ತೃತೀಯ ರಂಗದ ಉಗಮಕ್ಕೆ ಮಮತಾ ಕಹಳೆ
ಕೋಲ್ಕತ್ತಾ, ಜೂ.12: ತೃತೀಯ ರಂಗ, ಸಂಯುಕ್ತ ರಂಗ ಅಥವಾ ಎನ್ ಡಿಎ -II ಸ್ಥಾಪನೆಗೆ ತೃಣ ಮೂಲ ಕಾಂಗ್ರೆಸ್ ನ ಮಮತಾ ಬ್ಯಾನರ್ಜಿ, ಬಿಜೆಡಿಯ ನವೀನ್ ಪಟ್ನಾಯಕ್ ಹಾಗೂ ಜೆಡಿಯುನ ನಿತೀಶ್ ಕುಮಾರ್, ಶರದ್ ಯಾದವ್ ಹಾಗೂ ಸಮಾಜವಾದಿ ಪಕ್ಷದ ಮುಲಾಯಂ ಸಿಂಗ್ ಯಾದವ್ ಚಿಂತನೆ ನಡೆಸಿದ್ದಾರೆ ಎಂಬ ಸುದ್ದಿ ಬಗ್ಗೆ ಎನ್ ಡಿಎ ಮೈತ್ರಿ ಬಿರುಕಿಗೆ ಅಡ್ವಾಣಿಯೇ ಹೊಣೆ ಲೇಖನದಲ್ಲಿ ಸುಳಿವು ನೀಡಲಾಗಿತ್ತು. ಅದರ ಮುಂದುವರೆದ ಭಾಗ ಇಲ್ಲಿದೆ,
272 ಮ್ಯಾಜಿಕ್ ನಂಬರ್ ಪಡೆಯದಿದ್ದರೂ 150-160ರ ತನಕ ಸಂಸತ್ ಸ್ಥಾನ ಪಡೆಯುವ ಉತ್ಸಾಹ ಈಗ ಹಲವಾರು ನಾಯಕರಲ್ಲಿ ಉಕ್ಕುತ್ತಿದೆ.ಬಿಜೆಪಿಯ ಆಂತರಿಕ ನಿರ್ಣಯಗಳಿಂದ ಬೇಸತ್ತಿರುವ ಎನ್ ಡಿಎ ಅಂಗ ಪಕ್ಷವಾದ ಜೆಡಿಯು ಮತ್ತು ಪ್ರಾದೇಶಿಕ ಪಕ್ಷವಾದ ತೃಣಮೂಲ ಕಾಂಗ್ರೆಸ್ ಸಂಯುಕ್ತರಂಗ ಸ್ಥಾಪನೆಗೆ ಚಿಂತನೆ ನಡೆಸಿದ್ದು, 2014ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಯ ವಿರುದ್ಧವಾಗಿ ಒಟ್ಟಾಗಿ ಸೆಣಸಲು ನಿರ್ಧರಿಸಿವೆ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬುಧವಾರ(ಜೂ.11) ಸುದ್ದಿಗೋಷ್ಠಿ ನಡೆಸಿ ನವೀನ್ ಪಟ್ನಾಯಕ್(ಒಡಿಶಾ), ನಿತೀಶ್ ಕುಮಾರ್(ಬಿಹಾರ) ಹಾಗೂ ಬಾಬುಲಾಲ್ ಮರಾಂಡಿ(ಜಾರ್ಖಂಡ್) ಜೊತೆ ಮಾತುಕತೆ ನಡೆಸಿದ್ದಾಗಿ ಹೇಳಿದರು. ತೃತೀಯ ರಂಗ ಸ್ಥಾಪನೆ ಬಗ್ಗೆ ಈ ಮೂವರು ನಾಯಕರ ಜೊತೆ ಮಾತುಕತೆ ನಡೆಸಿದ್ದೇನೆ. ಇನ್ನೂ ಯಾವುದೂ ನಿರ್ಧಾರವಾಗಿಲ್ಲ ಎಂದು ಹೇಳಿದರು. ಇದೇ ಮಾತನ್ನು ತಮ್ಮ ಫೇಸ್ ಬುಕ್ ಪುಟದಲ್ಲೂ ಹಾಕಿಕೊಂಡಿದ್ದಾರೆ. ಜೆಡಿಯು ಮುಖಂಡ ಕೆಸಿ ತ್ಯಾಗಿ ಅವರು 'ಎನ್ ಡಿಎ ಹಾಗೂ ಯುಪಿಎ ಸಂಪೂರ್ಣ ಸೋತಿದೆ' ಎಂದು ಹೇಳಿಕೆ ನೀಡಿದ್ದಾರೆ.
ಈ ಸಂಬಂಧ ಪ್ರಾದೇಶಿಕ ಪಕ್ಷಗಳೊಂದಿಗೆ ಚರ್ಚಿಸಲು ತೃಣಮೂಲ ಕಾಂಗ್ರೆಸ್ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಅವರು ತೀರ್ಮಾನಿಸಿದ್ದು, ನಾಳೆ ಎಲ್ಲಾ ಪ್ರಾದೇಶಿಕ ಪಕ್ಷಗಳೊಂದಿಗೆ ಚರ್ಚಿಸುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ. ನಾಳಿನ ಸಭೆಯಲ್ಲಿ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ನೀಡಬೇಕೆ ಇಲ್ಲವೆ ಸ್ವತಂತ್ರವಾಗಿ ಸ್ಪರ್ಧಿಸಬೇಕೇ ಎಂಬ ಅಂಶಗಳ ಕುರಿತು ಚರ್ಚಿಸುವ ಸಾಧ್ಯತೆ ಇದೆ.
ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ನೇಮಿಸಿದ್ದು, ಹಾಗೂ ಬಿಜೆಪಿಯ ಮುಂದಿನ ಪ್ರಧಾನಿ ಅಭ್ಯರ್ಥಿ ಎಂದು ಮೋದಿ ಅವರನ್ನು ಬಿಂಬಿಸುತ್ತಿರುವ ಬಿಜೆಪಿಯ ನಡೆಯನ್ನು ವಿರೋಧಿಸಿದ್ದ ಜೆಡಿಯು, ಇದೀಗ ಮೈತ್ರಿಕೂಟದಿಂದ ಹೊರಬರಲು ತೀರ್ಮಾನಿಸಿದೆ.