ಚಿತ್ರ: ಕಹಿ ನೆನಪಿನೊಂದಿಗೆ ಕೇರಳ ತಲುಪಿದ ಶ್ರೀಶಾಂತ್
ಕೊಚ್ಚಿ, ಜೂ.12: ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದ ಪ್ರಮುಖ ಆರೋಪಿಯಾಗಿ ಸುಮಾರು 27 ದಿನಗಳ ಕಾಲ ಜೈಲಿನಲ್ಲಿದ್ದ ಶ್ರೀಶಾಂತ್ ತನ್ನ ಹುಟ್ಟೂರು ಕೇರಳ ತಲುಪಿದ್ದಾರೆ. ತಿಹಾರ್ ಜೈಲಿನಿಂದ ಮುಕ್ತನಾದ ರಾಜಸ್ಥಾನ್ ರಾಯಲ್ಸ್ ತಂಡ ಹಾಗೂ ಟೀಂ ಇಂಡಿಯಾದ ವೇಗಿ ಶ್ರೀಶಾಂತ್ ಗೆ ಮತ್ತೆ ಕ್ರಿಕೆಟ್ ಆಡುವ ಕನಸು ಹುಟ್ಟಿಕೊಂಡಿದೆ ಆದರೆ, ಕಹಿ ನೆನಪುಗಳು ಇನ್ನೂ ಕಾಡುತ್ತಲೇ ಇದೆ.
ಸ್ಪಾಟ್ ಫಿಕ್ಸಿಂಗ್ ದೆಹಲಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಕ್ರಿಕೆಟ್ ಆಟಗಾರ ಶ್ರೀಶಾಂತ್ ಅವರು ತಿಹಾರ್ ಜೈಲಿನಿಂದ ಬಿಡುಗಡೆಯಾಗಿದ್ದು, ಬುಧವಾರ ಬೆಳಗ್ಗೆ ಕೇರಳದ ಕೊಚ್ಚಿಗೆ ಆಗಮಿಸಿದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯ ಶ್ರೀಶಾಂತ್ ಸೇರಿದಂತೆ ಪ್ರಕರಣದ ಎಲ್ಲ 21 ಆರೋಪಿಗಳಿಗೆ ನಿನ್ನೆ ಜಾಮೀನು ಮಂಜೂರು ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು. ಮಂಗಳವಾರ ಸಂಜೆ ತಿಹಾರ್ ಜೈಲಿನಿಂದ ಬಿಡುಗಡೆಯಾಗಿದ್ದ ಶ್ರೀಶಾಂತ್, ಬುಧವಾರ ಬೆಳಗ್ಗೆ ತಮ್ಮ ತವರು ಮನೆ ಕೇರಳಕ್ಕೆ ಆಗಮಿಸಿದರು.
ಶ್ರೀಶಾಂತ್ ಕೊಚ್ಚಿ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆಯೇ ನೂರಾರು ಅಭಿಮಾನಿಗಳು ಅವರನ್ನು ಮುತ್ತಿಕೊಂಡರು. ಅಲ್ಲದೆ ಕೆಲವರು ಶ್ರೀಶಾಂತ್ ಗೆ ಶಾಲು ಹೊದಿಸಿ, ಅದ್ಧೂರಿಯಾಗಿ ಬರಮಾಡಿಕೊಂಡರು. ಶ್ರೀಶಾಂತ್ ಶಾಂತಕುಮಾರ್ ಮನೆಗೆ ಮರಳಿದ ಚಿತ್ರಗಳು ಇಲ್ಲಿದೆ.
ವೇಗಿ ಶ್ರೀಶಾಂತ್ ಹೇಳಿದ್ದೇನು?
ನಾನು ಯಾವುದೇ ತಪ್ಪು ಮಾಡಿಲ್ಲ. ನ್ಯಾಯಾಲಯದ ವಿಚಾರಣೆಯಿಂದ ತಾವು ನಿರ್ದೋಷಿಯಾಗಿ ಹೊರಬರುತ್ತೇನೆ ಮತ್ತು ಶೀಘ್ರದಲ್ಲಿಯೇ ಭಾರತ ಕ್ರಿಕೆಟ್ ತಂಡವನ್ನು ಸೇರಿಕೊಳ್ಳುತ್ತೇನೆ
ಶ್ರೀಶಾಂತ್ ಗೆ ಜಾಮೀನು
ಮೇ 16ರಂದು ದೆಹಲಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಶ್ರೀಶಾಂತ್ ಸತತ 27 ದಿನಗಳ ಕಾಲ ಜೈಲುವಾಸ ಅನುಭವಿಸಿದ್ದ ಶ್ರೀಶಾಂತ್ ಗೆ ದೆಹಲಿ ನ್ಯಾಯಾಲಯ ಹೆಚ್ಚುವರಿ ಸೆಷನ್ಸ್ ನ್ಯಾ. ವಿನಯ್ ಕುಮಾರ್ ಆವರು ಜಾಮೀನು ಮಂಜೂರು ಮಾಡಿದ್ದರು. 50 ಸಾವಿರ ರು ವೈಯಕ್ತಿಕ ಬಾಂಡ್ ಹಾಗೂ ಒಬ್ಬರ ಶ್ಯೂರಿಟಿ ಸಹಿ ಹಾಕಿಸಿಕೊಳ್ಳಲಾಗಿತ್ತು.
ಶ್ರೀಶಾಂತ್ ಅವರು ಪಾಸ್ ಪೋರ್ಟ್ ಪೊಲೀಸರ ವಶದಲ್ಲಿದ್ದು, ದೇಶ ಬಿಟ್ಟು ಹೊರಗೆ ತೆರಳುವಂತಿಲ್ಲ. ದೇಶದ ಇತರೆಡೆ ಓಡಾಟ ನಡೆಸಲು ಅನುಮತಿ ಪಡೆಯಬೇಕು
ಕುಟುಂಬ ಸದಸ್ಯರ ಜೊತೆ ಶ್ರೀ
ಶ್ರೀಶಾಂತ್ ಸೇರಿದಂತೆ ಇತರೆ ಕೆಲವು ಆರೋಪಿಗಳ ಮೇಲೆ MCOCA ಕಾಯ್ದೆ ಯಡಿ ಪ್ರಕರಣ ದಾಖಲಿಸಿ ಸಾಕ್ಷಿ ಒದಗಿಸಲು ಹೆಣಗಾಡಿದ ದೆಹಲಿ ಪೊಲೀಸರಿಗೆ ನ್ಯಾ. ವಿನಯ್ ಕುಮಾರ್ ಛೀಮಾರಿ ಹಾಕಿದ್ದಾರೆ.
ಅಮ್ಮನ ಅಪ್ಪುಗೆ
ನನ್ನ ಮಗ ಯಾವುದೆ ತಪ್ಪು ಮಾಡಿಲ್ಲ. ದೇವರ ಬಳಿ ಬೇಡಿಕೊಂಡಿದ್ದು ಫಲನೀಡಿದೆ. ನ್ಯಾಯಾಂಗ ವ್ಯವಸ್ಥೆ ಮೇಲೆ ನಮಗೆ ನಂಬಿಕೆ ಇದೆ ಎಂದು ಶ್ರೀಶಾಂತ್ ಪೋಷಕರು ಹೇಳಿದ್ದಾರೆ.
ಯಾವ ಕೇಸು ಹಾಕಲಾಗಿತ್ತು
ಶ್ರೀಶಾಂತ್, ಅಜಿತ್ ಚಂಡಿಲ ಹಾಗೂ ಅಂಕಿತ್ ಚೌವಾಣ್ ಅವರ ಮೇಲೆ ಸ್ಪಾಟ್ ಫಿಕ್ಸಿಂಗ್ ನಲ್ಲಿ ಭಾಗಿ ಆಗಿರುವ ಆರೋಪ ಹೊರೆಸಿ ದೆಹಲಿ ಹಾಗೂ ಮುಂಬೈ ಪೊಲೀಸರು ಭಾರತೀಯ ದಂಡ ಸಂಹಿತೆ 420 ಹಾಗೂ 120 ಬಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಆದರೆ, ಸೂಕ್ತ ಸಾಕ್ಷಿ ಆಧಾರಗಳನ್ನು ಒದಗಿಸುವಲ್ಲಿ ವಿಫಲರಾದರು.
ನಾನು ಬಿಡುಗಡೆಯಾಗಿರುವುದು ಖುಷಿಕೊಟ್ಟಿದೆ ಆದರೆ, ತಿಹಾರ್ ಜೈಲಿನಲ್ಲಿ ಕಳೆದ ದಿನಗಳು ನನ್ನನ್ನು ಕಾಡುತ್ತದೆ ಎಂದು ಶ್ರೀಶಾಂತ್ ಹೇಳಿದ್ದಾರೆ.