ಪ್ರತಿಭಾ ಹಂತಕನ ಪತ್ನಿ-ಪುತ್ರ ಸಮಾಗಮ
ನಾದಿನಿಯ ವಶದಲ್ಲಿದ್ದ ಮಗುವನ್ನು ಪಡೆದುಕೊಳ್ಳಲು ಶಿವಕುಮಾರ್ ಪತ್ನಿ ಕೊನೆಗೂ ಸಫಲರಾಗಿದ್ದಾರೆ. ರಾಮನಗರ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಮಧ್ಯಸ್ಥಿಕೆಯಿಂದ ಪ್ರಕರಣ ಸುಖಾಂತ್ಯ ಕಂಡಿದೆ.
2005ರ ಡಿಸೆಂಬರ್ ನಲ್ಲಿ ಬೆಂಗಳೂರಿನ ಎಚ್ ಪಿ ಕಾಲ್ ಸೆಂಟರ್ ಉದ್ಯೋಗಿ 27 ವರ್ಷದ ಪ್ರತಿಭಾ ಶ್ರೀಕಂಠಮೂರ್ತಿ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಕ್ಯಾಬ್ ಡ್ರೈವರ್ ಶಿವಕುಮಾರ್ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿರುವುದು ಎಲ್ಲರಿಗೂ ಗೊತ್ತಿದೆ. ಹೀಗೆ ಜೈಲು ಸೇರಿರುವ ರಾಮನಗರ ತಾಲೂಕು ನಂಜಾಪುರ ಗ್ರಾಮದ ನಿವಾಸಿ ಹಾಗೂ ಕಾರು ಚಾಲಕ ಶಿವಕುಮಾರನ ಪತ್ನಿ ಸುಮಾ ಆಗ ತನ್ನ ಐದು ವರ್ಷದ ಮಗನನ್ನು ಕಳೆದುಕೊಳ್ಳುವ ಸಣ್ಣ ಸುಳಿವು ಇರಲಿಲ್ಲ.
ಮಗ ಜೈಲು ಸೇರುತ್ತಿದ್ದಂತೆ ಶಿವಕುಮಾರ್ ಅವರ ಪೋಷಕರಾದ ಕಾಂತರಾಜು ಹಾಗೂ ಕೆಂಚಮ್ಮ ಅವರ ಜೊತೆಗೆ ಅಕ್ಕ ಕೆಂಪಾಜಮ್ಮ ಅವರು ಶಿವಕುಮಾರ್ ಅವರ ಮಗ ಪ್ರಜ್ವಲ್ ನನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ಗಂಡ ಜೈಲು ಪಾಲಾದರೆ, ಮಗ ನಾದಿನಿ ಪಾಲಾಗಿದ್ದ.
ಹೀಗಾಗಿ ಸುಮಾ ತಮ್ಮ ಮಗನನ್ನು ತಮ್ಮ ವಶಕ್ಕೆ ನೀಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಬಂದಿತ್ತು. ಈ ಪ್ರಕರಣ ಎರಡು ಮೂರು ವರ್ಷ ನಂತರ ಸುಖಾಂತ್ಯ ಕಂಡಿದ್ದು, ಸುಮಾ ಅವರ ಮಡಿಲಿಗೆ ಪುತ್ರ ಸಿಕ್ಕಿದ್ದಾನೆ.
ಕಥೆ ಹಿನ್ನೆಲೆ: ಕನಕಪುರ ತಾಲೂಕಿನ ಕೆರೆಮೇಗಳದೊಡ್ಡಿಯ ತನ್ನ ಅಜ್ಜಿಯ ಮನೆಯಲ್ಲಿರುವ ಸುಮಾ ಅವರಿಗೆ ಮಗು ಕೊಡಿಸುವಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್ ಮಹತ್ವದ ಪಾತ್ರ ವಹಿಸಿದ್ದಾರೆ.
ನಂತರ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ಸಿ.ವಿ. ಜಾರ್ಜ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸುಮಾ ಸಲ್ಲಿಸಿದ್ದ ದೂರಿನ ವಿಚಾರಣೆ ನಡೆಸಿ ಪ್ರಜ್ವಲ್ ನನ್ನು ಸಾಕುತ್ತಿದ್ದ ನಾದಿನಿ ಕೆಂಪಾಜಮ್ಮ, ಅತ್ತೆ ಕೆಂಪಮ್ಮ ಮತ್ತು ಸಂಬಂಧಿಕರಿಗೆ ಬುದ್ಧಿವಾದ ಹೇಳಿ ಪ್ರಕರಣ ಸುಖಾಂತ್ಯಗೊಳಿಸಿದ್ದಾರೆ.
ಜಿಜಿ ಕಾಯ್ದೆ 2000 ಮತ್ತು 2006ರ ತಿದ್ದುಪಡಿ ಸೆಕ್ಷನ್ 39ರ ಅನ್ವಯ ಪ್ರಕರಣ ಇತ್ಯಾರ್ಥಗೊಳಿಸಿದ ಕಲ್ಯಾಣ ಸಮಿತಿ ಸದಸ್ಯರು ಮಗು ತನ್ನ ಜೈವಿಕ ತಾಯಿಯ ಬಳಿ ಬೆಳೆಯುವುದೇ ಸರಿ ಎಂದು ತೀರ್ಮಾನಿಸಿ ತೀರ್ಪು ನೀಡಿದರು. ತೀರ್ಪಿನಲ್ಲಿ ಮೊಮ್ಮಗನನ್ನು ನೋಡಲು ಅಜ್ಜಿ ಮತ್ತು ಸಂಬಂಧಿಕರಿಗೆ ಅವಕಾಶ ಮಾಡಿಕೊಡಲಾಗಿದೆ.
ಸಮಿತಿಯ ತೀರ್ಪು ಹೊರಬೀಳುತ್ತಿದ್ದಂತೆ ಕೆಂಪಮ್ಮ, ಕೆಂಪಾಜಮ್ಮ ಗೋಳಾಡಿದರು. ಮಗುವಿನ ಜೊತೆ ಸುಮಾ ಸಹ ತಮ್ಮೊಂದಿಗೆ ಇರಲು ತಮ್ಮ ಅಭ್ಯಂತರವೇನು ಇಲ್ಲ ಎಂದರು. ಇನ್ನೊಂದೆಡೆ ತನ್ನ ಮಗು ತನ್ನ ವಶಕ್ಕೆ ಬಂದ ಸಂತೋಷಕ್ಕೆ ಸುಮಾ ಅವರ ಕಣ್ಣಲ್ಲಿ ಆನಂದಬಾಷ್ಪ ಹರಿದಾಡಿತು. ಅವರು ಮಗನನ್ನು ಅಪ್ಪಿ ಮುದ್ದಾಡಿದರು.