ಎನ್ ಡಿಎ ಮೈತ್ರಿ ಬಿರುಕಿಗೆ ಅಡ್ವಾಣಿಯೇ ಹೊಣೆ
ಅಟಲ್ ಬಿಹಾರಿ ವಾಜಪೇಯಿ ಹಾಗೂ ಎಲ್ ಕೆ ಅಡ್ವಾಣಿ ಅವರ ಕನಸಿ ನ್ಯಾಷನಲ್ ಡೆಮೋಕ್ರೆಟಿಕ್ ಅಲೈಯನ್ಸ್ (ಎನ್ ಡಿಎ) ತನ್ನ ಕೊನೆ ದಿನಗಳನ್ನು ಎದುರಿಸುತ್ತಿದೆ. ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪೊಗ್ರೆಸಿವ್ ಅಲೈಯನ್ಸ್ (ಯುಪಿಎ) ಎದುರು ನಿಲ್ಲಲು ಸಮರ್ಥವಿದ್ದ ಮೈತ್ರಿ ಕೂಟದಲ್ಲಿ ದೊಡ್ಡ ಬಿರುಕು ಕಾಣಿಸಿಕೊಳ್ಳಲು ಕಾರಣವಾಗಿದ್ದು ನರೇಂದ್ರ ಮೋದಿ ಅಲ್ಲ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಎಂಬುದು ಈಗ ಸ್ಪಷ್ಟವಾಗಿದೆ.
ಎನ್ ಡಿಎ ಮೈತ್ರಿಕೂಟದ ಪ್ರಮುಖ ಅಂಗಪಕ್ಷವಾಗಿರುವ ಜನತಾದಳ (ಯುನೈಟೆಡ್) ಮೈತ್ರಿ ಕಡಿದುಕೊಳ್ಳಲು ಸಿದ್ಧತೆ ನಡೆಸಿದೆ. ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ರಾಷ್ಟ್ರ ಮಟ್ಟದ ನಾಯಕನಾಗಿ ಬಿಜೆಪಿ ಬಿಂಬಿಸಿದ್ದು ಎನ್ ಡಿಎ ಮಿತ್ರ ಪಕ್ಷಗಳಿಗೆ ಕಷ್ಟವಾದರೂ ಸಹಿಸಲು ಇದ್ದ ಏಕೈಕ ಕಾರಣ ಅಡ್ವಾಣಿ.
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಎನ್ಡಿಎ ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿದ್ದ ಜೆಡಿಯು, ಇದೀಗ ಎನ್ ಡಿಎ ಮೈತ್ರಿಕೂಟವನ್ನೇ ತೊರೆಯುವ ಬಗ್ಗೆ ಚಿಂತನೆ ನಡೆಸಲು ಅಡ್ವಾಣಿ ರಾಜೀನಾಮೆ ಹೇಗೆ ಕಾರಣವಾದೀತು?
ಎನ್ ಡಿಎ ಮೈತ್ರಿಯಲ್ಲಿ ಯಾವ ಯಾವ ಪಕ್ಷಗಳಿದೆ. ನರೇಂದ್ರ ಮೋದಿಗೂ ಎನ್ ಡಿಎ ಉಳಿವಿಗೂ ಏನು ಸಂಬಂಧ? ಅಡ್ವಾಣಿ ಏಕೆ ಹೀಗೆ? ಬಿಜೆಡಿ ಮೈತ್ರಿ ತೊರೆಯಲು ಕಾರಣವೇನು? ನಿತೀಶ್ ಹಾಗೂ ಮೋದಿ ವೈಯಕ್ತಿಕ ಸಮರಕ್ಕೆ ಎನ್ ಡಿಎ ಬಲಿಯಾಗಬೇಕೆ? ಮುಂತಾದ ಪ್ರಶ್ನೆಗಳತ್ತ ಒಂದು ಕಣ್ಣೋಟ ಇಲ್ಲಿದೆ....
ಅಡ್ವಾಣಿ ರಾಜೀನಾಮೆ ಪ್ರಹಸನ
ಅಡ್ವಾಣಿ ಏನು ಎನ್ ಡಿಎ ಸಂಚಾಲಕ ಹುದ್ದೆ ತೊರೆದಿರಲಿಲ್ಲ ಎಂಬ ಪ್ರಶ್ನೆಯೂ ಹುಟ್ಟುತ್ತದೆ. ಅದರೆ, ಅಡ್ವಾಣಿ ತ್ವರಿತ ನಿರ್ಧಾರಗಳು ಮುಂದೆ ಎನ್ ಡಿಎ ಆಶಯಕ್ಕೆ ಬಲವಾದ ಹೊಡೆತ ನೀಡುವ ಮುನ್ಸೂಚನೆ ಸಿಕ್ಕಿದ್ದರಿಂದ ನವೀನ್ ಪಟ್ನಾಯಕ್ ಹಾಗೂ ನಿತೀಶ್ ಕುಮಾರ್ ಅವರು ಎನ್ ಡಿಎ ಮೈತ್ರಿ ತೊರೆಯುವ ಬಗ್ಗೆ ಬಲವಾದ ಚಿಂತನೆ ನಡೆಸಿದ್ದಾರೆ.
ಆದರೆ, ಸ್ವತಃ ಅಡ್ವಾಣಿ ಅವರೇ ಪಕ್ಷಕ್ಕಿಂತ ಸ್ವಾಭಿಮಾನ, ಸ್ವಪ್ರತಿಷ್ಠೆ ಮುಖ್ಯ ಎಂಬಂತೆ ವರ್ತಿಸಿದ್ದು ಎನ್ ಡಿಎ ಮುಖ್ಯ ಪಕ್ಷಗಳಾದ ಜೆಡಿಯು ಹಾಗೂ ಬಿಜೆಡಿಗೆ ನೋವಾಗಿದೆ. ಮೈತ್ರಿ ತೊರೆಯಲು ಎರಡು ಪಕ್ಷಗಳು ತುದಿಗಾಲಲ್ಲಿ ನಿಂತಿವೆ. ಅಧಿಕೃತ ಘೋಷಣೆಗೆ ಕೆಲದಿನಗಳು ಹಿಡಿಯಬಹುದು ಅಷ್ಟೇ.
ನಿತೀಶ್ ಕುಮಾರ್ ವಿರೋಧ
ನರೇಂದ್ರಮೋದಿ ಅವರನ್ನು ಚುನಾವಣಾ ಸಮಿತಿಯ ಅಧ್ಯಕ್ಷರಾಗಿ ನೇಮಕ ಮಾಡಿದ್ದಕ್ಕಾಗಿ ಬಿಜೆಪಿ ಹಿರಿಯ ನಾಯಕ ಅಡ್ವಾಣಿ ಬೇಸರ ವ್ಯಕ್ತಪಡಿಸಿದ್ದರು. ನಂತರ ಪ್ರಮುಖ ಸ್ಥಾನಕ್ಕೆ ರಾಜೀನಾಮೆ ನೀಡಿ ಹಿಂಪಡೆದಿದ್ದೇನೆ ಎಂದು ರಾಜನಾಥ್ ಸಿಂಗ್ ಬಾಯಲ್ಲಿ ನುಡಿಸಿದರು.
ಬಿಹಾರ ಮುಖ್ಯಮಂತ್ರಿ ಮತ್ತು ಜೆಡಿಯು ಹಿರಿಯ ನಾಯಕ ನಿತೀಶ್ ಕುಮಾರ್ ಅವರು ಪಕ್ಷದ ತುರ್ತು ಸಭೆ ಕರೆದು, ಬಿಜೆಪಿಯಲ್ಲಿನ ಪ್ರಸಕ್ತ ಬೆಳವಣಿಗೆಗಳ ಕುರಿತು ಚರ್ಚಿಸುತ್ತಿದ್ದಾರೆ.ಮೋದಿ ಅವರನ್ನು ಎನ್ ಡಿಎ ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಅವರು, ಬಿಜೆಪಿಯಲ್ಲಿನ ಇತ್ತೀಚಿನ ಬೆಳವಣಿಗೆಗಳಿಂದ ತೀವ್ರ ಬೇಸರಗೊಂಡಿದ್ದು, ಮೈತ್ರಿಗೆ ಹೊಡೆತ ಬೀಳುತ್ತದೆ, ಅಡ್ವಾಣಿ ಮಾತು ನಡೆಯುವುದಿಲ್ಲ ಎಂಬ ಮನವರಿಕೆಯಾದ ಮೇಲೆ ಮೈತ್ರಿ ತೊರೆಯುವುದೇ ಸರಿ ಎಂದು ನಿತೀಶ್ ನಿರ್ಧರಿಸಿದ್ದಾರೆ.
ಮೋದಿ ಪ್ರಧಾನಿ ಅಭ್ಯರ್ಥಿ?
ಮೋದಿ ಅವರಿಗೆ ಚುನಾವಣಾ ಪ್ರಚಾರದ ಮೇಲುಸ್ತುವಾರಿ ಜವಾಬ್ದಾರಿ ನೀಡಿರುವ ಕುರಿತು ಮಾತನಾಡಿದ ಅವರು, ಪ್ರಧಾನಿ ಅಭ್ಯರ್ಥಿ ಯಾರಾಗಬೇಕು ಎಂಬುದನ್ನು ಈಗಲೇ ನಿರ್ಣಯಿಸುವುದು ಕಷ್ಟ. ಪಕ್ಷದ ಸಭೆ ಕರೆದು ತಾವು ಮುಂದಿನ ನಿರ್ಧಾರಗಳನ್ನು ಕೈಗೊಳ್ಳುತ್ತೇವೆ ಎಂದು ನಿತೀಶ್ ಹೇಳಿದ್ದಾರೆ
ಎನ್ ಡಿಎ ಮೈತ್ರಿ ಹೀಗಿದೆ
ಎನ್ ಡಿಎನಲ್ಲಿ ಜನತಾದಳ ಯುನೈಟೆಡ್ ಅಲ್ಲದೆ, ಶಿವ ಸೇನೆ, ಶಿರೋಮಣಿ ಅಕಾಲಿ ದಳ(ಎಸ್ ಎ ಡಿ), ರಾಷ್ಟ್ರೀಯ ಲೋಕದಳ(INLD), ಅಸ್ಸೋಮ್ ಗಣಪರಿಷತ್(AGP), ನಾಗಾಲ್ಯಾಂಡ್ ಪೀಪಲ್ ಫ್ರಂಟ್, ಗೋರ್ಖಾ ಜನಮುಕ್ತಿ ಮೋರ್ಚ, ಉತ್ತರಾಖಂಡ್ ಕ್ರಾಂತಿ ದಳ, ಕಾಮತಾಪುರ್ ಪೊಗ್ರೆಸಿವ್ ಪಾರ್ಟಿ, ಲಡಾಕ್ ಟೆರಿಟೆರಿ ಫ್ರಂಟ್, ಮಿಜೋ ನ್ಯಾಷನಲ್ ಫ್ರಂಟ್, ತೆಲಂಗಾಣ ರಾಷ್ಟ್ರ ಸಮಿತಿ ಕೂಡಾ ಇದೆ.
ಜೊತೆಗೆ
ಎಐಎಡಿಎಂಕೆ
ಸೇರಿದಂತೆ
ಕೆಲವು
ಪ್ರಾದೇಶಿಕ
ಪಕ್ಷಗಳು
ಬಾಹ್ಯ
ಬೆಂಬಲವೂ
ಸಿಗುತ್ತಿದೆ.
ಬಿಜೆಡಿ ಹಿಂದೇಟಿಗೆ ಕಾರಣ
1.86 ಲಕ್ಷ ಕೋಟಿ ಕಲ್ಲಿದ್ದಲು ಹಗರಣದ ಪೈಕಿ 88,000 ಕೋಟಿಯಷ್ಟು ಅವ್ಯವಹಾರ ಒಡಿಸಾದಲ್ಲಿ ನಡೆದಿರುವುದು ಬಿಜು ಜನತಾದಳಕ್ಕೆ ಮುಳುವಾಗಿದೆ. ಯುಪಿಎ ಸರ್ಕಾರ ತನ್ನ ಸಚಿವ, ಸಂಸದ ಮೇಲೆ ಸಿಬಿಐ ದಾಳಿ ನಡೆಸಿರುವುದರಿಂದ ಬಿಜೆಡಿ ಬೆಚ್ಚಿದೆ.
ಯುಪಿಎ ರಕ್ಷಣೆ ಕೋರಿ ಎನ್ ಡಿಎ ತೊರೆಯುವ ಮಾತನ್ನಾಡುತ್ತಿದೆ. ಇದರ ಮೊದಲ ಭಾಗವಾಗಿ ಮೋದಿ ವಿರೋಧಿ ಹೇಳಿಕೆ ಹೊರ ಬಿದ್ದಿದೆ. ಮೋದಿಯನ್ನು ರಾಷ್ಟ್ರ ನಾಯಕನಾಗಿ ಒಪ್ಪಲು ಸಾಧ್ಯವಿಲ್ಲ ಎಂದು ಬಿಜೆಡಿ ಮುಖ್ಯಸ್ಥ ನವೀನ್ ಪಟ್ನಾಯಕ್ ಹೇಳಿಕೆ ನೀಡಿದ್ದರು. ಅಡ್ವಾಣಿ ಏಕೆ ಹೀಗೆ? ಇನ್ನಷ್ಟು ನಿರೀಕ್ಷಿಸಿ
ಜೆಡಿಯು ಕಥೆ ಏನು?
ಎನ್ ಡಿಎ ನಿಂದ ಪ್ರಧಾನಿ ಅಭ್ಯರ್ಥಿ ಹುದ್ದೆಗೆ 'ಸೆಕ್ಯುಲರ್' ಅಭ್ಯರ್ಥಿ ಬೇಕು ಎನ್ನುತ್ತಿರುವ ಜೆಡಿಯು ಈಗ ಬಿಜೆಪಿ ಸಖ್ಯ ತೊರೆಯುವ ಮುಹೂರ್ತ ಫಿಕ್ಸ್ ಮಾಡಿಕೊಂಡಿದ್ದು ಜೂ.15ರೊಳಗೆ ನಿರ್ಣಯ ಹೊರ ಹಾಕಲಿದೆ.
ಮೈತ್ರಿ ಮುರಿದರೆ ಬಿಹಾರದಲ್ಲಿ ಸರ್ಕಾರ ಉಳಿಸಿಕೊಳ್ಳಲು ಬೇಕಾದ ಸಂಖ್ಯೆ ಹೊಂದಲು ನಿತೀಶ್ ಕುಮಾರ್ ಅವರು ಪಕ್ಷೇತರರ ಮೊರೆ ಹೊಕ್ಕಿದ್ದಾರೆ. 118 ಜೆಡಿಯು ಸದಸ್ಯರನ್ನು ಹೊಂದಿರುವ ನಿತೀಶ್ ಅವರು 4 ಜನ ಪಕ್ಷೇತರರ ಬೆಂಬಲ ಪಡೆದು 122 ಮ್ಯಾಜಿಕ್ ನಂಬರ್ ಪಡೆಯುವ ಸಾಧ್ಯತೆ ನಿಚ್ಚಳವಾಗಿದೆ.
ತೃತೀಯ ರಂಗ ಉದಯ ?
ಎಲ್ ಕೆ ಅಡ್ವಾಣಿ ಅವರ ರಾಜೀನಾಮ ಪ್ರಹಸನ ಎನ್ ಡಿಎ ಬಿರುಕಿಗಷ್ಟೇ ಕಾರಣವಾಗಿಲ್ಲ. ಅನೇಕ ಪ್ರಾದೇಶಿಕ ಪಕ್ಷಗಳಿಗೆ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಳ್ಳಲು ವೇದಿಕೆ ಒದಗಿಸುವ ಸಾಧ್ಯತೆಯಿದೆ.
ತೃತೀಯ ರಂಗ ಅಥವಾ ಎನ್ ಡಿಎ -II ಸ್ಥಾಪನೆಗೆ ತೃಣ ಮೂಲ ಕಾಂಗ್ರೆಸ್ ನ ಮಮತಾ ಬ್ಯಾನರ್ಜಿ, ಬಿಜೆಡಿಯ ನವೀನ್ ಪಟ್ನಾಯಕ್ ಹಾಗೂ ಜೆಡಿಯುನ ನಿತೀಶ್ ಕುಮಾರ್, ಶರದ್ ಯಾದವ್ ಹಾಗೂ ಸಮಾಜವಾದಿ ಪಕ್ಷದ ಮುಲಾಯಂ ಸಿಂಗ್ ಯಾದವ್ ಚಿಂತನೆ ನಡೆಸಿದ್ದಾರೆ ಎಂಬ ಸುದ್ದಿಯಿದೆ.
ತೃತೀಯ ರಂಗಕ್ಕೆ ಅಡ್ವಾಣಿ ಅವರ ಬಾಹ್ಯ ಬೆಂಬಲ ನೀಡಿದರೂ ಅಚ್ಚರಿಯೇನಿಲ್ಲ. 272 ಮ್ಯಾಜಿಕ್ ನಂಬರ್ ಪಡೆಯದಿದ್ದರೂ 150-160ರ ತನಕ ಸಂಸತ್ ಸ್ಥಾನ ಪಡೆಯುವ ಉತ್ಸಾಹ ಈಗ ಹಲವಾರು ನಾಯಕರಲ್ಲಿ ಉಕ್ಕುತ್ತಿದೆ. ಏನಾಗುತ್ತೋ ಕಾದು ನೋಡೋಣ...