ಕೋಲಾರದಲ್ಲಿ ಆನೆ ದಾಳಿಗೆ ವಿಜಯವಾಣಿ ಪತ್ರಕರ್ತ ಬಲಿ
ಕಾಡಾನೆಗಳು ಎಬ್ಬಿಸುತ್ತಿರುವ ಹಾವಳಿಯ ವರದಿಗೆಂದು ತೆರಳಿದ್ದ ವಿಜಯವಾಣಿ ದಿನಪತ್ರಿಕೆಯ ವರದಿಗಾರ ಮಂಜುನಾಥ್ ಎಂಬುವವರನ್ನು ರೊಚ್ಚಿಗೆದ್ದಿದ್ದ ಕಾಡಾನೆಗಳು ತುಳಿದು ಕೊಂದುಹಾಕಿವೆ. ಮಂಜುನಾಥ್ ಅವರು ಸ್ಥಳದಲ್ಲಿಯೇ ಮೃತರಾಗಿದ್ದಾರೆ.
ಹತ್ತು ದೊಡ್ಡ ಆನೆಗಳು ಮತ್ತು ನಾಲ್ಕು ಮರಿಆನೆಗಳಿದ್ದ ಹಿಂಡು ಇಂಜನಹಳ್ಳಿಯಲ್ಲಿರುವ 25 ಎಕರೆ ನೀಲಗಿರಿ ತೋಪಿಗೆ ನುಗ್ಗಿದ್ದವು. ಅಕ್ಕಪಕ್ಕದಲ್ಲಿ ದೊಡ್ಡಮೆಣಸಿನಕಾಯಿ ಸೇರಿದಂತೆ ಹಲವಾರು ಬೆಳೆಗಳನ್ನು ಬೆಳೆಯುತ್ತಿದ್ದ ರೈತರು ಆನೆಗಳನ್ನು ಓಡಿಸಲು ಯತ್ನಿಸಿದ್ದಾರೆ.
ಗಲಾಟೆ ಮಾಡಿಕೊಂಡು ಆನೆಗಳನ್ನು ಓಡಿಸುತ್ತಿದ್ದಾಗ, ಅತ್ತಿಂದಿತ್ತ ಓಡಾಡುತ್ತಿದ್ದ ಆನೆಗಳು ಗೊಂದಲಕ್ಕೀಡಾಗಿ ಅಲ್ಲಿದ್ದವರ ಮೇಲೆ ದಾಳಿ ಮಾಡಿವೆ. ಮಂಜುನಾಥ್ ಅವರು ಫೋಟೋ ಕ್ಲಿಕ್ಕಿಸಿದಾಗ ಅದರಿಂದ ವಿಚಲಿತವಾದ ಆನೆಗಳು ಮಂಜುನಾಥ್ ಅವರನ್ನು ಅಟ್ಟಿಸಿಕೊಂಡು ಹೋಗಿ ಹೊಸಕಿಹಾಕಿವೆ.
ಆನೆ ನಾಡಿಗೆ ನುಗ್ಗಿ ಬೆಳೆಗಳನ್ನು ಹಾಳು ಮಾಡುತ್ತಿರುವುದಕ್ಕೆ ಮತ್ತು ಮಂಜುನಾಥ ಅವರ ಸಾವಿಗೆ ಅರಣ್ಯ ಅಧಿಕಾರಿಗಳನ್ನು ಗ್ರಾಮಸ್ಥರು ಹೊಣೆಗಾರರನ್ನಾಗಿ ಮಾಡುತ್ತಿದ್ದಾರೆ. ಮಾಲೂರಿನಲ್ಲಿಯೂ ಇವೇ ಆನೆಗಳು ಶನಿವಾರ ನುಗ್ಗಿ ಮೂವರನ್ನು ಕೊಂದು ಹಾಕಿವೆ. ಇಷ್ಟೆಲ್ಲ ನಡೆಯುತ್ತಿದ್ದರೂ ಅರಣ್ಯ ಇಲಾಖೆ ಮಾತ್ರ ಕಣ್ಣುಮುಚ್ಚಿ ಕುಳಿತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸುತ್ತಾರೆ.
ಇಂಜನಹಳ್ಳಿಯಲ್ಲಿ ಇಷ್ಟೆಲ್ಲ ರಂಪಾಟ ನಡೆಯುತ್ತಿದ್ದಾಗ ಆನೆಗಳನ್ನು ಅರಣ್ಯದತ್ತ ಓಡಿಸಲು ಅರಣ್ಯ ಇಲಾಖೆಯವರು ಕ್ರಮ ತೆಗೆದುಕೊಳ್ಳದೆ, ಜೀಪಿನಲ್ಲಿ ಕುಳಿತು ಏನಾಗುತ್ತದೋ ಎಂಬುದನ್ನು ವೀಕ್ಷಿಸುತ್ತಿದ್ದರು ಅವರು ದೂರಿದ್ದಾರೆ. ಇದರ ಬಗ್ಗೆ ವಿಚಾರಿಸಿದಾಗ, ಆನೆಗಳು ತಾವಾಗಿಯೇ ಕಾಡಿಗೆ ಓಡಿಹೋಗುತ್ತವೆ, ಗ್ರಾಮಸ್ಥರು ಅವನ್ನು ಗೊಂದಲಕ್ಕೀಡು ಮಾಡಬಾರದು ಎಂದು ಹೇಳಿದ್ದಾರೆ ಎನ್ನುತ್ತಾರೆ ಅರಣ್ಯ ಅಧಿಕಾರಿಗಳು.