ಬೆಂಗಳೂರಿಗೆ ಬಂತು ಕಮ್ಯುನಿಟಿ ಪೊಲೀಸಿಂಗ್ ವ್ಯವಸ್ಥೆ!
ಗುರುವಾರ ಗೃಹ ಸಚಿವ ಕೆ.ಜೆ.ಜಾರ್ಜ್, ಬೆಂಗಳೂರು ನಗರ ಪೊಲೀಸ್ ಮತ್ತು ಜನಾಗ್ರಹದ ಸಹಭಾಗಿತ್ವದಲ್ಲಿ ರೂಪುಗೊಂಡಿರುವ 'ಕಮ್ಯುನಿಟಿ ಪೊಲೀಸಿಂಗ್' ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಂತರ ಮಾತನಾಡಿದ ಸಚಿವರು, ಕಮ್ಯುನಿಟಿ ಪೊಲೀಸಿಂಗ್ ಸಮರ್ಪಕವಾಗಿ ಜಾರಿಗೆ ಬಂದರೆ, ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದ ಶೇ.70ರಷ್ಟು ಸಮಸ್ಯೆಗಳಿಗೆ ಪರಿಹಾರ ದೊರೆಕುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜನರು ಮತ್ತು ಪೊಲೀಸರ ನಡುವೆ ಉತ್ತಮ ಸಂಪರ್ಕ ಇದ್ದರೆ, ಸಮಾಜದಲ್ಲಿ ಕೋಮುಗಲಭೆ, ಸಂಘರ್ಷಗಳು ನಡೆಯುವುದಿಲ್ಲ. ನಗರದ 7 ಠಾಣೆಗಳಲ್ಲಿ ಈ ವ್ಯವಸ್ಥೆ ಪ್ರಾಯೋಗಿಕವಾಗಿ ಜಾರಿಗೆ ಬರುತ್ತಿದೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಎಲ್ಲಾ ಜಿಲ್ಲೆಗಳಿಗೆ ಮಾದರಿ ಆಗುವಂತೆ ಕಮ್ಯುನಿಟಿ ಪೊಲೀಸಿಂಗ್ ಕಾರ್ಯ ನಿರ್ವಹಿಸಬೇಕು. ಈ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ, ಜನಾಗ್ರಹ ಮತ್ತು ನಗರ ಪೊಲೀಸರ ನಡುವಿನ ಒಪ್ಪಂದಕ್ಕೆ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಶೀಘ್ರವೇ ಪರಸ್ಪರ ಸಹಿ ಹಾಕಲಾಗುವುದು ಎಂದರು.
ಎಲ್ಲೆಲ್ಲಿ ವ್ಯವಸ್ಥೆ : ಕಮ್ಯುನಿಟಿ ಪೊಲೀಸಿಂಗ್ ವ್ಯವಸ್ಥೆ ಮೊದಲ ಹಂತದಲ್ಲಿ ಜ್ಞಾನಭಾರತಿ, ಮಡಿವಾಳ, ಜೆ.ಪಿ.ನಗರ, ರಾಜಗೋಪಾಲನಗರ, ಬಾಣಸವಾಡಿ, ಅಶೋಕನಗರ ಮತ್ತು ಯಲಹಂಕ ಪೊಲೀಸ್ ವಲಯಗಳ ತಲಾ ಒಂದು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜಾರಿಗೆ ಬರಲಿದೆ ಎಂದು ಸಚಿವರು ತಿಳಿಸಿದರು.
ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ, ನಾಗರಿಕರ ಸುರಕ್ಷತೆ, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸರೊಂದಿಗೆ ಸಹಕರಿಸುವುದು ಕಮ್ಯುನಿಟಿ ಪೊಲೀಸಿಂಗ್ನ ಸ್ವಯಂ ಸೇವಕರ ಕರ್ತವ್ಯ. ಈ ವ್ಯವಸ್ಥೆಯಿಂದಾಗಿ ಇಲಾಖೆ ಮತ್ತಷ್ಟು ಜನಸ್ನೇಹಿ ಆಗಲಿದೆ ಎಂದು ಅವರು ಜಾರ್ಜ್ ವಿಶ್ವಾಸ ವ್ಯಕ್ತಪಡಿಸಿದರು.
ಕಮ್ಯುನಿಟಿ ಪೊಲೀಸಿಂಗ್ ಎಂದರೇನು : ಪ್ರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪರಾಧ, ರಾಜಕೀಯ ಹಿನ್ನೆಲೆ ಇಲ್ಲದವರ ಬಗ್ಗೆ ಸ್ಥಳೀಯ ಠಾಣಾಧಿಕಾರಿಯಿಂದ ಮಾಹಿತಿ ಪಡೆದು ಸ್ವಯಂ ಸೇವಕರನ್ನು ಆಯ್ಕೆ ಮಾಡಿ, 'ಏರಿಯಾ ಸುರಕ್ಷಾ ಮಿತ್ರ' ಎಂದು ಗುರುತಿಸಲಾಗುತ್ತದೆ.
ಸುಮಾರು 30 ರಿಂದ 40 ಜನರ ತಂಡವನ್ನು ಏರಿಯಾ ಸುರಕ್ಷಾ ಮಿತ್ರ ಎಂದು ಗುರುತಿಸಲಾಗುತ್ತದೆ. ಈ ತಂಡಕೊಬ್ಬರು ಸಂಚಾಲಕರು ಇರುತ್ತಾರೆ. ತಂಡದ ಸದಸ್ಯರಿಗೆ ಗುರುತಿನ ಚೀಟಿ ನೀಡಲಾಗುತ್ತದೆ.
ಈ ತಂಡವು ಸಂಬಂಧಪಟ್ಟ ಪೊಲೀಸ್ ಠಾಣೆಯ ಗಸ್ತು ಪೊಲೀಸರೊಂದಿಗೆ ನಿರಂತರ ಸಂಪರ್ಕದಲ್ಲಿರುತ್ತದೆ. ಪ್ರತಿ ತಿಂಗಳು ಠಾಣಾ ಮಟ್ಟದಲ್ಲಿ ಏರಿಯಾ ಸುರಕ್ಷಾ ಮಿತ್ರದ ಸಭೆ ನಡೆಸಿ ಪರಿಶೀಲನೆ ನಡೆಸಲಾಗುತ್ತದೆ.