ಕೃಷ್ಣಮಠದ ಸರಕಾರೀಕರಣಕ್ಕೆ ಐವತ್ತು ಸಾವಿರ ಡೀಲ್
ಉಡುಪಿ, ಜೂ 11: ಉಡುಪಿ ಶ್ರೀಕೃಷ್ಣ ಮಠವನ್ನು ಮುಜರಾಯಿ ಇಲಾಖೆಯ ವ್ಯಾಪ್ತಿಗೆ ತರುವ ಇಂಗಿತವನ್ನು ಸಿಎಂ ಸಿದ್ದರಾಮಯ್ಯ ಸದ್ಯಕ್ಕೆ ಕೈಬಿಟ್ಟಿದ್ದರೂ ಪೇಜಾವರ ಮಠದ ವಿಶ್ವೇಶ್ವರ ತೀರ್ಥ ಶ್ರೀಗಳು ಮುಜರಾಯಿ ಇಲಾಖೆಯ ಅಧಿಕಾರಿಗಳ ಮೇಲೆ ಗುರುತರ ಆರೋಪ ಮಾಡಿದ್ದಾರೆ.
ಅನಾದಿ ಕಾಲದಿಂದಲೂ ಶ್ರೀಕೃಷ್ಣ ಮಠ ಅಷ್ಟಮಠದ ಸ್ವಾಧೀನದಲ್ಲೇ ಇತ್ತು. ಮುಜರಾಯಿ ಇಲಾಖೆಯ ಭ್ರಷ್ಟ ಅಧಿಕಾರಿಗಳಿಂದಾಗಿ ಮಠವನ್ನು ನೋಟಿಫೈ ಮಾಡಲಾಯಿತು. ಎಸ್ ಎಂ ಕೃಷ್ಣ ಸರಕಾರದಲ್ಲಿ ಇಲಾಖೆಯ ಅಧಿಕಾರಿಗಳಿಗೆ ಲಂಚ ನೀಡಲು ನಿರಾಕರಿಸಿದ್ದಕ್ಕೆ ಸರಕಾರ ಅಂದು ಆ ಕ್ರಮ ಕೈಗೊಂಡಿತ್ತು.
ಉಡುಪಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಶ್ರೀಗಳು, ಎಸ್ಎಂ ಕೃಷ್ಣ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಜಿಲ್ಲಾಮಟ್ಟದ ಭ್ರಷ್ಟ ಮುಜರಾಯಿ ಅಧಿಕಾರಿ ಅಂದಿನ ಪರ್ಯಾಯ ಶ್ರೀಗಳಿಗೆ ಐವತ್ತು ಸಾವಿರ ರೂಪಾಯಿ ನೀಡುವಂತೆ ಬೇಡಿಕೆಯಿಟ್ಟಿದ್ದರು.
ನಾವು ಲಂಚ ನೀಡಲು ನಿರಾಕರಿಸಿದ್ದಕ್ಕೆ, ಆ ಭ್ರಷ್ಟ ಅಧಿಕಾರಿ ಅಂದಿನ ಸಿಎಂ ಎಸ್ ಎಂ ಕೃಷ್ಣ ಅವರ ಗಮನಕ್ಕೆ ತರದೆ ಶ್ರೀಕೃಷ್ಣ ಮಠವನ್ನು ನೋಟಿಫೈ ಮಾಡಿದ್ದಾರೆ. ಸಾಮಾನ್ಯ ಅಧಿಕಾರಿಯಿಂದಾದ ತಪ್ಪನ್ನು ಇತ್ತೀಚೆಗೆ ಯಡಿಯೂರಪ್ಪನವರು ಶ್ರೀಕೃಷ್ಣಮಠವನ್ನು ಡಿನೋಟಿಫೈ ಮಾಡುವ ಮೂಲಕ ಸರಿಪಡಿಸಿದ್ದಾರೆ ಎಂದು ವಿಶ್ವೇಶ್ವರ ತೀರ್ಥ ಶ್ರೀಗಳು ವಿವರಿಸಿದ್ದಾರೆ.
ಶ್ರೀಗಳು ಸುದ್ದಿಗಾರರನ್ನು ಉದ್ದೇಶಿಸಿ ಹೇಳಿದ ಇತರ ವಿವರಗಳು ಇಂತಿವೆ.
ಬುದ್ದಿಜೀವಿಗಳ ತಪ್ಪುಗ್ರಹಿಕೆ
ಶ್ರೀಕೃಷ್ಣಮಠವನ್ನು ಮುಜರಾಯಿ ವ್ಯಾಪ್ತಿಗೆ ತರುವ ವಿಚಾರದಲ್ಲಿ ಬುದ್ದಿಜೀವಿಗಳು ನಮ್ಮ ನಿಲುವನ್ನು ತಪ್ಪಾಗಿ ಅರ್ಥೈಯಿಸಿಕೊಂಡಿದ್ದಾರೆ. ಸುಪ್ರೀಂಕೋರ್ಟ್ ಕೂಡಾ ಕೃಷ್ಣಮಠ, ಅಷ್ಠಮಠಗಳ ವ್ಯಾಪ್ತಿಗೆ ಬರುತ್ತದೆ ಎಂದು ಸ್ಪಷ್ಟ ಪಡಿಸಿದೆ.
ಮಠಾಧೀಶರು ಗೌರ್ನಮೆಂಟ್ ಎಂಪ್ಲಾಯಿಯಲ್ಲ
ಕೃಷ್ಣಮಠದಲ್ಲಿ ಅಷ್ಠಮಠಾಧೀಶರೇ ಆಡಳಿತ ಮುಖ್ಯಸ್ಥರು ಮತ್ತು ಅರ್ಚಕರು ಕೂಡಾ. ಹಾಗಾಗಿ ಮಠಾಧೀಶರು ಯಾವ ಕಾಲಕ್ಕೂ ಸರಕಾರಿ ನೌಕರರು ಆಗಲು ಸಾಧ್ಯವಿಲ್ಲ. ಸರಕಾರದ ಅಧಿಕಾರಿಗಳ ಕೆಳಗೆ ನೌಕರರಂತೆ ಕೆಲಸ ಮಾಡಲು ಸಾಧ್ಯವಿಲ್ಲ.
ಮಠದ ಸರಕಾರೀಕರಣ ಸಲ್ಲ
ಮಠದ ಎಲ್ಲಾ ಲೆಕ್ಕಾಚಾರ, ವ್ಯವಹಾರಗಳು ಪಾರದರ್ಶಕವಾಗಿದೆ. ಕೃಷ್ಣಮಠವನ್ನು ಸರಕಾರೀಕರಣ ಮಾಡುವುದು ನ್ಯಾಯಸಮ್ಮತವಲ್ಲ. ಅದಕ್ಕೆ ನಮ್ಮ ತೀವ್ರ ವಿರೋಧವಿದೆ.
ಫ್ಲ್ಯಾಷ್ ಬ್ಯಾಕ್
ಆಗಸ್ಟ್ 2010ರಲ್ಲಿ ಮುಜರಾಯಿ ಸಚಿವರೂ ಆಗಿದ್ದ ದಿ.ವಿಎಸ್ ಆಚಾರ್ಯ ಉಡುಪಿಯ ಶ್ರೀಕೃಷ್ಣ ದೇವಸ್ಥಾನವನ್ನು ಮುಜರಾಯಿ ಇಲಾಖೆಯಿಂದ ಡಿ-ನೋಟಿಫೈ ಮಾಡಿ ಪೀಠಾಧಿಪತಿಗಳಿಗೆ ಹಸ್ತಾಂತರಿಸುವಂತೆ ಒತ್ತಾಯಿಸಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪನವರಿಗೆ ಪತ್ರ ಬರೆದಿದ್ದರು. ಯಡಿಯೂರಪ್ಪನವರು ಆಚಾರ್ಯರ ಪತ್ರಕ್ಕೆ ಅನುಮೋದನೆ ನೀಡಿದ್ದರು.
ಆಡ್ವಾಣಿ ರಾಜೀನಾಮೆಗೆ ಬೇಸರ
ಆಡ್ವಾಣಿ ರಾಜೀನಾಮೆ ಬಗ್ಗೆ ಪ್ರಸ್ತಾಪಿಸಿದ ಶ್ರೀಗಳು, ಇಡೀ ಪ್ರಕರಣ ತಮಗೆ ನೋವುಂಟು ಮಾಡಿದೆ. ಮುಂದಿನ ತಿಂಗಳು ನವದೆಹಲಿಯಲ್ಲಿ ನಡೆಯಲಿರುವ ಗಂಗಾ ಅಭಿಯಾನ (ಜು 19) ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೇನೆ. ಆ ಸಂದರ್ಭದಲ್ಲಿ ಆಡ್ವಾಣಿ ಜೊತೆ ಮಾತುಕತೆ ನಡೆಸುತ್ತೇನೆ. ಹಿರಿಯರಾದ ಆಡ್ವಾಣಿಯವರು ಮೋದಿಗೆ ಆಶೀರ್ವಾದ ಮಾಡಬೇಕು ಎಂದು ಬಯಸಿದರು.