ಗೋಧ್ರಾ ಕೇಸ್ : ಮೋದಿ ಬೆಂಬಲಕ್ಕೆ ರವಿಶಂಕರ್ ಗುರೂಜಿ
"2002 ರ ಗೋಧ್ರಾ ಹತ್ಯಾಕಾಂಡ ಹಾಗೂ ನಂತರದ ಹಿಂಸಾಚಾರಗಳ ಆರೋಪ ಹೊತ್ತಿರುವ ನರೇಂದ್ರ ಮೋದಿ ಅವರನ್ನು ದೂಷಿಸುವುದನ್ನು ಬಿಡಿ. 2001ರಲ್ಲಿ ಮುಖ್ಯಮಂತ್ರಿಯಾದಾಗ ಮೋದಿ ಅವರು ಇನ್ನೂ ಅನನುಭವಿಯಾಗಿದ್ದರು. ಹತ್ಯಾಕಾಂಡದಲ್ಲಿ ಅವರ ತಪ್ಪೇನು ಇಲ್ಲ. ಇಷ್ಟು ವರ್ಷವಾದರೂ ಅದೇ ಕಾರಣಕ್ಕೆ ದೂಷಿಸುವುದು ಸರಿಯಲ್ಲ. ಎಲ್ಲಾ ತಪ್ಪಿಗೂ ಪಶ್ಚಾತ್ತಾಪ, ಪ್ರಾಯಶ್ಚಿತ್ತ ಎಂಬುದೊಂದು ಇರುತ್ತದೆ" ಎಂದು ರವಿಶಂಕರ್ ಗುರೂಜಿ ಹೇಳಿದ್ದಾರೆ.
ಅಕ್ಟೋಬರ್ 2001 ಹಾಗೂ 2002ರಲ್ಲಿ ಗುಜರಾತಿನಲ್ಲಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಕೋಮು ಗಲಭೆ, ಹಿಂಸಾಚಾರಗಳು ನಡೆದು ಅಪಾರ ಸಾವು ನೋವು ಸಂಭವಿಸಿತ್ತು. ಅಯೋಧ್ಯಾದಿಂದ ಸಬರಮತಿ ರೈಲಿನಿಂದ ಹಿಂತಿರುಗಿದ್ದ ಕರಸೇವಕರೇ ತುಂಬಿಕ ರೈಲಿನ ಬೋಗಿಗೆ ಗೋಧ್ರಾ ಬಳಿ ಬೆಂಕಿ ಇಡಲಾಗಿತ್ತು. ಇದು ಮುಂದೆ ಕೋಮು ಗಲಭೆಗೆ ನಾಂದಿ ಹಾಡಿತ್ತು.
ಗೋಧ್ರೋತ್ತರ ಪ್ರಕರಣದಲ್ಲಿ ಮೋದಿ ಅವರ ಹೆಸರು ಕೂಡಾ ಕೇಳಿ ಬಂದಿತ್ತು. ಅದರೆ, ಈಗ ಮೋದಿ ಅವರು ರಾಷ್ಟ್ರೀಯ ನಾಯಕರಾಗಿ ಬೆಳೆದಿದ್ದಾರೆ. ಬಿಜೆಪಿಯ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರಾಗಿದ್ದಾರೆ. ಅಘೋಷಿತ ಪ್ರಧಾನಿ ಅಭ್ಯರ್ಥಿಯಾಗಿ ಮುಂದುವರೆದಿದ್ದಾರೆ.
2014ರ ಲೋಕಸಭೆ ಚುನಾವಣೆಯಲ್ಲಿ ಮೋದಿ ಸಾರಥ್ಯದಲ್ಲಿ ಬಿಜೆಪಿ ಎದುರಿಸಲಿದೆ. ಮೋದಿ ಅವರಿಗೆ ನೀಡಿದ ಬಡ್ತಿಯಿಂದ ಎನ್ ಡಿಎನಲ್ಲಿ ಸಾಕಷ್ಟು ಬೆಳವಣಿಗೆಗಳು ಆಗಿವೆ. ಎನ್ ಡಿಎನಿಂದ ಜೆಡಿಯು ಸಖ್ಯ ಕಳೆದುಕೊಂಡಿದೆ. ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಪ್ರಮುಖ ಹುದ್ದೆಗಳಿಗೆ ರಾಜೀನಾಮೆ ನೀಡಿ ನಂತರ ವಾಪಸ್ ಪಡೆದಿದ್ದಾರೆ.
ಈ ಮಧ್ಯೆ ಹಲವಾರು ನಾಯಕರು ಮೋದಿ ವಿರುದ್ಧ ಹರಿಹಾಯ್ದಿದ್ದಾರೆ. ಬಿಜೆಪಿ ಹಿರಿಯ ನಾಯಕ ಅಡ್ವಾಣಿ ಅವರ ಆಪ್ತ ಸುಧೀಂದ್ರ ಕುಲಕರ್ಣಿ ಮೋದಿ ನಿರಂಕುಶ ವ್ಯಕ್ತಿತ್ವ ಹೊಂದಿದವರು ಮತ್ತು ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಮೋದಿ ಪರವಾಗಿ ವರ್ತಿಸುವವರು ಎಂದು ಟೀಕಿಸಿದ್ದಾರೆ.
ಗುಜರಾತ್ ಮುಖ್ಯಮಂತ್ರಿ ಪರ ಅಲೆ ಉಂಟು ಮಾಡಿದ್ದು ಕಾರ್ಪೊರೇಟ್ ವಲಯ. ಮೋದಿಯವರು ಬಿರುಗಾಳಿ ಎಂದು ಬಿಜೆಪಿ ಹೇಳಿಕೊಳ್ಳುತ್ತಿದೆ. ಆದರೆ ಬಿರುಗಾಳಿ ಸಹಾಯ ಮಾಡುವುದಿಲ್ಲ. ಮೋದಿ ಅವರನ್ನು ಎಂದಿಗೂ ರಾಷ್ಟ್ರೀಯ ನಾಯಕರಾಗಿ ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಬಿಹಾರ ಸಿಎಂ ನಿತೀಶ್ ಕುಮಾರ್ ಹೇಳಿದ್ದಾರೆ.