ಅಭಿನಂದನೆ ನೆಪದಲ್ಲಿ ಕಾಂಗ್ರೆಸ್ ಸಮಾವೇಶ
ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಸಮಾವೇಶ ನಡೆಸಿ ಜನರಿಗೆ ಅಭಿನಂದನೆ ಸಲ್ಲಿಸಿ, ಲೋಕಸಭೆ ಚುನಾವಣಾ ಪ್ರಚಾರ ಕಾರ್ಯಕ್ಕೂ ಚಾಲನೆ ನೀಡುವುದು ಕಾಂಗ್ರೆಸ್ ಪಕ್ಷದ ಉದ್ದೇಶ. ಕೆಪಿಸಿಸಿ ಸಮಾವೇಶದ ಯೋಜನೆ ಸಿದ್ದಗೊಳಿಸುತ್ತಿದ್ದು, ಈ ತಿಂಗಳ ಅಂತ್ಯದೊಳಗೆ ಸಮಾವೇಶಗಳು ನಡೆಯುವ ಸಾಧ್ಯತೆ ಇದೆ.
ವಿಧಾನಸಭೆ ಚುನಾವಣೆ ಮುಗಿದು ಪಕ್ಷ ಅಧಿಕಾರ ಪಡೆದ ತಕ್ಷಣವೇ ಈ ಸಮಾವೇಶಗಳನ್ನು ನಡೆಸಲು ನಿರ್ಧರಿಸಲಾಗಿತ್ತು. ಕಾಂಗ್ರೆಸ್ ಶಾಸಕಾಂಗ ಪಕ್ಷ ಸಭೆಯಲ್ಲಿಯೇ ಈ ಕುರಿತು ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಸ್ವಲ್ಪ ತಡವಾಗಿ ಪಕ್ಷ ಈ ಸಮಾವೇಶಗಳನ್ನು ನಡೆಸುತ್ತಿದೆ.
ಮತದಾರರಿಗೆ ಅಭಿನಂದನೆ ಸಲ್ಲಿಸುವ ಜೊತೆಗೆ ಲೋಕಸಭೆ ಚುನಾವಣೆಗೆ ವೇದಿಕೆ ಸಿದ್ಧಪಡಿಸುವುದು ಸಮಾವೇಶದ ಉದ್ದೇಶ. ಹೈ ಕಮಾಂಡ್ ನಾಯಕರು ಸಮಾವೇಶದ ದಿನಾಂಕ ನಿಗದಿಗೊಳಿಸುವಂತೆ ಕಾಂಗ್ರೆಸ್ ನಾಯಕರಿಗೆ ಸೂಚಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಸಮಾವೇಶದ ದಿನಾಂಗ ನಿಗದಿಗೊಳಿಸುವ ತಯಾರಿಯಲ್ಲಿದ್ದಾರೆ.
ಸಮಾವೇಶ ಎಲ್ಲಿ : ರಾಜ್ಯದ ನಾಲ್ಕು ಕಂದಾಯ ವಿಭಾಗಗಳಲ್ಲಿ ಸಮಾವೇಶವನ್ನು ನಡೆಸಲು ಕೆಪಿಸಿಸಿ ತೀರ್ಮಾನಿಸಿದೆ. ಅದರಂತೆ, ಬೆಂಗಳೂರು, ಮೈಸೂರು, ಗುಲ್ಬರ್ಗ ಹಾಗೂ ಬೆಳಗಾವಿಯಲ್ಲಿ ನಾಲ್ಕು ಸಮಾವೇಶಗಳು ನಡೆಯಲಿದೆ. ಆಯಾ ಭಾಗದ ಶಾಸಕರು, ಸಚಿವರು ಈ ಸಮಾವೇಶದ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ.
ಪ್ರತಿ ಜಿಲ್ಲೆಯ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಕಡ್ಡಾಯವಾಗಿ ಭಾಗವಹಿಸಲಿದ್ದಾರೆ. ಉಳಿದಂತೆ, ಆಯಾ ವಿಭಾಗಗಳ ಮುಖಂಡರು, ವಿಧಾನಸಭೆ ಹಾಗೂ ಪರಿಷತ್ ಸದಸ್ಯರು, ಕೇಂದ್ರ ಸಚಿವರು ಪಾಲ್ಗೊಳ್ಳಲಿದ್ದಾರೆ.
ಬೆಂಗಳೂರು ಮತ್ತು ಮೈಸೂರಿನ ಸಮಾವೇಶಗಳಿಗೆ ರಾಷ್ಟ್ರ ನಾಯಕರು ಆಗಮಿಸುತ್ತಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ರಾಷ್ಟ್ರೀಯ ನಾಯಕರು ನೀಡುವ ದಿನಾಂಕಗಳ ಮೇಲೆ, ಬೆಂಗಳೂರು ಹಾಗೂ ಮೈಸೂರಿನ ಸಮಾವೇಶಗಳು ನಿಗದಿಯಾಗಲಿವೆ.