ಕೆಂಗೇರಿ : ಕಾಂಪೌಂಡ್ ಕುಸಿದು ಕಾರ್ಮಿಕರು ಸಾವು
ಅನಂತಪುರ ಜಿಲ್ಲೆಯ ರಾಜಮ್ಮ (45) ಮತ್ತು ಮಂಗಮ್ಮ (25) ಮೃತಪಟ್ಟ ಕೂಲಿ ಕಾರ್ಮಿಕರಾಗಿದ್ದಾರೆ. ಸಾಯಿ ವೆಂಕಟೇಶ್ವರ ಸಂಸ್ಥೆಯು ಧರ್ಮ ಸೋಮಶೇಖರ ಲೇಔಟ್ನಲ್ಲಿ ನಿರ್ಮಿಸುತ್ತಿರುವ ಅಪಾರ್ಟ್ಮೆಂಟ್ ನಲ್ಲಿ ಇವರು ಕೂಲಿ ಕೆಲಸ ಮಾಡುತ್ತಿದ್ದರು.
ಮಂಗಳವಾರ ಸಂಜೆ ಅಪಾರ್ಟ್ ಮೆಂಟ್ ಕಾಂಪೌಂಡ್ ಗೋಡೆ ಕುಸಿದು ಮಣ್ಣಿನಡಿ ಸಿಲುಕಿ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ. ನಿರ್ಮಾಣ ಹಂತದ ಅಪಾರ್ಟ್ ಮೆಂಟ್ ಸುತ್ತಲು ಸುಮಾರು ಹತ್ತು ಅಡಿ ಎತ್ತರದ ಕಾಂಪೌಂಡ್ ನಿರ್ಮಿಸಲಾಗಿತ್ತು.
ಮಳೆಯಿಂದಾಗಿ ಆ ಗೋಡೆ ಶಿಥಿಲಗೊಂಡಿತ್ತು. ಮಂಗಳವಾರ ಕಾರ್ಮಿಕರು ಗೋಡೆಯ ಕೆಳಭಾಗದಲ್ಲಿ ಮಣ್ಣು ಅಗೆಯುವ ಕೆಲಸ ಮಾಡುತ್ತಿದ್ದರು ಈ ಸಂದರ್ಭದಲ್ಲಿ ಗೋಡೆ ಕುಸಿದು ಬಿದ್ದಿದ್ದು, ಮಣ್ಣಿನಡಿ ಸಿಲುಕಿ ರಾಜಮ್ಮ ಮತ್ತು ಮಂಗಮ್ಮ ಮೃತಪಟ್ಟಿದ್ದಾರೆ.
ಸಹ ಕಾರ್ಮಿಕರು ಗೋಡೆಯ ಅವಶೇಷಗಳಡಿ ಸಿಲುಕಿದ ಅವರನ್ನು ರಕ್ಷಿಸಲು ಪ್ರಯತ್ನಿಸಿದರು. ಆದರೆ, ದೊಡ್ಡ ಕಲ್ಲು ಮತ್ತು ಇಟ್ಟಿಗೆಗಳು ಕಾರ್ಮಿಕ ಮೇಲೆ ಬಿದ್ದಿದ್ದರಿಂದ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು. ಸ್ಥಳಕ್ಕೆ ಕೆಂಗೇರಿ ಪೋಲಿಸರು ಮತ್ತು ಅಗ್ನಿ ಶಾಮಕ ದಳದ ಸಿಬ್ಬಂದಿ ಆಗಮಿಸಿ, ಅವಶೇಷಗಳನ್ನು ತೆರವುಗೊಳಿಸಿದರು.
ಮಾಲೀಕರ ಬಂಧನ : ಗೋಡೆ ಕುಸಿದು ಕಾರ್ಮಿಕರು ಮೃತಪಟ್ಟ ಪಕರಣ ದಾಖಲಿಸಿಕೊಂಡ ಕೆಂಗೇರಿ ಪೊಲೀಸರು, ನಿರ್ಲಕ್ಷತನ ಮತ್ತು ಮುಂಜಾಗ್ರತೆ ತೆಗೆದುಕೊಂಡಿಲ್ಲ ಎಂದು ಅಪಾರ್ಟ್ಮೆಂಟ್ನ ಮಾಲೀಕ ಬಾಲಾಜಿ ಮತ್ತು ಗುತ್ತಿಗೆದಾರ ಭಾಸ್ಕರ್ ಅವರನ್ನು ಬಂಧಿಸಿದ್ದಾರೆ.