ಬೆಂಗಳೂರು : ಪೊಲೀಸರಿಂದ ರೌಡಿಗಳ ಪರೇಡ್
ಭಾನುವಾರ ನಗರದ ರೌಡಿಗಳ ಮನೆಗಳ ಮೇಲೆ ದಾಳಿ ನಡೆಸಿದ್ದ ಪೊಲೀಸರು, ಸೋಮವಾರ ಫ್ರೀಡಂ ಪಾರ್ಕ್ ನಲ್ಲಿ ಪೆರೇಡ್ ನಡೆಸಿದರು. ಬೆಂಗಳೂರಿನ ಪೂರ್ವ, ಉತ್ತರ, ದಕ್ಷಿಣ, ಆಗ್ನೇಯ ಮತ್ತು ಈಶಾನ್ಯ ವಿಭಾಗದ ಪೊಲೀಸರ ಸೂಚನೆಯಂತೆ 300 ರೌಡಿಗಳು ಪೆರೇಡ್ ನಲ್ಲಿ ಪಾಲ್ಗೊಂಡಿದ್ದರು.
ರೌಡಿಗಳ ಚಟವಟಿಕೆಗಳ ಬಗ್ಗೆ ಮಾಹಿತಿ ಪಡೆದುಕೊಂಡ ಪೊಲೀಸರು, ಮನೆ ಬದಲಾವಣೆ ಮಾಡಿದರೆ, ಮಾಹಿತಿ ನೀಡಬೇಕು. ಒಂದೇ ಮೊಬೈಲ್ ನಂಬರ್ ಬಳಕೆ ಮಾಡಬೇಕು. ಯಾವುದೇ ಅಪರಾಧ ಚಟುವಟಿಕೆಯಲ್ಲಿ ಪಾಲ್ಗೊಳ್ಳಬಾರದು ಎಂದು ಎಚ್ಚರಿಕೆ ನೀಡಿದರು.
ಡಿಸಿಪಿ ದೇವರಾಜ್ ನೇತೃತ್ವದ ತಂಡ 45 ರೌಡಿ ನಿವಾಸಗಳ ಮೇಲೆ ಭಾನುವಾರ ದಾಳಿ ನಡೆಸಿ ಅವರನ್ನು ಫ್ರೀಡಂ ಪಾರ್ಕ್ ಗೆ ಸೋಮವಾರ ಬರುವಂತೆ ಆದೇಶಿಸಿತ್ತು. ಉತ್ತರ ವಲಯದ 120, ಈಶಾನ್ಯ ವಿಭಾಗದ 100 ಮತ್ತು ಪೂರ್ವ ಮತ್ತು ಆಗ್ನೇಯ ವಿಭಾಗದ 70 ಕ್ಕೂ ಹೆಚ್ಚು ರೌಡಿಗಳ ಪರೇಡ್ ನಲ್ಲಿ ಭಾಗವಹಿಸಿದ್ದರು.
ಗುರುಮೂರ್ತಿ ಅಲಿಯಾಸ್ ಬಳ್ಳಾ, ಅರಸಯ್ಯ, ಚಾಂದ್ ಸಜ್ಜಾದ್, ರಾಮ, ಲಕ್ಷ್ಮಣ, ರವಿಕುಮಾರ ಅಲಿಯಾಸ್ ದೂದ್ ರವಿ, ಲೋಕೇಶ ಅಲಿಯಾಸ್ ಮುಲಾಮ, ಹತೀಕ್ ಪಾಷಾ, ಚೌಧರಿ ಅಮ್ಜದ್ ಮುಂತಾದವರನ್ನು ಸಿಸಿಬಿ ಕಚೇರಿಯಲ್ಲಿಯೇ ವಿಚಾರಣೆ ನಡೆಸಿ ಬಿಡುಗಡೆ ಮಾಡಲಾಗಿದೆ.
ಪೊಲೀಸ್ ಆಯಕ್ತರ ಸಲಹೆ ಮೇರೆಗೆ, ಅಕ್ರಮ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ರೌಡಿಗಳು ತಂಗಿದ್ದ ಲಾಡ್ಜ್ ಮತ್ತು ನಿವಾಸಗಳ ಮೇಲೆ ದಾಳೀ ನಡೆಸಿದ್ದೇವೆ. ಪರೇಡ್ ನಡೆಸಿ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಸಿ ಕೊಳ್ಳದಂತೆ ಅವರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಅಪರಾಧ ವಿಭಾಗದ ಡಿಸಿಪಿ ಡಿ. ದೇವರಾಜ ಮಾಧ್ಯಮಗಳಿಗೆ ತಿಳಿಸಿದ್ದಾರೆ.