ಬೆಂಗಳೂರು : ತಿರುಮಲ ಹಾಲಿನಲ್ಲಿ ಸಿಕ್ತು ಸತ್ತ ಜಿರಲೆ
ನಗರದ ಕೆ.ಆರ್.ಪುರ ಸಮೀಪದ ಟಿ.ಸಿ. ಪಾಳ್ಯದ ಬೆಮೆಲ್ ಲೇ ಔಟ್ನ ನಿವಾಸಿಯೊಬ್ಬರು ಪ್ರತಿದಿನ ಮನೆಗೆ ಆಂಧ್ರ ಪ್ರದೇಶ ಮೂಲದ ತಿರುಮಲ ಹಾಲು ತರಿಸುತ್ತಾರೆ. ಪ್ರತಿದಿನ ಅರ್ಧ ಲೀಟರ್ ನ 2 ಪ್ಯಾಕೆಟ್ ಗಳು ಇವರ ಮನೆಗೆ ಬರುತ್ತವೆ.
ಶನಿವಾರವೂ ಎಂದಿನಂತೆ 2 ಪ್ಯಾಕೆಟ್ ಹಾಲು ಮನೆಗೆ ಬಂದಿದೆ. ಹಾಲನ್ನು ಕಾಯಿಸಲು ಪಾತ್ರೆಗೆ ಸುರಿದಾಗ, ಅದರಲ್ಲಿ ಸತ್ತ ಜಿರಳೆಗಳು ಸಿಕ್ಕಿವೆ. ಇದರಿಂದ ಆತಂಕಗೊಂಡ ಅವರು, ಮತ್ತೊಂದು ಪ್ಯಾಕೆಟ್ ನಲ್ಲಿಯ ಹಾಲನ್ನು ಗಮನಿಸಿದ್ದಾರೆ. ಅದರಲ್ಲಿಯೂ 2 ಜಿರಲೆಗಳು ಸತ್ತುಬಿದ್ದಿದ್ದವು.
ತಕ್ಷಣ ಗ್ರಾಹಕರು, ಪ್ರತಿದಿನ ಹಾಲು ಸರಬರಾಜು ಮಾಡುವವರನ್ನು ಸಂಪರ್ಕಿಸಿದ್ದಾರೆ. ತಮೆಗೆ ತಿಳಿಯದು ನೀವು ಕಂಪನಿಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಿ ಎಂದು ಏಜೆಂಟ್ ಉತ್ತಿರಿಸಿದ್ದಾರೆ. ತಿರುಮಲ ಕಂಪನಿ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಗ್ರಾಹಕರಿಗೆ ಅಧಿಕಾರಿಗಳು ಕೊಲೆ ಬೆದರಿಕೆ ಹಾಕಿದ್ದಾರೆ.
ಅಧಿಕಾರಿ ಹೇಳಿದ್ದೇನು : ನಾವು ಕೊಂಡ ನಿಮ್ಮ ಕಂಪನಿಯ ಹಾಲಿನಲ್ಲಿ ಸತ್ತ ಜಿರಲೆಗಳು ಪತ್ತೆಯಾಗಿವೆ ಎಂದು ಗ್ರಾಹಕರು ಅಧಿಕಾರಿಗಳಿಗೆ ಫೋನ್ ಮಾಡಿ ಮಾಹಿತಿ ನೀಡಿದ್ದಾರೆ. ಆದರೆ, ಅಧಿಕಾರಿಗಳು ಉಡಾಫೆಯ ಉತ್ತರ ನೀಡಿದ್ದಾರೆ.
"ಇದಕ್ಕೆ ನಾವೇನು ಮಾಡೋಣ. ನಿಮಗೆ ನಮ್ಮ ಕಂಪನಿಯ ಹಾಲು ಇಷ್ಟವಿಲ್ಲದಿದ್ದರೆ, ಬೇರೆ ಕಂಪನಿಯ ಹಾಲು ಕೊಂಡುಕೊಳ್ಳಿ. ಜಿರಲೆ ಸಿಕ್ಕಿರುವುದಕ್ಕೆ ನಾವೇನು ಮಾಡಲು ಸಾಧ್ಯವಿಲ್ಲ" ಎಂದು ಉತ್ತರಿಸಿದ್ದಾರೆ.
ಅಲ್ಲದೇ ಇದೇ ವಿಷಯವನ್ನು ಮಾಧ್ಯಮಗಳ ಮುಂದೆ ತಂದೆ ರಂಪ ಮಾಡಿದರೆ, ಕೊಲೆ ಮಾಡುವುದಾಗಿಯೂ ಬೆದರಿಕೆ ಹಾಕಿದ್ದಾರೆ. ಆಂಧ್ರ ಪ್ರದೇಶದ ವೆಲ್ಲೂರಿನ ಗುಂಜಾಲು ಗ್ರಾಮದಲ್ಲಿರುವ ತಿರುಮಲ ಮಿಲ್ಕ್ ಪ್ರೊಡೆಕ್ಟರ್ ಪ್ರೈವೇಟ್ ಲಿಮಿಟೆಡ್ನಲ್ಲಿ ಈ ಹಾಲಿನ ಪ್ಯಾಕೆಟ್ ಗಳು ಸಿದ್ಧಗೊಂಡಿವೆ.