ಕೊಪ್ಪಳ : ತಮ್ಮನನ್ನು ಮನೆಯಲ್ಲಿ ಕೂಡಿಹಾಕಿದ ಪೇದೆ
ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಗಾಣದಾಳು ಗ್ರಾಮದಲ್ಲಿ ಯಮುನಪ್ಪ ಎಂಬುವವನು ತನ್ನ ಒಡಹುಟ್ಟಿದ ತಮ್ಮ ಹನುಮಂತಪ್ಪನಿಗೆ, ಹುಚ್ಚು ಹಿಡಿದಿದೆ ಎಂದು ಕೈ, ಕಾಲುಗಳಿಗೆ ಬೇಡಿ ಹಾಕಿ ಸುಮಾರು ಎರಡು ವರ್ಷಗಳಿಂದ ಮನೆಯ ಕೊಠಡಿಯಲ್ಲಿ ಕೂಡಿಹಾಕಿದ್ದ.
ಮಂಗಳವಾರ ಬೆಳಗ್ಗೆ ಸ್ಥಳೀಯರು ಈ ಮಾಹಿತಿಯನ್ನು ಮಾಧ್ಯಮದವರಿಗೆ ನೀಡಿದ್ದಾರೆ. ಮಾಧ್ಯಮದವರು ಮನೆಗೆ ತಲುಪಿದಾಗ ಹನುಮಂತಪ್ಪನ ಕೈ ಮತ್ತು ಕಾಲನ್ನು ಸರಪಳಿಯಿಂದ ಬಂಧಿಸಿ, ಮನೆಯಲ್ಲಿ ಕೂಡಿಹಾಕಿರುವುದು ತಿಳಿದುಬಂದಿದೆ.
ಮಾನವೀಯತೆ ಮರೆತ ಪೊಲೀಸ್ : ತಮ್ಮನನ್ನು ಬೇಡಿ ಹಾಕಿ ಕೂಡಿಹಾಕಿರುವ ಯಮುನಪ್ಪ ಜಿಲ್ಲಾ ಪೊಲೀಸ್ ಮೀಸಲು ಪಡೆಯ ಪೇದೆಯಾಗಿದ್ದಾನೆ. ತಮ್ಮ ಮನೆಯವರಿಗೆ ಮತ್ತು ಸ್ಥಳೀಯ ಜನರಿಗೆ ಹೊಡೆಯುತ್ತಾನೆ ಎಂದು ಹೀಗೆ ಕೂಡಿ ಹಾಕಿದ್ದಾನೆ.
ಎರಡೂ ಕೈಗಳಿಗೆ ಬೇಡಿ ಹಾಕಿರುವುದರಿಂದ ಹನುಮಂತಪ್ಪ ಊಟ ಮಾಡಲು ಪರದಾಡಬೇಕಾಗಿದೆ. ಮಾನಸಿಕ ಅಸ್ವಸ್ಥನಾದ ಅವನಿಗೆ ಯಾವುದೇ ಚಿಕಿತ್ಸೆ ಕೊಡಿಸದೆ ಕೂಡಿ ಹಾಕಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಸ್ಥಳೀಯರ ಪ್ರಕಾರ ಹನುಮಂತಪ್ಪ ಜನರೊಂದಿಗೆ ಚೆನ್ನಾಗಿ ಮಾತನಾಡುತ್ತಾನೆ. ಯಾರಿಗೂ ಹೊಡೆಯುವುದಿಲ್ಲ. ಆದರೆ, ಅಣ್ಣ, ತಮ್ಮನೊಟ್ಟಿಗೆ ಜಗಳವಾಡಿ ನಂತರ ಹೀಗೆ ಕೂಡಿಹಾಕಿ, ಅಮಾನವೀಯತೆ ಪ್ರದರ್ಶಿಸಿದ್ದಾನೆ.
ಅಕ್ಕ-ತಂಗಿಯರಿಗೆ ಹೊಡೆಯುತ್ತಾನೆ : ಗೃಹ ಬಂಧನದಲ್ಲಿರುವ ಹನುಮಂತಪ್ಪ ಅವರ ತಾಯಿ ಕಾಳಮ್ಮ ಅವರ ಪ್ರಕಾರ, ಈತ ಮನೆಯವರಿಗೆ ಹೊಡೆಯುತ್ತಾನೆ. ಅಕ್ಕ-ತಂಗಿ ಮನೆಗೆ ಬಂದಾಗ ಅವರಿಗೆ ಹೊಡೆದು ಮನೆಯಿಂದ ಹೊರಹಾಕಿದ್ದಾನೆ.
ಹಲವಾರು ಬಾರಿ ಹನುಮಂತಪ್ಪನಿಗೆ ನಾವು ಚಿಕಿತ್ಸೆ ಕೊಡಿಸಿದ್ದೇವೆ ಆದರೆ, ಆತನ ಪರಿಸ್ಥಿತಿ ಸುಧಾರಿಸಿಲ್ಲ. ಆತನನ್ನು ನಿಯಂತ್ರಿಸುವುದು ಕಷ್ಟವಾದ್ದರಿಂದ ಕೂಡಿ ಹಾಕಿದ್ದೇವೆ ಎಂದು ಕಾಳಮ್ಮ ತಮ್ಮ ವರ್ತನೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಚಿಕಿತ್ಸೆ ಕೊಡಿಸುತ್ತೇವೆ : ಹನುಮಂತಪ್ಪನಿಗೆ ಸರಿಯಾದ ಚಿಕಿತ್ಸೆ ಕೊಡಿಸಿಸುತ್ತೇವೆ ಎಂದು ಕಾಳಮ್ಮ ಭರವಸೆ ನೀಡಿದ್ದಾರೆ. ಕೊಳಗಳನ್ನು ಬಿಚ್ಚಿ, ಆತನನ್ನು ಮಾನವೀಯ ದೃಷ್ಟಿಯಿಂದ ನೋಡಿಕೊಳ್ಳುತ್ತೇವೆ ಎಂದು ಹನುಮಂತಪ್ಪನ ಕುಟುಂಬದವರು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಎರಡು ಮತ್ತು ಹಾವೇರಿಯಲ್ಲಿ ಒಂದು ಗೃಹ ಬಂಧನ ಪ್ರಕರಣಗಳು ಕಳೆದವಾರ ವರದಿಯಾಗಿದ್ದವು. ಇವುಗಳ ನೆನಪು ಮಾಸುವ ಮುನ್ನವೇ ಮತ್ತೊಂದು ಗೃಹ ಬಂಧನ ಪ್ರಕರಣ ಪತ್ತೆಯಾಗಿದೆ. (ಗೃಹಬಂಧನದ ಕಥೆಗಳು)