ಬೆಂಗಳೂರು ದಲಿತರ ಮನೆಯಲ್ಲಿ ಪೇಜಾವರಶ್ರೀ ಪಾದಪೂಜೆ
ಪರಿಶಿಷ್ಟ ಜಾತಿ ಮತ್ತು ಪಂಗಡ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಅಶ್ವತ್ಥನಾರಾಯಣ ಅವರ ಮನೆಗೆ ವಿಶ್ವೇಶತೀರ್ಥ ಸ್ವಾಮೀಜಿ ಅವರು ಭೇಟಿ ನೀಡಿ, ಪೂಜೆ ನೆರವೇರಿಸಿದರು. ಆ ವೇಳೆ ಅಶ್ವತ್ಥನಾರಾಯಣ ಮತ್ತು ಅವರ ಕುಟುಂಬದವರು ಶ್ರೀಗಳಿಗೆ ಪಾದಪೂಜೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿಶ್ವೇಶತೀರ್ಥ ಸ್ವಾಮೀಜಿ ಅವರು 'ಬಸವಣ್ಣನ ಕಾಲದಿಂದ ಪಂಕ್ತಿ ಬೇಧವಿದೆ. ಆ ಶಿಷ್ಟಾಚಾರವು ಆಹಾರ ಪದ್ಧತಿಯ ಒಂದು ಭಾಗವಾಗಿ ಆಚರಣೆಯಲ್ಲಿದೆಯಷ್ಟೇ' ಎಂದು ಅಭಿಪ್ರಾಯಪಟ್ಟರು.
ದಲಿತ ಸಮಿತಿಗಳ ಆರೋಪ: ಉಡುಪಿಯ ಎಂಟು ಮಠಗಳ ಊಟೋಪಚಾರ ವ್ಯವಸ್ಥೆ, ಪರ್ಯಾಯ ಮಠಾಧೀಶರ ನಡೆ ನುಡಿ, ಕೃಷ್ಣ ದೇಗುಲದ ಸುತ್ತ ಹುಟ್ಟಿಕೊಂಡಿರುವ ವಿವಾದ ಇದರ ಬಗ್ಗೆಯೇ ಮಾಧ್ಯಮಗಳು ಆಸಕ್ತಿ ವಹಿಸಿರುವುದಕ್ಕೆ ಪೇಜಾವರಶ್ರೀಗಳು ಇತ್ತೀಚೆಗೆ ಅಸಂತೋಷ ವ್ಯಕ್ತಪಡಿಸಿದ್ದರು.
ಅಷ್ಟಮಠಗಳ ಆಚರಣೆ ಬಗ್ಗೆ ಆಸಕ್ತಿ ವಹಿಸಿರುವ ಮಾಧ್ಯಮಗಳು ಶೃಂಗೇರಿ, ಧರ್ಮಸ್ಥಳ ಹಾಗೂ ಕುಕ್ಕೆ ಸುಬ್ರಮಣ್ಯ ದೇಗುಲಗಳಲ್ಲಿ ಅನುಸರಿಸುವ ಪದ್ಧತಿಗಳ ಬಗ್ಗೆ ಪ್ರಶ್ನಿಸುವುದಿಲ್ಲ ಏಕೆ? ಎಂದೂ ಪೇಜಾವರ ಶ್ರೀಗಳು ಪ್ರತಿ ಪ್ರಶ್ನೆ ಹಾಕಿದ್ದರು.
ಈ ಸಂದರ್ಭದಲ್ಲಿ ಶ್ರೀಗಳು ಅನಗತ್ಯವಾಗಿ ಜನತೆಯನ್ನು ಜಾತಿ ಆಧಾರದ ಮೇಲೆ ಪ್ರತ್ಯೇಕಿಸಿ ಮಾತನಾಡಿದ್ದಾರೆ ಜತೆಗೆ ಬಸವಣ್ಣ ಅವರ ವಚನಗಳ ಉದಾಹರಣೆ ನೀಡಿ ಅಪಮಾನ ಮಾಡಿದ್ದಾರೆ ದಲಿತ ಸಮಿತಿಗಳು ಆರೋಪಿಸಿದ್ದವು.