ಕೊಲ್ಲಾಪುರದಲ್ಲಿ ಸರಣಿ ಹಂತಕ, ಹತ್ತು ಕೊಲೆ
ಭಾನುವಾರ ರಾತ್ರಿಯೂ ಕೊಲ್ಲಾಪುರ ರೈಲ್ವೆ ನಿಲ್ದಾಣದಲ್ಲಿ ಮಲಗಿದ್ದ ಕೂಲಿ ಕಾರ್ಮಿಕನ ಮೇಲೆ ಕಲ್ಲು ಎತ್ತಿಹಾಕಿ ಭೀಕರವಾಗಿ ಕೊಲೆ ಮಾಡಲಾಗಿದೆ. 10 ಕೊಲೆಗಳನ್ನು ಒಂದೇ ರೀತಿ ಮಾಡಿರುವ ಸರಣಿ ಹಂತಕನನ್ನು ಹಿಡಿಯುವುದು ಪೊಲೀಸರಿಗೂ ಸವಾಲಾಗಿ ಪರಿಣಮಿಸಿದೆ.
ಕಳೆದ ನಾಲ್ಕು ತಿಂಗಳಲ್ಲಿ ನಗರದಲ್ಲಿ ಹತ್ತು ಕೊಲೆಯಾಗಿದ್ದು, ಎಲ್ಲಾ ಕೊಲೆಗಳನ್ನು ಒಂದೇ ರೀತಿ ಮಾಡಲಾಗಿದೆ. ಕೊಲೆಯಾದ ಎಲ್ಲರೂ ಕಾರ್ಮಿಕರಾಗಿದ್ದಾರೆ. ಇದು ಒಬ್ಬ ಅಥವ ಒಂದೇ ಗುಂಪಿನ ಕೃತ್ಯ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಹತ್ತು ಕೊಲೆಗಳು ನಡೆದ ಸ್ಥಳದಲ್ಲಿ ಯಾವುದೇ ಸುಳಿವು ಪೊಲೀಸರಿಗೆ ದೊರಕಿಲ್ಲ. ಆದ್ದರಿಂದ ಕೊಲೆಗಾರರನ್ನು ಹಿಡಿಯುವುದು ಪೊಲೀಸರಿಗೆ ದೊಡ್ಡ ಸವಾಲಾಗಿದೆ. ಆರ್ಥಿಕ ದುಃಸ್ಥಿತಿಯಿಂದ ಮಾನಸಿಕ ಸ್ಥಿರತೆ ಕಳೆದುಕೊಂಡಿರುವ ವ್ಯಕ್ತಿ ಸರಣಿ ಹತ್ಯೆ ಮಾಡುತ್ತಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಕೂಲಿ ಕಾರ್ಮಿಕರೇ ಟಾರ್ಗೆಟ್ : ನಗರದಲ್ಲಿ ಕೊಲೆಯಾದ ಹತ್ತುಮಂದಿಯೂ ಕೂಲಿ ಕಾರ್ಮಿಕರಾಗಿದ್ದು, ಅವರನ್ನು ಕೊಲ್ಲುವ ಹಂತಕರು, ಹಣ ದೋಚಿ, ಪರಾರಿಯಾಗಿದ್ದಾನೆ. ಹತ್ತುಮಂದಿಯ ಶವಗಳನ್ನು ಹುಡುಕಿಕೊಂಡು ವಾರಸುದಾರರು ಬಂದಿಲ್ಲ. ಆದ್ದರಿಂದ ತನಿಖೆಗೆ ಹಿನ್ನಡೆ ಉಂಟಾಗುತ್ತಿದೆ.
ಸರಣಿ ಹಂತಕನಿಂದಾಗಿ ಕೊಲ್ಲಾಪುರ ಜನರು ಆತಂಕಗೊಂಡಿದ್ದು, ರಾತ್ರಿ 9 ಗಂಟೆ ನಂತರ ಮನೆಯಿಂದ ಹೊರ ಬರಲು ಹೆದರುತ್ತಿದ್ದಾರೆ. ಹಂತಕನನ್ನು ಶೀಘ್ರದಲ್ಲೇ ಬಂಧಿಸುತ್ತೇವೆ ಎಂದು ಮಹಾರಾಷ್ಟ್ರದ ಗೃಹ ಸಚಿವ ಆರ್.ಆರ್.ಪಾಟೀಲ್ ಭರವಸೆ ನೀಡಿದ್ದಾರೆ.
ಸರಣಿ ಕೊಲೆಗಳಿಂದ ಜನರು ಆತಂಕಗೊಂಡಿದ್ದಾರೆ. ಹಂತಕರನ್ನು ಬಂಧಿಸುವಂತೆ ಸಾಮಾಜಿಕ ಕಾರ್ಯಕರ್ತರು ಮತ್ತು ವಿವಿಧ ಸಂಘಟನೆಗಳು ಕೊಲ್ಲಾಪುರದಲ್ಲಿ ಪ್ರತಿಭಟನೆಯನ್ನು ನಡೆಸಿವೆ. ಪೊಲೀಸರು ಶೀಘ್ರವಾಗಿ ಬಂಧಿಸುವುದಾಗಿ ಭರವಸೆ ನೀಡಿದ್ದಾರೆ.