ತನಿಖೆಗೆ ಆಶಿಸಿದ ಯಡಿಯೂರಪ್ಪ ಮಾತು ಕಿವಿಗೆ ಬಿತ್ತಾ?
ಬೆಂಗಳೂರು, ಜೂನ್ 8: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿನ್ನೆ ಶುಕ್ರವಾರ ಸದನದಲ್ಲಿ ಜೋರಾಗಿಯೇ ಘರ್ಜಿಸಿದ್ದಾರೆ. ಆದರೆ ಅಕ್ರಮಗಳ ತನಿಖೆಯಾಗಲಿ ಎಂದು ಬಿಎಸ್ವೈ ಆಶಿಸಿರುವುದನ್ನು ಕೇಳಿ ಮಂದಿ ನಗೆಯಾಡಿದ್ದಾರೆ. ತಮ್ಮ ಕಾಲದಲ್ಲಿ ನಡೆದ ಅಕ್ರಮಗಳ ಫಲವಾಗಿ ಲೋಕಾಯುಕ್ತ ಮತ್ತು ಸಿಬಿಐ ತನಿಖೆಗೆ ಈಡಾಗಿರುವ ಮತ್ತು ತತ್ಸಂಬಂದ ಜೈಲಿಗೂ ಹೋಗಿಬಂದ ಯಡಿಯೂರಪ್ಪ ತಮಗಿಂತ ಹಿಂದಿನವರು ನಡೆಸಿರುವ ಹಗರಣಗಳನ್ನು ಬಯಲು ಮಾಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದ್ದಾರೆ.
1999ರಿಂದೀಚೆಗೆ ಗಣಿಗಾರಿಕೆ, ಡಿನೋಟಿಫಿಕೇಷನ್, ಜಿ ಕೆಟಗರಿ ನಿವೇಶನಗಳ ಹಂಚಿಕೆ ಮತ್ತು ಕೆಐಎಡಿಬಿ ಮೂಲಕ ಕೈಗಾರಿಕೆಗಳಿಗೆ ಭೂಮಿ ಹಂಚಿಕೆ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಕೆಜೆಪಿ ನಾಯಕ ಯಡಿಯೂರಪ್ಪ ಆಗ್ರಹಿಸಿದ್ದಾರೆ.
ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಈ ಎಲ್ಲಾ ವಿಚಾರಗಳಲ್ಲೂ ಅಕ್ರಮಗಳು ನಡೆದಿವೆ ಎಂದು ಹೇಳಿ ನನ್ನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲಾಯಿತು. ಆದರೆ, ನನಗಿಂತ ಮುಂಚೆ ಇದ್ದವರು ಏನೇನು ಮಾಡಿದರು? ಯಾರು ತಪ್ಪು ಮಾಡಿದರು? ಎಂಬುದು ಬಹಿರಂಗವಾಗಬೇಕು.
ಆದ್ದರಿಂದ ಈ ಎಲ್ಲಾ ವಿಚಾರಗಳ ಬಗ್ಗೆ ನ್ಯಾಯಾಂಗ ತನಿಖೆ ನಡೆಸಿ ಸತ್ಯ ಹೊರಹಾಕಿ ಎಂದು ಸರ್ಕಾರವನ್ನು ಒತ್ತಾಯಿಸಿದರು. ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ರಾಜ್ಯಪಾಲರ ಭಾಷಣದಲ್ಲಿ ಹಿಂದಿನ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರ, ಹಗರಣಗಳು ನಡೆದು ರಾಜ್ಯ ತಲೆತಗ್ಗಿಸುವಂತಾಗಿದೆ ಎಂದು ಹೇಳಿಸಿದ ಸರ್ಕಾರದ ವಿರುದ್ಧ ಕಿಡಿ ಕಾರಿದ ಯಡಿಯೂರಪ್ಪ ಅವರು, ಇದುವರೆಗಿನ ಯಾವುದೇ ಸರ್ಕಾರ ಹಿಂದಿನ ಸರ್ಕಾರವನ್ನು ಅವಮಾನಿಸುವಂತಹ ಗುರುತರ ಆರೋಪ ಮಾಡಿಲ್ಲ. ಆದ್ದರಿಂದ ಗಾಜಿನ ಮನೆಯಲ್ಲಿ ಕುಳಿತು ಹೊರಗಿನವರಿಗೆ ಕಲ್ಲು ಹೊಡೆಯುವ ಕೆಲಸ ಮಾಡಬೇಡಿ. ಹಿಂದಿನ ಹಗರಣಗಳನ್ನು ಬಯಲು ಮಾಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಎಚ್ಚರಿಸಿದರು.
ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರಾಜ್ಯ ಹಾಳಾಯಿತು ಎಂಬಂತೆ ಮಾತನಾಡಲಾಗುತ್ತಿದೆ. ಆದರೆ, ಯಾವುದೇ ಹೊಸ ತೆರಿಗೆ ಹಾಕದೆ ಖಜಾನೆ ತುಂಬಿಸಿ ಬಜೆಟ್ ಮೊತ್ತವನ್ನು 29 ಸಾವಿರ ಕೋಟಿಯಿಂದ 87 ಸಾವಿರ ಕೋಟಿಗೆ ಹೆಚ್ಚಿಸಿದೆ. ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಿದ್ದಕ್ಕೆ ಅದಿರು ರಫ್ತು ನಿರ್ಬಂಧಿಸಿದ್ದಕ್ಕೆ ನನ್ನನ್ನೇ ಜೈಲಿಗೆ ಅಟ್ಟಿದರು. ಕೊನೆಗೆ ಮುಖ್ಯಮಂತ್ರಿ ಕುರ್ಚಿಯನ್ನೂ ಕಿತ್ತುಕೊಂಡರು ಎಂದರು.
'ನನ್ನ ಅವಧಿಯಲ್ಲಿ ಗಣಿಗಾರಿಕೆಗೆ ಕೇವಲ ಮೂರು ಪರವಾನಿಗೆಗಳನ್ನು ನೀಡಿದೆ. ಆದರೆ ಎಸ್ಎಂ ಕೃಷ್ಣ 16, ಧರಂ ಸಿಂಗ್ ಅವರು 20 ಮತ್ತು ಗರಿಷ್ಠತಮವಾಗಿ ಎಚ್ ಡಿ ಕುಮಾರಸ್ವಾಮಿ ಅವರು 22 ಲೈಸೆನ್ಸ್ ನೀಡಿದರು' ಎಂದು ಯಡಿಯೂರಪ್ಪ ಅವರು ಹಿಂದಿನ ಮುಖ್ಯಮಂತ್ರಿಗಳ ಅಕ್ರಮಗಳ ಪರಿಚಯ ಮಾಡಿಸಿದರು.
ನನಗಿಂತ ಹಿಂದಿನ ಎಲ್ಲ ಮುಖ್ಯಮಂತ್ರಿಗಳು ಗಿ ಕೆಟಗರಿ ನಿವೇಶನಗಳನ್ನು ಹಂಚಿದರು. ಭೂ ಡಿನೋಟಿಫಿಕೇಷನ್ ಮಾಡಿದರು. ನಾನು ನಿವೇಶನವಿಲ್ಲದ ಶಾಸಕರು ಮತ್ತು ಸಂದರು, ಅವರು ಯಾವ ಪಕ್ಷಕ್ಕೇ ಸೇರಿರಲಿ, ನಿವೇಶನ ವಿತರಿಸಿದೆ. ಆದರೆ ನನಗೇ ಕಳಂಕತಟ್ಟಿತು ಎಂದು ಯಡಿಯೂರಪ್ಪ ತಮ್ಮ ಕರ್ಮಕಥೆಯನ್ನು ಸದನದಲ್ಲಿ ತಾವೇ ಸಾದ್ಯಂತವಾಗಿ ಹೇಳಿಕೊಂಡರು.