ಮಾಲೂರು ಕೃಷ್ಣಯ್ಯ ಶೆಟ್ಟರಿಗೆ ಲಡ್ಡುಕೊಟ್ಟ ಕಾಂಗ್ರೆಸ್!
ಮಂಗಳವಾರ ಮಾಧ್ಯಮಗಳಿಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಕೆಪಿಸಿಸಿ, ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಅವರನ್ನು ನಾವು ಪಕ್ಷಕ್ಕೆ ಸೇರಿಸಿಕೊಂಡಿಲ್ಲ ಎಂದು ಸ್ಪಷ್ಟೀಕರಣ ನೀಡಿದೆ. ಈ ಕುರಿತು ಉತ್ತರಿಸುವಂತೆ ಕೋಲಾರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗೆ ನೋಟಿಸ್ ಜಾರಿಗೊಳಿಸಿದೆ.
ಕೆಪಿಸಿಸಿಯ ತೀರ್ಮಾನದಿಂದಾಗಿ ಕೃಷ್ಣಯ್ಯ ಶೆಟ್ಟಿ ಯಾವ ಪಕ್ಷದಲ್ಲಿದ್ದಾರೆ ಎಂಬ ಗೊಂದಲ ಉಂಟಾಗಿದೆ. ವಿಧಾನಸಭೆ ಚುನಾವಣೆಗೆ ಮಾಲೂರು ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶೆಟ್ಟರು, ಜೆಡಿಎಸ್ ಅಭ್ಯರ್ಥಿ ಕೆ.ಎಸ್.ಮಂಜುನಾಥ್ ವಿರುದ್ಧ ಸೋಲು ಅನುಭವಿಸಿದ್ದರು.
ನಂತರ ಮೇ 13ರಂದು ಕೋಲಾರದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡಿದ್ದರು. ಸ್ವತಃ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಕೃಷ್ಣಯ್ಯ ಶೆಟ್ಟಿ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡಿದ್ದರು. ಆದರೆ, ಕೆಪಿಸಿಸಿ ಶೆಟ್ಟರ ಪಕ್ಷ ಸೇರ್ಪಡೆಯನ್ನು ತಳ್ಳಿ ಹಾಕಿದೆ. (ಕೈ ಹಿಡಿದ ಕೃಷ್ಣಯ್ಯ ಶೆಟ್ಟಿ)
ಶೆಟ್ಟರ ಪಕ್ಷ ಸೇರ್ಪಡೆ ಗೊಂದಲಕ್ಕೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಕಾರಣ ಎಂದು ಸ್ಪಷ್ಟನೆ ನೀಡುವಂತೆ ಕೋರಿ ಅವರಿಗೆ ನೋಟಿಸ್ ಜಾರಿಗೊಳಿಸಿದೆ. ಇದರಿಂದಾಗಿ ಕೃಷ್ಣಯ್ಯ ಶೆಟ್ಟಿ ಸ್ಥಿತಿ ಅತಂತ್ರವಾಗಿದೆ. ಶೆಟ್ಟರ ಮುಂದಿನ ರಾಜಕೀಯ ನಡೆ ಏನೆಂದು ಕಾದು ನೋಡಬೇಕಾಗಿದೆ.
ಬಿಜೆಪಿಗೆ ಲಡ್ಡು ಕೊಟ್ಟಿದ್ದರು : ಗಂಗಾಜಲ, ಲಡ್ಡು ಹಂಚಿಕೆ ಖ್ಯಾತಿಯ ಕೃಷ್ಣಯ್ಯ ಶೆಟ್ಟಿ ತಾವು ಚುನಾವಣೆ ಗೆಲ್ಲಬೇಕೆಂದು ತಮ್ಮ ವಿರುದ್ಧ ಬಿಜೆಪಿ ಅಭ್ಯರ್ಥಿ ಸ್ಪರ್ಧಿಸದಂತೆ ಮಾಡಿ ಬಿಜೆಪಿ ಪಕ್ಷಕ್ಕೆ ಲಡ್ಡು ಕೊಟ್ಟಿದ್ದರು.(ಮಾಲೂರಿನಲ್ಲಿ ಬಿಜೆಪಿ ಅಭ್ಯರ್ಥಿಗಳಿಲ್ಲ)
ಮಾಲೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯೇ ಇಲ್ಲದಂತೆ ಮಾಡಿ ಪಕ್ಷಕ್ಕೆ ಭಾರೀ ಮುಜುಗರ ಉಂಟು ಮಾಡಿದ್ದರು. ಆದ್ದರಿಂದ ಅವರನ್ನು ಪಕ್ಷದಿಂದ ಬಿಜೆಪಿ ಉಚ್ಛಾಟಿಸಿತ್ತು. ಕೆಲವು ದಿನಗಳ ಕಾಲ ಸುಮ್ಮನಿದ್ದ ಶೆಟ್ಟರು, ಕಾಂಗ್ರೆಸ್ ಸೇರಿರುವುದಾಗಿ ಹೇಳಿದ್ದರು.
ಆದರೆ, ಈಗ ಕೆಪಿಸಿಸಿಯೇ ಕೃಷ್ಣಯ್ಯ ಶೆಟ್ಟಿ ಪಕ್ಷ ಸೇರ್ಪಡೆಯನ್ನು ತಳ್ಳಿಹಾಕಿದೆ. ಆದ್ದರಿಂದ ಕೃಷ್ಣಯ್ಯ ಶೆಟ್ಟಿ ಯಾವ ಪಕ್ಷ ಸೇರುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. ಅಂದಹಾಗೆ ಕೃಷ್ಣಯ್ಯ ಶೆಟ್ಟ್ರರು ಕಾಂಗ್ರೆಸ್ ಸೇರಿದ್ದೇನೆ ಎಂದು ಘೋಷಿಸಿದ್ದು ಏಕೆ? ಎಂಬುದು ಬಗೆಹರಿಯದ ಪ್ರಶ್ನೆಯಾಗಿದೆ. [ಕೋಲಾರದ ಗೆದ್ದ, ಸೋತ ಅಭ್ಯರ್ಥಿಗಳು]