ಓಂ ಪ್ರಥಮ: ಲೋಕಾಯುಕ್ತ ನ್ಯಾ ಭಾಸ್ಕರರಾವ್ ದಾಳಿ
ಮಲ್ಲೇಶ್ವರದಲ್ಲಿರುವ ಕೆಸಿ ಜನರಲ್ ಆಸ್ಪತ್ರೆಗೆ ಇಂದು ದಾಳಿಯಿಟ್ಟಿರುವ ಲೋಕಾಯುಕ್ತ ನ್ಯಾ. ಭಾಸ್ಕರ್ ರಾವ್ ಅವರ ತಂಡ ಅಲ್ಲಿನ ದಾಖಲೆ ಪತ್ರಗಳನ್ನು ಸಾವಕಾಶವಾಗಿ ಪರಿಶೀಲಿಸುತ್ತಿದೆ.
ಇದೇ ಮೊದಲ ಬಾರಿಗೆ ಖುದ್ದಾಗಿ ನ್ಯಾ. ಭಾಸ್ಕರ್ ರಾವ್ ಅವರು ದಾಳಿ ನೇತೃತ್ವದ ವಹಿಸಿದ್ದಾರೆ. ಉಪ ಲೋಕಾಯುಕ್ತ ನ್ಯಾ. ಮಜಗೆ ಅವರು ಸಾಥ್ ನೀಡಿದ್ದರು. ಆಸ್ಪತ್ರೆಯ 8 ವೈದ್ಯರು ಈ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಇರಲಿಲ್ಲ. ಅವರ ವಿರುದ್ಧ ಕಿಡಿಕಾರಿದ ಲೋಕಾಯುಕ್ತರು ಅವರ ವಿರುದ್ಧ ಕಠಿಣ ಕ್ರಮಕ್ಕೆ ಶಿಫಾರಸು ಮಾಡಿದ್ದಾರೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳಿಂದ ದೂರುಗಳ ಸುರಿಮಳೆಯಾಗಿತ್ತು. ಹಾಗಾಗಿ ಈದ ದಾಳಿ ನಡೆಸಲಾಗಿದೆ ಎಂದು ತಿಳಿಸಿದ ನ್ಯಾ. ಭಾಸ್ಕರ್ ಅವರು ನರ್ಸುಗಳ ಸೇವೆ ಬಗ್ಗೆ ರೋಗಿಗಳು ತೀವ್ರ ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಅವರ ವಿರುದ್ಧವೂ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ತಮ್ಮ ದಂಡಿನ ಜತೆಗೆ ಇಂದು ದಿಢೀರನೆ ಕೆಸಿಜಿ ಆಸ್ಪತ್ರೆಗೆ ಭೇಟಿ ನೀಡಿದ ಲೋಕಾಯುಕ್ತರು, ಪ್ರತಿಯೊಂದು ವಾರ್ಡಿಗೂ ತೆರಳಿ, ರೋಗಿಗಳು ಮತ್ತು ಅವರ ಸಂಬಂಧಿಕರನ್ನು ಮಾತನಾಡಿಸಿದ್ದು ಗಮನ ಸೆಳೆಯಿತು. ಲೋಕಾಯುಕ್ತ ನ್ಯಾ. ಭಾಸ್ಕರ್ ಅವರ ದಾಳಿಯಿಂದ ಆಸ್ಪತ್ರೆ ಸಿಬ್ಬಂದಿ ಕಕ್ಕಾಬಿಕ್ಕಿಯಾದರು. ಲೋಕಾಯುಕ್ತರ ಪ್ರಶ್ನೆಗಳಿಗೆ ಉತ್ತರಿಸಲು ತಡಬಡಾಯಿಸಿದರು.