ಉತ್ತರಖಂಡದಲ್ಲಿ ಮತ್ತೆ ಭಾರೀ ಮಳೆ ಮುನ್ಸೂಚನೆ?
ಡೆಹ್ರಾಡೂನ್, ಜೂ.22 : ಉತ್ತರಖಂಡದ ಜನರು ಬೆಚ್ಚಿಬೀಳುವಂತಹ ಸುದ್ದಿಯೊಂದು ಹೊರಬಿದ್ದಿದೆ. ಸೋಮವಾರ ರಾಜ್ಯದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಿ ಎಂದು ಭಾರತೀಯ ಹವಾಮಾನ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ಭೀಕರ ಪ್ರವಾಹಕ್ಕೆ ತುತ್ತಾಗಿರುವ ಉತ್ತರಖಂಡದಲ್ಲಿ ಮೂರು ದಿನಗಳಿಂದ ಮಳೆ ಕಡಿಮೆ ಆಗಿದೆ. ಪ್ರವಾಹದಲ್ಲಿ ಸಿಲುಕಿರುವ ಜನರ ರಕ್ಷಣಾ ಕಾರ್ಯ ಭರದಿಂದ ನಡೆಯುತ್ತಿದೆ. ಇಂತಹ ಸಂದರ್ಭದಲ್ಲೇ ವರುಣ ದೇವ ಮತ್ತೊಮ್ಮೆ ತನ್ನ ದೃಷ್ಠಿಯನ್ನು ಉತ್ತರಖಂಡದ ಮೇಲೆ ನೆಟ್ಟಿದ್ದಾನೆ.
ಭಾನುವಾರ ಸಂಜೆ ಹಿಮಾಲಯದ ಘಟ್ಟದಿಂದ ಆರಂಭವಾಗುವ ಮಳೆ, ಸೋಮವಾರ ಉತ್ತರ ಖಂಡ ರಾಜ್ಯಕ್ಕೆ ಕಾಲಿಡುವ ಸಾಧ್ಯತೆ ಇದೆ. ಆದ್ದರಿಂದ ಸೂಕ್ತ ಮುನ್ನೆಚ್ಚರಿಕೆ ತೆಗೆದುಕೊಳ್ಳಿ ಮತ್ತು ಸಂತ್ರಸ್ತ ಜನರನ್ನು ತಕ್ಷಣ ಸುರಕ್ಷಿತ ಪ್ರದೇಶಗಳಿಗೆ ಕಳುಹಿಸಿ ಎಂದು ಹವಾಮಾನ ಇಲಾಖೆ ಹೇಳಿದೆ.
ಹವಾಮಾನ ಇಲಾಖೆ ಎಚ್ಚರಿಕೆ ಹಿನ್ನಲೆಯಲ್ಲಿ ಮುಖ್ಯಮಂತ್ರಿ ವಿಜಯ್ ಬಹುಗುಣ ಶನಿವಾರ ತುರ್ತು ಸಚಿವ ಸಂಪುಟ ಸಭೆ ನಡೆಸಿದರು. ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಿದರು. ಹೆಚ್ಚಿನ ಸಹಾಯಕ್ಕಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲು ಸಭೆಯಲ್ಲಿ ನಿರ್ಧರಿಸಿದರು.
ಪ್ರವಾಹ ಪೀಡಿತ ಕಾಶಿ, ರುದ್ರಪ್ರಯಾಗ, ಕೇದಾರನಾಥ, ಹೃಷಿಕೇಶ್ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಗಿದೆ. ಪ್ರವಾಹ ಸಂತ್ರಸ್ತರನ್ನು ಸುರಕ್ಷಿತ ಸ್ಥಳಗಳಿಗೆ ತಕ್ಷಣ ತಲುಪಿಸುವ ರಕ್ಷಣಾ ಕಾರ್ಯ ಕೈಗೊಳ್ಳುವಂತೆ ಸಿಎಂ ಸೂಚಿಸಿದ್ದಾರೆ.
ಮಳೆಯ ಮುನ್ಸೂಚನೆ ದೊರಕಿರುವುದರಿಂದ ನದಿ ಪಾತ್ರದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕಾರ್ಯಕ್ಕೆ ಸರ್ಕಾರ ಚಾಲನೆ ನೀಡಿದೆ. ಮೂರು ದಿನಗಳಿಂದ ಸ್ಥಗಿತಗೊಂಡಿದ್ದ ವಿದ್ಯುತ್, ದೂರವಾಣಿ ಸಂಪರ್ಕಗಳನ್ನು ಶನಿವಾರ ದುರಸ್ತಿ ಮಾಡಲಾಗುತ್ತಿದೆ. ರಕ್ಷಣಾ ಪಡೆಗಳಿಗೆ ರಾಜ್ಯದಲ್ಲೇ ಇರುವಂತೆ ಸೂಚಿಸಲಾಗಿದೆ.
ರಾಜ್ಯದಲ್ಲಿ ಶನಿವಾರ ಮಧ್ಯಾಹ್ನದಿಂದ ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದು, ರಕ್ಷಣಾ ಕಾರ್ಯಚರಣೆಗಳಿಗೂ ಅಡಚಣೆ ಉಂಟುಮಾಡಿದೆ. ಈಗಾಗಲೇ 55 ಹೆಲಿಕಾಪ್ಟರ್ ಗಳು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದು, ಮತ್ತೊಮ್ಮೆ ಮಳೆ ಬರುವ ಮುನ್ನ ಜನರನ್ನು ಸ್ಥಳಾಂತರಿಸುವ ಕಾರ್ಯ ಚುರುಕುಗೊಳಿಸಲಾಗಿದೆ.