ಸ್ವಂತ ಮನೆ ಬೇಕಾ? ಸೂರ್ಯನಗರ ಬಾಗಿಲು ತೆರೆದಿದೆ
ಬೆಂಗಳೂರು, ಜೂ.21 : ಮಹಾನಗರ ಬೆಂಗಳೂರಿನಲ್ಲಿ ಸ್ವಂತ ಮನೆ ಹೊಂದುವ ಜನರು ಕನಸು ಈಡೇರಿಸಲು ಸರ್ಕಾರ ಸಿದ್ಧವಾಗಿದೆ. ಕರ್ನಾಟಕ ಗೃಹ ಮಂಡಳಿ ಸೂರ್ಯನಗರದ ನಾಲ್ಕನೇ ಹಂತದ ಬಡಾವಣೆ ನಿರ್ಮಿಸಲು ಮುಂದಾಗಿದೆ. ಇದರ ವ್ಯಾಪ್ತಿಯಲ್ಲಿ ಐವತ್ತು ಸಾವಿರ ನಿವೇಶನ ಹಂಚುವ ಗುರಿ ಹೊಂದಿದೆ.
ವಸತಿ ಸಚಿವ ಅಂಬರೀಶ್ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ್ದು, ಸೂರ್ಯನಗರ 4ನೇ ಹಂತದ ಬಡಾವಣೆ ನಿರ್ಮಾಣಕ್ಕೆ, ಜಿಗಣಿ ಬಳಿ 2400 ಎಕರೆ ಭೂಮಿ ಸ್ವಾಧೀನ ಪಡಿಸಿಕೊಳ್ಳಲಾಗುವುದು ಎಂದು ಹೇಳಿದ್ದಾರೆ. ಸುಮಾರು 50 ಸಾವಿರ ನಿವೇಶನಗಳನ್ನು ಈ ಯೋಜನೆ ಅಡಿ ಹಂಚುವ ಗುರಿಯನ್ನು ಸರ್ಕಾರ ಹೊಂದಿದೆ.
ಈಗಾಗಲೇ ಸರ್ಕಾರ ಸೂರ್ಯನಗರದ 3 ಹಂತಗಳಲ್ಲಿ 2 ಸಾವಿರ ಎಕರೆ ಪ್ರದೇಶದಲ್ಲಿ 20 ಸಾವಿರ ನಿವೇಶನಗಳನ್ನು ಅಭಿವೃದ್ಧಿಪಡಿಸಿ, ಹಂಚಿಕೆ ಮಾಡಿದೆ. ಈ ಯೋಜನೆ ಯಶಸ್ವಿಯಾಗಿದ್ದರಿಂದ ನಾಲ್ಕನೇ ಹಂತದ ಯೋಜನೆ ಪ್ರಾರಂಭಿಸಲು ಮುಂದಾಗಿದೆ.
ಕೆಂಗೇರಿ ಮತ್ತು ಗುಲ್ಬರ್ಗದಲ್ಲಿ ಕರ್ನಾಟಕ ಗೃಹ ಮಂಡಳಿ 825 ಮನೆ ನಿರ್ಮಿಸುತ್ತಿದೆ. ಪ್ರತಿ ಜಿಲ್ಲೆಯಲ್ಲೂ ಗೃಹ ಮಂಡಳಿ ನಿವೇಶನ ಮತ್ತು ಮನೆ ನಿರ್ಮಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಅಂಬರೀಶ್ ಹೇಳಿದ್ದಾರೆ. ಅಂಬರೀಶ್ ಪತ್ರಿಕಾಗೋಷ್ಠಿಯ ಪ್ರಮುಖ ಅಂಶಗಳು ಹೀಗಿವೆ.
ಶೀಘ್ರದಲ್ಲೇ ಕಾಮಗಾರಿ ಪ್ರಾರಂಭ
ಸೂರ್ಯನಗರ 4ನೇ ಹಂತದ ಯೋಜನೆಯ ಭೂ ಸ್ವಾಧೀನ ಪ್ರಕ್ರಿಯೆಗೆ ಮುಂದಿನ ವಾರದಲ್ಲಿ ಅಧಿಸೂಚನೆ ಹೊರಡಿಸಲಾಗುವುದು. ಒಟ್ಟು ಐದು ಸಾವಿರ ಕೋಟಿ ರೂ. ವೆಚ್ಚದಲ್ಲಿ, 50 ಸಾವಿರ ನಿವೇಶನಗಳ ಹಂಚಿಕೆ ಮಾಡಲು ಚಿಂತನೆ.
ಯೋಜನೆ ಎಲ್ಲಿ ಪ್ರಾರಂಭ
ಸೂರ್ಯನಗರ ನಾಲ್ಕನೇ ಹಂತ ನಗರದಿಂದ 32 ಕಿ.ಮೀ ದೂರದಲ್ಲಿರುವ ಬೊಮ್ಮನದೊಡ್ಡಿ, ಇಂಡ್ಲವಾಡಿ, ಬಗ್ಗನದೊಡ್ಡಿ, ಕಾಡುಜಕ್ಕನಹಳ್ಳಿ, ಕೋನಸಂದ್ರಗಳಲ್ಲಿ ಪ್ರಾರಂಭವಾಗಲಿದೆ. ಇದಕ್ಕಾಗಿ ಭೂಮಿ ಸ್ವಾಧೀನ ಪ್ರಕ್ರಿಯೆಗೆ ಶೀಘ್ರ ಚಾಲನೆ. ಮೂರು ವರ್ಷಗಳಲ್ಲಿ ಕಾಮಗಾರಿ ಪೂರ್ಣ.
ನಿವೇಶನಗಳ ದರವೆಷ್ಟು
ಪ್ರತಿ ಚದರ ಅಡಿಗೆ 850 ರಿಂದ 900 ರೂ. ದರದಲ್ಲಿ ನಿವೇಶನ ಹಂಚಿಕೆ ಮಾಡಲು ನಿರ್ಧರಿಸಲಾಗಿದೆ. ಆರ್ಥಿಕವಾಗಿ ಹಿಂದುಳಿದ ಮತ್ತು ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಜನರಿಗೆ ಶೇ.50ರಷ್ಟು ರಿಯಾಯಿತಿ ದರದಲ್ಲಿ 17,000 ನಿವೇಶನಗಳನ್ನು ನೀಡಲು ನಿರ್ಧರಿಸಲಾಗಿದೆ.
ಸ್ಯಾಟ್ ಲೈಟ್ ಟೌನ್ ನಿರ್ಮಾಣ
ಬೆಂಗಳೂರು ಸುತ್ತಮುತ್ತಲಿನ ದೇವನಹಳ್ಳಿ, ಕನಕಪುರ, ನೆಲಮಂಗಲದಲ್ಲಿ ಸ್ಯಾಟಲೈಟ್ ಟೌನ್ಗಳನ್ನು ನಿರ್ಮಿಸಲು ಯೋಜನೆ. ಮಂಡ್ಯದ ಬಳಿ 350 ಎಕರೆಯಲ್ಲಿ ಸ್ಯಾಟಲೈಟ್ ಟೌನ್ ನಿರ್ಮಾಣ ಮಾಡಲು, ಭೂಮಿ ಗುರುತಿಸುವ ಕಾರ್ಯಕ್ಕೆ ಚಾಲನೆ.
4 ಲಕ್ಷ ಮನೆಗಳು
ಮುಂದಿನ 5 ವರ್ಷಗಳಲ್ಲಿ 3 ರಿಂದ 4 ಲಕ್ಷ ಮನೆಗಳನ್ನು ನಿರ್ಮಿಸುವ ಗುರಿ ಸರ್ಕಾರ ಮುಂದಿದೆ. ಕೆಂಗೇರಿ ಮತ್ತು ಗುಲ್ಬರ್ಗದಲ್ಲಿ ತಲಾ 825 ಮನೆ ನಿರ್ಮಿಸಲಾಗುತ್ತಿದೆ. ಕರ್ನಾಟಕ ಗೃಹ ಮಂಡಳಿಯು ಪ್ರತಿ ಜಿಲ್ಲೆಯಲ್ಲೂ ನಿವೇಶನ ಮತ್ತು ಮನೆ ನಿರ್ಮಿಸಲು ಮುಂದಾಗಿದೆ.