ಕನಿಮೋಳಿ ಆಸ್ತಿ ಮೂರು ಪಟ್ಟು ಹೆಚ್ಚಾಗಿದೆ ಕಣ್ರಿ
ರಾಜ್ಯಸಭಾ ಸದಸ್ಯೆ ಕನಿಮೋಳಿ ಸಲ್ಲಿಸಿರುವ ಆಸ್ತಿ ವಿವರದಂತೆ ಕಳೆದ 6 ವರ್ಷಗಳಲ್ಲಿ ಅವರ ಆಸ್ತಿ ಮೂರು ಪಟ್ಟು ಅಧಿಕವಾಗಿದೆ. 8.56 ಕೋಟಿ ರು ಇದ್ದ ಆಸ್ತಿ ಈಗ 26.67 ಕೋಟಿ ರು ಆಗಿದೆ. ಇದರಲ್ಲಿ ಸ್ಥಿರಾಸ್ಥಿ ಹಾಗೂ ಚರಾಸ್ಥಿ ಎರಡೂ ಸೇರಿದೆ.
ಒಟ್ಟು 16.67ಚರಾಸ್ಥಿ ಹಾಗೂ 10 ಕೋಟಿ ರು ಸ್ಥಿರಾಸ್ಥಿ ಹೊಂದಿದ್ದಾರೆ. ಆಭರಣಗಳ ಪೈಕಿ 360 ಗ್ರಾಂ ಇದ್ದದ್ದು ಈಗ 700 ಗ್ರಾಂ ನಷ್ಟು ಚಿನ್ನಾಭರಣ ಹೊಂದಿದ್ದಾರಂತೆ. ಆದರೆ, 10 ಕಾರೆಟ್ ತೂಗುವ ವಜ್ರಭಾರಣ ಬಗ್ಗೆ ಈ ಬಾರಿ ಸೇರಿಸಿಲ್ಲ. ಸುಮಾರು 69.60 ಲಕ್ಷ ರು ಸಾಲ ಇದೆಯಂತೆ. ಕಲೈನರ್ ಟಿವಿಯಲ್ಲಿ ಕನಿಮೋಳಿ ಸುಮಾರು 2 ಕೋಟಿ ಮೌಲ್ಯದ ಷೇರುಗಳನ್ನು ಹೊಂದಿದ್ದಾರೆ.
ಬಹುಕೋಟಿ 2ಜಿ ಸ್ಪೆಕ್ಟ್ರಂ ಹಗರಣದ ಆರೋಪಿಯಾಗಿ ಕನಿಮೋಳಿ ಜೈಲುವಾಸವನ್ನೂ ಅನುಭವಿಸಿದ್ದರು. ಕನಿಮೋಳಿ ಸೇರಿದಂತೆ ತಮಿಳುನಾಡಿನ 6 ರಾಜ್ಯಸಭಾ ಸದಸ್ಯರ ಅವಧಿಯು ಜುಲೈಗೆ ಅಂತ್ಯಗೊಳ್ಳಲಿದೆ. ತಂದೆಯ ಆಶೀರ್ವಾದವನ್ನು ಪಡೆದ ಬಳಿಕ ಅವರು, ಸೋದರ ಹಾಗೂ ಮಾಜಿ ಉಪಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಜೊತೆಗೂಡಿ ನಾಮಪತ್ರ ಸಲ್ಲಿಸಿದ್ದಾರೆ.
ರಾಜ್ಯಸಭೆಗೆ ಆಯ್ಕೆಯಾಗಲು ಕನಿಷ್ಠ 34 ಶಾಸಕರ ಬೆಂಬಲ ಬೇಕಾಗುತ್ತದೆ. 235 ಸ್ಥಾನಗಳ ಅಸೆಂಬ್ಲಿಯಲ್ಲಿ ಡಿಎಂಕೆ ಬಳಿ ಸದ್ಯಕ್ಕೆ 23 ಶಾಸಕರ ಬೆಂಬಲ ಮಾತ್ರ ಇದೆ. ಜಯಲಲಿತಾ ಅವರ ಎಐಎಡಿಎಂಕೆ (ಸ್ಪೀಕರ್ ಸೇರಿ 151 ಸೀಟು)ಡಿಎಂಡಿಕೆ 29, ಸಿಪಿಐ-ಎಂ 10, ಸಿಪಿಐ 8 ಹಾಗೂ ಕಾಂಗ್ರೆಸ್ 5 ಸ್ಥಾನ ಹೊಂದಿದೆ.
ರಾಜ್ಯಸಭಾ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಕೋರಿ ಇತರ ಪಕ್ಷಗಳ ನಾಯಕರನ್ನು ಡಿಎಂಕೆ ಸಂಪರ್ಕಿಸಲಿದೆ. ಕಾಂಗ್ರೆಸ್, ಪಿಎಂಕೆ, ಡಿಎಂಡಿಕೆ ಪಕ್ಷಗಳ ಬಾಗಿಲು ತಟ್ಟುತ್ತಿದೆ. ಎಡಪಕ್ಷಗಳು ಮಾತ್ರ ಬೆಂಬಲ ನೀಡುವುದು ಕಷ್ಟ ಎನ್ನುತ್ತಿವೆ. ನಾಯಕಿ ಬೃಂದಾ ಕಾರಟ್ ಅವರು ಕನಿಮೋಳಿಗೆ ಬೆಂಬಲಿಸುವ ಸಾಧ್ಯತೆ ಕಮ್ಮಿ ಎಂದಿದ್ದಾರೆ.
ಕಾಂಗ್ರೆಸ್ ಹಿರಿಯ ನಾಯಕಿ ಹಾಗೂ ಕೇಂದ್ರ ಸಚಿವೆ ಜಯಂತಿ ನಟರಾಜನ್ ಕರುಣಾನಿಧಿಯನ್ನು ಅವರ ಚೆನ್ನೈ ನಿವಾಸದಲ್ಲಿ ಭೇಟಿಯಾದ ಬಳಿಕ ಪಕ್ಷ ಈ ತೀರ್ಮಾನಕ್ಕೆ ಬಂದಿದೆ. ಶ್ರೆಲಂಕಾ ತಮಿಳರ ರಕ್ಷಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು ಪೂರಕವಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಯುಪಿಎ ಮೈತ್ರಿ ಕೂಟದಿಂದ ಅದು ಹೊರಜಿಗಿದಿತ್ತು.