ತೈಲ ಮಾಫಿಯಾದಿಂದ ಮೊಯ್ಲಿಗೆ ಕೊಲೆ ಬೆದರಿಕೆ!
ಇದನ್ನು ಸ್ವತಃ ವೀರಪ್ಪ ಮೊಯ್ಲಿ ಅವರೇ ಶುಕ್ರವಾರ ದೃಢಪಡಿಸಿದ್ದು, "ಯಾವುದೇ ತೈಲ ಲಾಬಿಗಳ ಒತ್ತಡಕ್ಕೆ ಮತ್ತು ಬೆದರಿಕೆಗಳಿಗೆ ಮಣಿಯುವುದಿಲ್ಲ. ತೈಲ ಆಮದು ನೀತಿಯನ್ನು ಬಿಗಿಗೊಳಿಸುವ ಕ್ರಮವನ್ನು ಕೇಂದ್ರ ಸರಕಾರ ಮುಂದುವರಿಸುವುದು. ಅಲ್ಲದೆ, ತೈಲ ಆಮದಿನಿಂದ ದೇಶದ ಹಣವೆಲ್ಲ ಹೊರಹೋಗುತ್ತಿದೆ. ಇದನ್ನು ತಡೆಯುವ ಜವಾಬ್ದಾರಿ ಸರಕಾರದ ಮೇಲಿದೆ" ಎಂದು ಅವರು ಉತ್ತರಿಸಿದ್ದಾರೆ.
"ಇಂಥ ಬೆದರಿಕೆಗಳು ಕೇಂದ್ರ ತೈಲ ಸಚಿವರಿಗೆ ಬಂದಿರುವುದು ಇದು ಮೊದಲೇನಲ್ಲ. ಹಿಂದೆ ಕೂಡ ತೈಲ ಸಚಿವರಿಗೆ ಕೊಲೆ ಬೆದರಿಕೆಗಳು ಬಂದಿವೆ. ಕೆಲ ತೈಲ ಲಾಬಿಗಳಿಗೆ ಆಮದು ತಡೆಯುವುದು ಬೇಕಾಗಿಲ್ಲ. ತೈಲ ಸಚಿವರು ಕೆಲ ಕಠಿಣ ನಿರ್ಧಾರ ತೆಗೆದುಕೊಳ್ಳುವ ಹಂತದಲ್ಲಿ ಅಡ್ಡಗಟ್ಟುತ್ತಲೇ ಬಂದಿವೆ. ಇವು ಬೆದರಿಕೆಗಳಷ್ಟೇ. ಇವಕ್ಕೆಲ್ಲ ಬೆದರುವ ಅಗತ್ಯವಿಲ್ಲ" ಎಂದು ಹೇಳಿದ್ದಾರೆ.
"ನಾನು ಅಸಹಾಯಕನಲ್ಲ. ಪುಕ್ಕಲ ಮಂತ್ರಿಯಾಗಿದ್ದರೆ ಮುಂದೆ ಹೆಜ್ಜೆ ಇಡುತ್ತಿರಲಿಲ್ಲ. ದೇಶದ ಹಿತಕ್ಕಾಗಿ ನಾನಿಲ್ಲಿ ಕೆಲಸ ಮಾಡುತ್ತಿದ್ದೇನೆ. ಈ ರೀತಿ ಹೆದರಿಸುವುದರಿಂದ ನಾನು ನಿರ್ಧಾರ ತೆಗೆದುಕೊಳ್ಳುವುದರಿಂದ ತಡೆಯಬಹುದು ಎಂದಿದ್ದರೆ ಅದು ತಪ್ಪು. ತೈಲ ಆಮದು ದೇಶದ ಹಿತಕ್ಕೆ ಮಾರಕ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬೆಲೆ ನಮಗೆ ಸವಾಲು ಒಡ್ಡಿದೆ" ಎಂದು ಅವರು ನುಡಿದಿದ್ದಾರೆ.
ದೇಶದಲ್ಲಿಯೇ ನೈಸರ್ಗಿಕವಾಗಿ ತೈಲ ಉತ್ಪಾದಿಸುವ ಕೇಂದ್ರದ ನೀತಿಯನ್ನು ತೈಲವನ್ನು ಹೊರದೇಶಗಳಿಂದ ಆಮದು ಮಾಡಿಕೊಳ್ಳುತ್ತಿರುವ ತೈಲ ಕಂಪನಿಗಳು ಪ್ರಬಲವಾಗಿ ವಿರೋಧಿಸಿವೆ. ಆದರೆ, ದೇಶವನ್ನು ಸ್ವಾವಲಂಬನೆಯತ್ತ ಒಯ್ಯಬೇಕೆಂದರೆ ಇಂಥ ಕಠಿಣ ಕ್ರಮ ಅಗತ್ಯ ಎಂದು ವೀರಪ್ಪ ಮೊಯ್ಲಿ ಪ್ರತಿವಾದಿಸಿದ್ದಾರೆ. ಆದರೆ, ಯಾರಿಂದ ಬೆದರಿಕೆ ಬರುತ್ತಿದೆ ಎಂಬ ಬಗ್ಗೆ ವಿವರ ನೀಡಿಲ್ಲ.
ದೇಶದ ತೈಲ ನೀತಿಯನ್ನು ರೂಪಿಸುತ್ತಿರುವವರು ತೈಲ ಮಂತ್ರಿಯಲ್ಲ, ಪ್ರಧಾನ ಮಂತ್ರಿಯಲ್ಲ, ಸೋನಿಯಾ ಗಾಂಧಿಯೂ ಅಲ್ಲ. ಆದರೆ, ದೇಶೀಯವಾಗಿ ತೈಲ ಉತ್ಪಾದಿಸಲು ಯತ್ನಿಸುತ್ತಿರುವ ರಿಲಯನ್ಸ್ ಕಂಪನಿಯವರು. ರಿಲಯನ್ಸ್ ಲಾಬಿಗೆ ಮಣಿದು, ತೈಲ ಆಮದು ಕಠಿಣಗೊಳಿಸುವಂಥ ನೀತಿಯನ್ನು ಕೇಂದ್ರ ರೂಪಿಸುತ್ತಿದೆ ಎಂದು ಕೂಡ ಆರೋಪ ಕೇಳಿಬಂದಿದೆ.
ವೀರಪ್ಪ ಮೊಯ್ಲಿ ಅವರು ತಮಗೆ ಕೊಲೆ ಬೆದರಿಕೆ ಬಂದಿದೆ ಎಂದು ನೀಡಿರುವ ಹೇಳಿಕೆಯನ್ನು ಎಡಪಕ್ಷಗಳು ತರಾಟೆಗೆ ತೆಗೆದುಕೊಂಡಿವೆ. ವೀರಪ್ಪ ಮೊಯ್ಲಿ ಒಬ್ಬ 'ಫಸ್ಟ್ ಕ್ಲಾಸ್ ಸುಳ್ಳುಗಾರ' ಅವರು ಕೋರ್ಟಿಗೆ ಬೇಕಿದ್ದರೆ ಹೋಗಲಿ ಎಂದು ಸಿಪಿಐ ನಾಯಕ ಗುರುದಾಸ್ ದಾಸಗುಪ್ತಾ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.