ಒಕ್ಕಲಿಗ ಶಾಸಕರ ವಿರುದ್ದ ಆಕ್ರೋಶಗೊಂಡ ಶ್ರೀಗಳು
ಒಕ್ಕಲಿಗ ಸಮಾಜದ ಹೆಸರು ಹೇಳಿಕೊಂಡು ಶಾಸಕರಾದವರು, ಒಕ್ಕಲಿಗ ಕೋಟಾದಡಿಯಲಿ ಸಚಿವರಾದವರು ನಮ್ಮ ಸಮುದಾಯ ಪ್ರೀತಿಯಿಂದ ಆಯೋಜಿಸಿರುವ ಅಭಿನಂದನಾ ಸಮಾರಂಭಕ್ಕೆ ಗೈರು ಹಾಜರಾಗಿರುವುದು ನಮಗೆ ಬೇಸರವಾಗಿದೆ.
ಅಧಿಕಾರ ಶಾಶ್ವತವಲ್ಲ, ಪ್ರೀತಿ ತೋರಿಸುವ ಸಮುದಾಯದ ಮನಸ್ಸಿಗೆ ನೋವು ತರಬೇಡಿ. ಏನೇ ಕೆಲಸ ಕಾರ್ಯಗಳಿದ್ದರೂ ಅದನ್ನು ಬದಿಗೊತ್ತಿ ಅಭಿನಂದನಾ ಸಮಾರಂಭಕ್ಕೆ ಆಗಮಿಸಬೇಕಿತ್ತು ಎಂದು ಒಕ್ಕಲಿಗ ಶಾಸಕರನ್ನು ಶ್ರೀಗಳು ತರಾಟೆಗೆ ತೆಗೆದುಕೊಂಡಿದ್ದಾರೆ.
ಭೂಮಿ ಬಳಗ ಟ್ರಸ್ಟ್ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡುತ್ತಿದ್ದ ಶ್ರೀಗಳು, ಈ ಸಮಾರಂಭಕ್ಕೆ ಪ್ರಮುಖವಾಗಿ ಯಾರು ಬರಬೇಕಾಗಿತ್ತೋ ಅವರೇ ಬಂದಿಲ್ಲ . ಕನಿಷ್ಠ ಮೂವತ್ತು ಶಾಸಕರು ಬರಬಹುದು ಎಂದು ಅಂದಾಜಿಸಿದ್ದೆವು, ನಮ್ಮ ಊಹೆ ಸುಳ್ಳಾಯಿತು ಎಂದು ನಿರ್ಮಲಾನಂದನಾಥ ಸ್ವಾಮೀಜಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಸಮಾರಂಭಕ್ಕೆ ಪ್ರಮುಖವಾಗಿ ಮಾಜಿ ಸಿಎಂ ಕುಮಾರಸ್ವಾಮಿ, ಡಿ ಕೆ ಶಿವಕುಮಾರ್, ಚೆಲುವರಾಯಸ್ವಾಮಿ ಗೈರು ಹಾಜರಾಗಿದ್ದರು.
ಮಾಜಿ ಸಿಎಂ ಸದಾನಂದ ಗೌಡ, ಸಚಿವ ಟಿ ಬಿ ಜಯಚಂದ್ರ, ಸಿ ಟಿ ರವಿ, ಎಸ್ ಟಿ ಸೋಮಶೇಖರ್, ಎಂ ಟಿ ಕೃಷ್ಣಪ್ಪ, ದೊಡ್ಡರಂಗೇ ಗೌಡ ಮುಂತಾದವರು ಹಾಜರಾಗಿದ್ದರು.
ಉತ್ತರಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಬೆಂಗಳೂರಿನ ಶಾಖಾ ಮಠದಲ್ಲಿ ನಿರ್ಮಲಾನಂದನಾಥ ಸ್ವಾಮೀಜಿಯವರನ್ನು ಶುಕ್ರವಾರ (ಜೂ 14) ಭೇಟಿಯಾಗಿದ್ದರು.