಕೇದಾರನಾಥ ದೇವಸ್ಥಾನದಲ್ಲಿ ಉಡುಪಿ ಅಥವಾ ಕೇರಳ ಮೂಲದವರನ್ನು ಅರ್ಚಕರಾಗಿ ನೇಮಿಸುವ ಸಂಪ್ರದಾಯ ಪಾಲಿಸಲಾಗುತ್ತದೆ. ಇದೀಗ 1,200 ವರ್ಷಗಳ ಹಿಂದಿನ ಕೇದಾರನಾಥ ಧಾಮದಲ್ಲಿದ್ದ ಆದಿ ಶಂಕರಾಚಾರ್ಯರ ಸಮಾಧಿಯೇ ಕೊಚ್ಚಿಹೋಗಿದೆ.