ಗೃಹ ಬಂಧನ : ಚೇತರಿಸಿಕೊಳ್ಳುತ್ತಿರುವ ಹೇಮಾವತಿ
ನಗರದ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಹೇಮಾವತಿ ಚಿಕಿತ್ಸೆ ಪಡೆಯುತ್ತಿದ್ದು, ಸಣ್ಣ ಧ್ವನಿಯಲ್ಲಿ ವೈದ್ಯರೊಂದಿಗೆ ಸಂವಹನ ನಡೆಸುತ್ತಿದ್ದಾರೆ. ನಿಮ್ಹಾನ್ಸ್ ವೀಕ್ಷಣಾ ವಾರ್ಡ್ನಲ್ಲಿ ದಾಖಲಾಗಿರುವ ಅವರ ಮಾನಸಿಕ ಆರೋಗ್ಯ ತಪಾಸಣೆಗೆ ಡಾ. ಜಾನ್ ಪಿ. ಹಾಗೂ ದೈಹಿಕ ಆರೋಗ್ಯ ಪರಿಕ್ಷೆಗಾಗಿ ಡಾ. ರವಿಶಂಕರ್ ಅವರನ್ನು ನಿಯೋಜಿಸಲಾಗಿದೆ.
ಹೇಮಾವತಿ ಅವರ ಮಾನಸಿಕ ಆರೋಗ್ಯ ಸುಧಾರಣೆಗೆ ಮೊದಲು ಆದ್ಯತೆ ನೀಡಲಾಗಿದ್ದು, ತಂದೆ ರೇಣಕಪ್ಪ ಮತ್ತು ತಾಯಿ ಮಗಳ ಆರೈಕೆಯಲ್ಲಿ ತೊಡಗಿಸಿಕೊಂಡಿದ್ದು, ಅಚ್ಚರಿ ಮೂಡಿಸಿದೆ.( ಹೆತ್ತವರಿಂದ ಗೃಹಬಂಧನ : ಬೆಂಗಳೂರಿನಲ್ಲಿ ಅಮಾನುಷ ಘಟನೆ )
ನಾಲ್ಕೂವರೆ ವರ್ಷದಿಂದ ಸರಿಯಾಗಿ ಆಹಾರ ಸೇವಿಸದ ಕಾರಣ ಆರೋಗ್ಯ ಸ್ಥಿತಿ ಹದಗೆಟ್ಟಿದೆ. ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆಗೆ ಅರ್ಹಗೊಳಿಸಲು ಮೊದಲು ಆದ್ಯತೆ ನೀಡಿದ್ದೇವೆ.
ಕೈಕಾಲು ಬೆರಳಿನ ಉಗುರು, ಕೂದಲು ಕತ್ತರಿಸಿ ಶುಚಿಗೊಳಿಸಿ ತ್ವರಿತವಾಗಿ ಚೇತರಿಸಿಕೊಳ್ಳಲೆಂದು 'ಐವಿ ಡ್ರಿಪ್ಸ್' ನೀಡಿದ್ದೇವೆ ಎಂದು ವೈದ್ಯರು ತಿಳಿಸಿದ್ದಾರೆ. ಹೇಮಾವತಿ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದಾಳೆ. ಆದ್ದರಿಂದ ಕೆಂಪೇಗೌಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದೆವು ಎಂದು ಪೋಷಕರು ಹೇಳುತ್ತಿದ್ದಾರೆ. ಚಿಕಿತ್ಸೆಗೆ ಸಂಬಂಧಿಸಿದ ದಾಖಲಾತಿಗಳನ್ನು ನೀಡುವಂತೆ ಸೂಚಿಸಿದ್ದೇವೆ ಎಂದು ಡಾ. ರವಿಶಂಕರ್ ಹೇಳಿದ್ದಾರೆ.
ದೂರು ದಾಖಲು : ಹೇಮಾವತಿ ಪ್ರಕರಣದ ಬಗ್ಗೆ ರಾಜ್ಯ ಮಾನವ ಹಕ್ಕುಗಳ ಆಯೋಗ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದೆ. ಆಯೋಗದ ರಿಜಿಸ್ಟ್ರಾರ್ ಕೆ. ಎಚ್. ಮಲ್ಲೇಶಪ್ಪ ಆಸ್ಪತ್ರೆಗೆ ಭೇಟಿ ನೀಡಿ ಹೇಮಾವತಿ ಆರೋಗ್ಯದ ಕುರಿತು ವೈದ್ಯರೊಂದಿಗೆ ಮಾತುಕತೆ ನಡೆಸಿದ್ದಾರೆ.
ಪೋಷಕರು ಕೂಡ ಮಾನಸಿಕ ಒತ್ತಡಕ್ಕೆ ಒಳಗಾದಂತೆ ಕಾಣುತ್ತಿರುವುದರಿಂದ ಅವರ ಹೇಳಿಕೆಗಳನ್ನೂ ಪಡೆದುಕೊಂಡಿಲ್ಲ ಎಂದು ಮಲ್ಲೇಶಪ್ಪ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಆರೋಗ್ಯ ಸಚಿವರ ಭೇಟಿ : ನಿಮ್ಹಾನ್ಸ್ ಆಸ್ಪತ್ರಗೆ ಗುರುವಾರ ಬೆಳಗ್ಗೆ ಆರೋಗ್ಯ ಸಚಿವ ಯು.ಟಿ.ಖಾದರ್ ಭೇಟಿ ನೀಡಿ ಹೇಮಾವತಿ ಆರೋಗ್ಯ ವಿಚಾರಿಸಿದರು. ವೈದ್ಯರಿಂದ ಆಕೆಗೆ ನೀಡಲಾಗುತ್ತಿರುವ ಚಿಕಿತ್ಸೆ ಬಗ್ಗೆ ಮಾಹಿತಿ ಪಡೆದರು.