ಅಂದು ಮಂತ್ರಾಲಯ,ಇಂದು ಕೇದಾರನಾಥ: ಯಾಕ್ ಶಿವಾ!
ಸ್ಮಶಾನವಾಸಿ ರುದ್ರನ ಜ್ಯೋತಿರ್ಲಿಂಗ ಕ್ಷೇತ್ರಗಳಲ್ಲಿ ಒಂದಾದ ಹಿಂದೂಗಳ ಪವಿತ್ರ ಕೇದಾರನಾಥ ದೇವಾಲಯ ಸ್ಮಶಾನವಾಗಿದೆ. ಎಲ್ಲಿ ನೋಡಿದರಲ್ಲಿ ಹೆಣಗಳು, ಭೂಮಿ ಬಗೆದಷ್ಟು ಹೆಣಗಳ ರಾಶಿ. ಇದುವರೆಗೆ ದೇವಾಲಯದ ಆವರಣದಿಂದ ಸುಮಾರು 150ಕ್ಕೂ ಹೆಚ್ಚು ಶವಗಳನ್ನು ಹೊರತೆಗೆಯಲಾಗಿದೆ. ಗಂಗಾ ಮತ್ತು ಆಕೆಯ ಉಪನದಿಗಳ ಆರ್ಭಟಕ್ಕೆ ಸ್ವತ: ಲಯಕರ್ತನೇ ಬೆಚ್ಚಿಬಿದ್ದಿದ್ದಾನೆ.
ಕೇದಾರನಾಥ ದೇವಾಲಯದಲ್ಲಿ ಶಿವಲಿಂಗವೇ ಮಣ್ಣಿನಲ್ಲಿ ಹೂತುಹೋಗಿದೆ, ನಂದಿ ವಿಗ್ರಹಕ್ಕೆ ಸ್ವಲ್ಪ ಮಟ್ಟಿನ ಹಾನಿಯಾಗಿದೆ. ಕೇದಾರನಾಥ ದೇವಾಲಯದ ಆಡಳಿತ ಮಂಡಳಿಯ 18 ಟ್ರಸ್ಟಿಗಳೂ ನಾಪತ್ತೆಯಾಗಿದ್ದಾರೆ. ಆದರೆ ಪಾಳಿ ಪದ್ದತಿಯಲ್ಲಿ ಪೂಜೆ ಸಲ್ಲಿಸುತ್ತಿರುವ ಪೂಜಾರಿಗಳು ಮಾತ್ರ ಸೇಫ್ ಆಗಿದ್ದಾರೆ. ಕೇದಾರನಾಥನ ಉತ್ಸವ ಮೂರ್ತಿಯನ್ನು ಹರಸಾಹಸ ಪಟ್ಟು ಕಾಪಾಡಿಕೊಳ್ಳಲಾಗಿದ್ದು ಉತ್ತರಕಾಶಿಯಲ್ಲಿ ಪೂಜಾರಿಗಳು ಮೂರ್ತಿಗೆ ದೈನಂದಿನ ಪೂಜೆ ಸಲ್ಲಿಸುತ್ತಿದ್ದಾರೆ.
ವಾಯುಪಡೆಯ ಅತಿದೊಡ್ದ ಕಾರ್ಯಾಚರಣೆಯಲ್ಲಿ ಪ್ರವಾಹ ಪೀಡಿತರನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸುವ ಕೆಲಸ ಭಾರೀ ಹಿಮ, ತುಂತುರು ಮಳೆಯ ನಡುವೆಯೂ ಭರದಿಂದ ಸಾಗುತ್ತಿದೆ. ಕೇದಾರನಾಥ ಕಣಿವೆಯಿಂದ ಎಲ್ಲರನ್ನೂ ರಕ್ಷಿಸಲಾಗಿದೆ ಎಂದು ವಾಯುಸೇನಾ ಪಡೆ ಹೇಳಿಕೊಂಡಿದೆ. ಅಂದು ರಾಯರ ಕ್ಷೇತ್ರ ಮಂತ್ರಾಲಯ ತುಂಗಾಭದ್ರಾ ನದಿಯ ಪ್ರವಾಹಕ್ಕೆ ಮುಳುಗಿ ಹೋಗಿತ್ತು, ಸುಮಾರು ಮೂರುವರೆ ವರ್ಷಗಳ ನಂತರ ಈಗ ಕೇದಾರನಾಥ ದೇವಾಲಯ ಗಂಗೆಯ ಪ್ರವಾಹಕ್ಕೆ ಸಿಲುಕಿದೆ. ಅಂದಿನ ಮಂತ್ರಾಲಯದ ಪ್ರವಾಹದ ಒಂದು ಹಿನ್ನೋಟ..
ಮಂತ್ರಾಲಯ ಪ್ರವಾಹ
ಅಕ್ಟೋಬರ್ 2009ರ ಮೊದಲ ವಾರದಲ್ಲಿ ಪ್ರಸಿದ್ಧ ಯಾತ್ರಾಸ್ಥಳ ಮಂತ್ರಾಲಯವನ್ನು ತುಂಗಭದ್ರಾ ನದಿ ನೆರೆ ಸುತ್ತುವರಿದು,ದ್ವೀಪವಾಗಿ ಮಾರ್ಪಟ್ಟಿತ್ತು. ನಾಲ್ಕು ವೃಂದಾವನಗಳು ಬಹುತೇಕ ನೀರಿನಲ್ಲಿ ಮುಳುಗಡೆಯಾಗಿ, ರಾಯರ ಬೃಂದಾವನವೂ ಭಾಗಶ: ಮುಳುಗಡೆಯಾಗಿತ್ತು. ರಂಗ ಭವನ, ತುಳಸಿ ವೃಂದಾವನ ಜಲಾವೃತವಾಗಿ,ಅನ್ನಪೂರ್ಣ ಭೋಜನ ಶಾಲೆವರೆಗೆ ನದಿ ನೀರು ತಲುಪಿತ್ತು.
ಮಂಚಾಲಮ್ಮನ ಶಾಪ
ಮಂತ್ರಾಲಯದ ಗ್ರಾಮಸ್ಥರ ಮತ್ತು ಶ್ರೀಮಠದ ಸಿಬ್ಬಂದಿಗಳ ಪ್ರಕಾರ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ಮತ್ತು ಇಡೀ ಊರಿಗೆ ಮುಳುಗು ನೀರು ಬಂದದ್ದು ಮಂಚಾಲಮ್ಮನ ಶಾಪದಿಂದ. ಮಂಚಾಲಮ್ಮನ ಮನೆಯನ್ನು ಹಾಳುಗೆಡವಿದರಿಂದ ಮಂಚಾಲಮ್ಮ ಇಡೀ ಊರನ್ನೇ ಅಪೋಷನ್ ತೆಗೆದುಕೊಂಡಿದ್ದಾಳೆ ಎನ್ನುವುದು ಇಲ್ಲಿನ ಜನರ ನಂಬಿಕೆ.
ಮಂಚಾಲಮ್ಮನ ಗೋಪುರ ಕೆಡವಿದ್ದು
2008ರ ಸುಮಾರಿನಲ್ಲಿ ಜೀರ್ಣೋದ್ಧಾರದ ಹೆಸರಿನಲ್ಲಿ ಮಂಚಾಲಮ್ಮನ ದೇವಾಲಯದ ಗೋಪುರವನ್ನು ಕೆಡವಲಾಯಿತು. ಅಲ್ಲಿಂದ ದೇವಿಗೆ ಪೂಜೆಯೂ ನಿಂತಿತು. ಜೀರ್ಣೋದ್ಧಾರದ ಕೆಲಸವನ್ನು ಬೇಗ ಮುಗಿಸಿ ಪೂಜೆ ಆರಂಭಿಸಿ ಇಲ್ಲವಾದರೆ ದೇವಿ ಮುನಿಸಿಕೊಳ್ಳುತ್ತಾಳೆ ಎಂದು ಮಠದ ಮುಖ್ಯಸ್ಥರಿಗೆ ಹೇಳುತ್ತಲೇ ಬಂದರೂ ಅವರು ಅದನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಈ ಅನಾಹುತಕ್ಕೆ ಅದೇ ಕಾರಣ ಎನ್ನುವುದು ಗ್ರಾಮಸ್ಥರು ನಂಬಿಕೆಯಾಗಿತ್ತು.
ಪೀಠಾಧಿಪತಿಗಳ ಕ್ಷಮೆ
ಮಂಚಾಲಮ್ಮ ಬೇರೆ ಅಲ್ಲ, ರಾಯರು ಬೇರೆ ಅಲ್ಲ. ಆ ತಾಯಿ ನಮ್ಮ ಗುರುಗಳಿಗೆ ಆಶ್ರಯ ನೀಡಿದವಳು. ಅವಳ ಬಗ್ಗೆ ಖಂಡಿತಾ ಅಸಡ್ಡೆ ಇಲ್ಲ. ಇಷ್ಟು ವರ್ಷ ತುಂಗೆ ಎಷ್ಟೇ ಉಕ್ಕಿ ಹರಿದರೂ ನೀರು ಮಂಚಾಲಮ್ಮನ ಗುಡಿ ಮುಟ್ಟುತ್ತಿತ್ತೇ ವಿನಾ ಬೃಂದಾವನ ಮುಳುಗಿದ್ದನ್ನು ನಾವು ಕೇಳಿಯೂ ಇಲ್ಲ. ನಮ್ಮಿಂದ ತಪ್ಪಾಗಿದೆ. ಇನ್ನು ಮುಂದೆ ಹೀಗಾಗದಂತೆ ನೋಡಿಕೊಳ್ಳುತ್ತೇವೆ. ಕಾಮಗಾರಿ ಆದಷ್ಟು ಬೇಗ ಪೂರ್ಣಗೊಳಿಸುತ್ತೇವೆ. ತಾಯಿ ನಮ್ಮನ್ನು ಕ್ಷಮಿಸಲಿ ಎಂದು ಅಂದಿನ ಮಂತ್ರಾಲಯ ಮಠದ ಪೀಠಾಧಿಪತಿ ಸುಯತೀ೦ದ್ರ ತೀರ್ಥರು ತಾಯಿಯಲ್ಲಿ ಕ್ಷಮೆಯಾಚಿಸಿದ್ದರು.
ಕ್ಷೇತ್ರದ ಶಕ್ತಿ ಮಂಚಾಲಮ್ಮ
ರಾಯರ ಬೃಂದಾವನದ ಕೊಗಳತೆ ದೂರದಲ್ಲಿರುವ ಮಂಚಾಲಮ್ಮ ಮಂತ್ರಾಲಯದ ಗ್ರಾಮದೇವತೆ. ರಾಯರು ಕೂಡ ಮಂಚಾಲಮ್ಮನ ಅನುಮತಿ ಮತ್ತು ಆಶೀರ್ವಾದ ಪಡೆದ ನಂತರವೇ ತುಂಗಭದ್ರಾ ತೀರದಲ್ಲಿ ನೆಲೆಗೊಂಡಿದ್ದು ಎನ್ನುವುದು ಉಲ್ಲೇಖನೀಯ. ರಾಯರ ಬೃಂದಾವನ ಎಷ್ಟೇ ಖ್ಯಾತವಾಗಿದ್ದರೂ ಇಲ್ಲಿನ ಅಂದಾಜು ಸುಮಾರು ಮೂರು ಸಾವಿರ ಮಂದಿ ಆದ್ಯತೆ ನೀಡುವುದು ಮೊದಲಿಗೆ ಮಂಚಾಲಮ್ಮನಿಗೆ.
ಗಬ್ಬೆದ್ದು ಹೋದ ಮಂತ್ರಾಲಯ
ಪ್ರವಾಹದ ಅಬ್ಬರಕ್ಕೆ ಮಂತ್ರಾಲಯದ ಮಠದೊಳಗೆಲ್ಲಾ ಕೆಸರು, ಕಸದರಾಶಿ, ಹಾವು ಚೇಳುಗಳು. ಜಾನುವಾರು, ಮನುಷ್ಯನ ಹೆಣ ರಾಶಿರಾಶಿಯಾಗಿ ಪೇರಿತ್ತು. ಮಠದ ಗೋಶಾಲೆಯಲ್ಲಿದ್ದ ಸುಮಾರು 65ಕ್ಕೂ ಹೆಚ್ಚು ಹಸುಗಳು ಜೀವಂತ ಜಲಸಮಾಧಿಯಾಗಿದ್ದವು. ಮಂತ್ರಾಲಯಕ್ಕೆ ರಾಜ್ಯದ ಉತ್ತರ ಭಾಗದಿಂದ ಸಂಪರ್ಕ ಸಂಪೂರ್ಣ ಕಡಿದು ಹೋಗಿತ್ತು.
ಭಕ್ತರಿಗೆ ಮಠದ ನಿವೇದನೆ
ಪರಿಹಾರ ಕಾರ್ಯದಲ್ಲಿ ಸಹಕರಿಸುವಂತೆ ರಾಯರ ಮಠದ ಆಡಳಿತ ಮಂಡಳಿ ಭಕ್ತಾದಿಗಳಲ್ಲಿ ವಿನಂತಿಸಿತ್ತು. ಊಹಿಸಲೂ ಅಸಾಧ್ಯವಾದ ರೀತಿಯಲ್ಲಿ ರಾಯರ ಭಕ್ತರು ಮಠದ ನಿವೇದನೆಗೆ ಸ್ಪಂದಿಸಿ ಸ್ವಚ್ಚತಾ ಕಾರ್ಯದಲ್ಲಿ ತೊಡಗಿಸಿಕೊಂಡರು. ಅಂದಿನ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಮಠದ ಪುನಶ್ಚೇತನಕ್ಕೆ ಉತ್ತಮ ಸಹಕಾರ ನೀಡಿದ್ದರು. ಆಶ್ಚರ್ಯಕಕರ ರೀತಿಯಲ್ಲಿ ಕೆಲವೇ ತಿಂಗಳಲ್ಲಿ ಮಂತ್ರಾಲಯದ ರಾಯರ ಮಠ ಮತ್ತೆ ಎಂದಿನಂತಾಯಿತು.