ಕೆನರಾ ಬ್ಯಾಂಕ್ ಎಟಿಎಂನಿಂದ 20 ಲಕ್ಷ ದೋಚಿದ ಕಳ್ಳರು!
ಸಂಜಯ್ ನಗರದ ನಾಗಶೆಟ್ಟಿಹಳ್ಳಿ ಮುಖ್ಯ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ಎಟಿಎಂಗೆ ನುಗ್ಗಿದ ಕಳ್ಳರು, ಗ್ಯಾಸ್ ಕಟ್ಟರ್ ಮೂಲಕ ಎಟಿಎಂ ಯಂತ್ರ ಕತ್ತರಿಸಿ, ಹಣ ದೋಚಿದ್ದಾರೆ. ಘಟನೆ ನಡೆದ 3 ಗಂಟೆಗಳ ಬಳಿಕ ಕಳುವಾಗಿರುವ ವಿಷಯ ಬೆಳಕಿಗೆ ಬಂದಿದೆ.
ಬಸ್ ನಿಲ್ದಾಣದ ಸಮೀಪದಲ್ಲಿಯೇ ಎಟಿಎಂ ಕೇಂದ್ರವಿದೆ. ಆದರೆ, ಸೆಕ್ಯುರಿಟಿ ಗಾರ್ಡ್ ಮತ್ತು ಸಿಸಿಟಿವಿ ಈ ಕೇಂದ್ರಕ್ಕೆ ಇಲ್ಲ. ಇದನ್ನು ಗಮನಿಸಿದ ಕಳ್ಳರು, ತಮ್ಮ ಕೈ ಚಳಕ ತೋರಿ 19 ಲಕ್ಷ ರೂ. ಹಣ ದೋಚಿದ್ದಾರೆ. ಸಂಜಯ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚೆನ್ನೈನಲ್ಲಿ ತಿಳಿಯಿತು : ಕೆನರಾ ಬ್ಯಾಂಕ್ ಎಟಿಎಂ ಕೇಂದ್ರದಲ್ಲಿ ಸ್ವಯಂ ಚಾಲಿತ ಯಂತ್ರವೊಂದನ್ನು ಅಳವಡಿಸಲಾಗಿದ್ದು ಅದರ ಸರ್ವರ್ ಚೆನ್ನೈನಲ್ಲಿದೆ. ಈ ಕೇಂದ್ರದಲ್ಲಿ ಯಾವುದೇ ಅನಾಹುತ ಸಂಭವಿಸಿದರೆ ಅದು ಚೆನ್ನೈನಲ್ಲಿರುವ ಕೆನರಾ ಬ್ಯಾಂಕ್ ಶಾಖೆಯಲ್ಲಿ ಅಲಾರ್ಮ್ ಆಗುತ್ತದೆ.
ಯಂತ್ರದಲ್ಲಿ ತಾಂತ್ರಿಕ ದೋಷ ಕಂಡು ಬಂದರೂ, ಆ ಬಗ್ಗೆ ತಕ್ಷಣ ಮಾಹಿತಿ ತಿಳಿಯುತ್ತದೆ. ಭಾನುವಾರ ರಾತ್ರಿ ಸುಮಾರು 7.30ರ ನಂತರ ಎಟಿಎಂ ಯಂತ್ರ ಸ್ಥಗಿತಗೊಂಡಿತ್ತು. ಇದನ್ನು ಗಮನಿಸಿದ ಸಿಬ್ಬಂದಿ ತಕ್ಷಣ ಬೆಂಗಳೂರು ಮುಖ್ಯ ಕಚೇರಿಗೆ ಮಾಹಿತಿ ನೀಡಿದರು.
ಅಲ್ಲಿಂದ ಸಂಬಂಧಪಟ್ಟ ಶಾಖೆಯ ಅಧಿಕಾರಿಗಳಿಗೆ ಮಾಹಿತಿ ರವಾನಿಸಲಾಯಿತು. ಸಿಬ್ಬಂದಿ ಎಟಿಎಂ ಕೇಂದ್ರದ ಬಳಿ ಬಂದಾಗ ಯಂತ್ರ ಕತ್ತರಿಸಿ, ಹಣ ಕದ್ದಿರುವುದು ಬೆಳಕಿಗೆ ಬಂದಿದೆ. ತಕ್ಷಣ ಬ್ಯಾಂಕ್ ಸಿಬ್ಬಂದಿ ಸಂಜಯ್ ನಗರ ಪೊಲೀಸರಿಗೆ ದೂರು ನೀಡಿದ್ದಾರೆ.
ಭದ್ರತೆಯೇ ಇಲ್ಲ : ಈ ಎಟಿಎಂ ಕೇಂದ್ರಕ್ಕೆ ಭದ್ರತಾ ಸಿಬ್ಬಂದಿ ನೇಮಿಸಿರಲಿಲ್ಲ. ಕೇಂದ್ರಕ್ಕೆ ಅಳವಡಿಸಿದ್ದ ಸಿಸಿಟಿವಿ ಎರಡು ತಿಂಗಳ ಹಿಂದೆಯೇ ಹಾಳಾಗಿತ್ತು. ಆದರೂ ಅಧಿಕಾರಿಗಳು ರಿಪೇರಿ ಮಾಡಿಸಿರಲಿಲ್ಲ. ಇದನ್ನು ಗಮನಿಸಿದ್ದ ಕಳ್ಳರು, ಹಣ ದೋಚಿದ್ದಾರೆ.
ಮೂರು ಜನರು ಒಟ್ಟಾಗಿ ಹಣ ದೋಚಿದ್ದಾರೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಬ್ಯಾಂಕ್ನಲ್ಲಿ ಕೆಲಸ ಮಾಡುವ ಸಿಬ್ಬಂದಿಯೂ ಕಳ್ಳರಿಗೆ ಸಹಾಯ ಮಾಡಿರಬಹುದು ಎಂದು ಶಂಕಿಸಿದ್ದಾರೆ. ಎರಡು ಪ್ರತ್ಯೇಕ ತಂಡ ರಚಿಸಿ ತನಿಖೆ ಪ್ರಾರಂಭಿಸಿರುವ ಪೊಲೀಸರು ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.