ಮೊಬೈಲ್ ತಗೋತಾರಂತೆ ಕೇರಳ ಸಿಎಂ!
ಮಂಗಳವಾರ ತಮ್ಮ ಮಹತ್ವದ ನಿರ್ಧಾರವನ್ನು ಪ್ರಕಟಿಸಿದ ಕೇರಳ ಸಿಎಂ ಉಮ್ಮನ್ ಚಾಂಡಿ, ಜೀವನಶೈಲಿಯಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಳ್ಳಲು ನಿರ್ಧರಿಸಿದ್ದೇನೆ. ನಾನು ಶೀಘ್ರದಲ್ಲಿಯೇ ಸ್ವಂತದ ಮೊಬೈಲ್ ಕೊಂಡುಕೊಳ್ಳಲಿದ್ದೇನೆ ಎಂದು ಹೇಳಿದರು.
ಇದುವರೆಗೂ ಸಿಎಂ ಉಮ್ಮನ್ ಚಾಂಡಿ ಅವರ ಆಪ್ತ ಕಾರ್ಯದರ್ಶಿ ಮತ್ತು ಭದ್ರತಾ ಅಧಿಕಾರಿಗಳು, ಚಾಂಡಿ ಅವರ ದೂರವಾಣಿ ಕರೆಗಳನ್ನು ನಿರ್ವಹಿಸುತ್ತಿದ್ದರು. ಸಿಎಂ ಬಳಿ ಸ್ವಂತ ಮೊಬೈಲ್ ಫೋನ್ ಇರಲಿಲ್ಲ. ಸದ್ಯ ಚಾಂಡಿ ನಿರ್ಧಾರ ಬದಲಿಸಿ ಮೊಬೈಲ್ ಕೊಳ್ಳುವ ಮನಸ್ಸು ಮಾಡಿದ್ದಾರೆ.
ಟೀಂ ಸೋಲಾರ್ ಕಂಪೆನಿ ಹೆಸರಲ್ಲಿ ಕೋಟ್ಯಂತರ ರೂ. ವಂಚನೆ ಪ್ರಕರಣ ಕೇರಳ ರಾಜ್ಯದಲ್ಲಿ ಭಾರೀ ಸದ್ದು ಮಾಡಿದ್ದು, ಸಿಎಂ ಚಾಂಡಿ ಅವರ ಆಪ್ತ ಕಾರ್ಯದರ್ಶಿ ಟೆನಿ ಜೊಪನ್ ಮತ್ತು ಭದ್ರತಾ ಸಿಬ್ಬಂದಿ ಸಲೀಂ ರಾಜ್ ವಂಚಕರ ಜಾಲದೊಂದಿಗೆ ಮಾತುಕತೆ ನಡೆಸಿರುವುದು ಬೆಳಕಿಗೆ ಬಂದಿದೆ.
ಈ ಹಿನ್ನೆಲೆಯಲ್ಲಿ ಇಬ್ಬರೂ ಅಧಿಕಾರಿಗಳನ್ನು ಕೆಲಸದಿಂದ ವಜಾಗೊಳಿಸಿರುವ ಸಿಎಂ, ಮುಂದೆ ಇಂಥ ಪ್ರಸಂಗಳು ನಡೆಯಬಾರದು ಎಂದು ಸ್ವಂತ ಮೊಬೈಲ್ ಇಟ್ಟುಕೊಳ್ಳುಲು ನಿರ್ಧರಿಸಿದ್ದಾರೆ. ಸಿಎಂ ಸ್ವಂತ ಮೊಬೈಲ್ ಇಟ್ಟುಕೊಂಡರೂ ಅವರ ಸಂಪರ್ಕ ಕಷ್ಟವಾಗುತ್ತದೆ.
ಯಾವಾಗಲೂ ಅವರ ಫೋನ್ ಎಂಗೇಜ್ ಆಗಿರುತ್ತದೆ ಎಂದು ಉಮ್ಮನ್ ಚಾಂಡಿ ಅವರ ಕಚೇರಿಯ ಸಿಬ್ಬಂದಿಯ ಅಧಿಕಾರಿಗಳು ಹೇಳಿದ್ದಾರೆ. ಶಾಲಾ ಮಕ್ಕಳು ಕೈಯಲ್ಲಿ ಮೊಬೈಲ್ ಹಿಡಿದು ನಡೆದಾಡುವ ಕಾಲದಲ್ಲಿ ಸಿಎಂ ಬಳಿ ಮೊಬೈಲ್ ಇರಲಿಲ್ಲ ಎಂಬುದಂತೂ ಅಚ್ಚರಿ ಮೂಡಿಸಿದೆ.