ವಿದ್ಯುತ್ ಸದ್ಬಳಕೆ : ನಾಗರಿಕರಿಗೆ ತರಬೇತಿ ಅಗತ್ಯವಿದೆ
ಪ್ರಶ್ನೆ : ವಿದ್ಯುತ್ ಆಘಾತಗಳನ್ನು ತಡೆಗಟ್ಟಲು ನಾಗರಿಕರಿಗೆ ತರಬೇತಿ ನೀಡುವ ಅಗತ್ಯವಿದೆಯೆ? ಹೌದು ಎಂದಾದರೆ ನಿಮ್ಮ ಯೋಜನೆಗಳೇನು?
ಉತ್ತರ : ಖಂಡಿತ ಹೌದು. ವಿದ್ಯುತ್ ಶಾಕ್ನಿಂದ ದೂರವಿರಲು ನಾಗರಿಕರಲ್ಲಿ ಜಾಗೃತಿ ಮೂಡಿಸುವುದು ಅತೀ ಅಗತ್ಯ. ಕಂಪನಿಯ ಉದ್ಯೋಗಿಗಳ ಸುರಕ್ಷತೆಗಾಗಿ ಪ್ರತಿವರ್ಷ ಬೆಸ್ಕಾಂ 50 ಲಕ್ಷ ರು. ವಿನಿಯೋಗಿಸುತ್ತಿದೆ. ಇದನ್ನು 2013-14ರಲ್ಲಿ 92 ಲಕ್ಷ ರು.ಗೆ ಏರಿಸಲಾಗಿದೆ. ಇದರ ಜೊತೆಗೆ, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ಹೋರ್ಡಿಂಗ್, ವೃತ್ತಪತ್ರಿಕೆ, ಮ್ಯಾಗಜೀನ್ಗಳಲ್ಲಿ ಜಾಹೀರಾತು ನೀಡುವುದಕ್ಕಾಗಿ 60-70 ಲಕ್ಷ ರು.ಗಳನ್ನು ವಿನಿಯೋಗಿಸಲಾಗುತ್ತಿದೆ. ಈ ವರ್ಷ ಬೆಂಗಳೂರಿನಲ್ಲಿ 15 ಹೋರ್ಡಿಂಗ್ ಮೂಲಕ ಜಾಗೃತಿ ಮೂಡಿಸಲು 2 ಕೋಟಿ ರು. ವ್ಯಯಿಸುತ್ತಿದೆ.
ಬೆಸ್ಕಾಂ ಅಡಿಯಲ್ಲಿ ಬರುವ 8 ಸರ್ಕಲ್ಗಳಿಗೆ ಜನರ ಸುರಕ್ಷತೆಯಾಗಿ ಮುಕ್ತ ನಿರ್ಣಯ ತೆಗೆದುಕೊಳ್ಳಲು ಸಂಪೂರ್ಣ ಅಧಿಕಾರ ನೀಡಲಾಗಿದೆ. ಜೊತೆಗೆ ಎಲ್ಲ ಟ್ರಾನ್ಸ್ಫಾರ್ಮರ್, ಫೀಡರ್ ಬಾಕ್ಸ್ ಗಳ ಮೇಲೆ ಜನರ ಸುರಕ್ಷತೆಗಾಗಿ ಮತ್ತು ಅಪಘಾತದಿಂದ ದೂರವಿರಲು ಹಲವಾರು ಉಪಯುಕ್ತ ಸೂಚನೆಗಳನ್ನು ನೀಡಲಾಗಿದೆ. ಜೊತೆಗೆ ಸಾರ್ವಜನಿಕರು ಕೂಡ ಬೆಸ್ಕಾಂ ಜೊತೆ ಸಹಕರಿಸಬೇಕು.
ಪ್ರಶ್ನೆ : ಮುಂಗಾರಿನ ಸಮಯದಲ್ಲಿ ತೊಂದರೆಗಳನ್ನು ಎದುರಿಸಲು ಏನು ಯೋಜನೆ ಹೂಡಲಾಗಿದೆ?
ಉತ್ತರ : ಮೇ 22ರಂದು ಬೆಂಗಳೂರು ನಗರದಲ್ಲಿ ಸುರಿದ ದಾಖಲೆ ಮಳೆ ನಮಗೆ ಪರೀಕ್ಷೆಯ ಹಂತವಾಗಿತ್ತು. ಮರಗಳು ಬುಡಮೇಲಾಗುವುದು, ಪ್ರವಾಹ ಸಂಭವಿಸುವುದರಿಂದ ಕಂಡಕ್ಟರುಗಳು ಕೆಲಸ ಸ್ಥಗಿತಗೊಳಿಸುತ್ತವೆ, ಶಾರ್ಟ್ ಸರ್ಕಿಟ್ ಉಂಟಾಗಿ ವಿದ್ಯುತ್ ಸಂಪರ್ಕ ಕಡಿತಗೊಳ್ಳುತ್ತದೆ. ಇಂಥ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು ನಮ್ಮ ಸಹಾಯವಾಣಿ (080-22873333) ಬಲಪಡಿಸುವ ಉದ್ದೇಶದಿಂದ, ಪ್ರಸ್ತುತವಿರುವ 45 ಲೈನುಗಳಿಗೆ 15 ಲೈನುಗಳನ್ನು ಸೇರಿಸಲಾಗಿದೆ.
ಮುಂಗಾರನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗಿದೆ. ಭಾರೀ ಮಳೆ ಸುರಿದಾಗ ಹಲವಾರು ಲೈನುಗಳು ಕಾರ್ಯನಿರತವಾಗಿರುವುದರಿಂದ ಹೆಚ್ಚಿನ ಅನುಕೂಲವಾಗಲೆಂದು ಲೈನುಗಳ ಸಂಖ್ಯೆಯನ್ನು 60ಕ್ಕೆ ಹೆಚ್ಚಿಸಲಾಗಿದೆ. ಸದ್ಯಕ್ಕಿರುವ 110 ತಂಡಗಳಿಗೆ ಇನ್ನೂ 50 ತಂಡಗಳನ್ನು ಸೇರಿಸಲಾಗಿದ್ದು, ವಾಹನ, ಸಲಕರಣೆಗಳೊಂದಿಗೆ ಪರಿಹಾರ ಕಾರ್ಯಕ್ಕೆ ನುಗ್ಗಲು ಸಜ್ಜಾಗಿರುತ್ತೇವೆ. ನಗರದಲ್ಲಿ 160 ವಾಹನಗಳಿದ್ದು, ಗ್ರಾಮಾಂತರ ಪ್ರದೇಶದಲ್ಲಿ 20 ವಾಹನಗಳಿರುತ್ತವೆ. ಅಗತ್ಯಬಿದ್ದರೆ ಒಂದಕ್ಕಿಂತ ಹೆಚ್ಚು ವಾಹನ ಮತ್ತು ಕ್ರೇನ್ಗಳನ್ನು ಬಳಸಲು ಅನುಮತಿ ನೀಡಲಾಗಿದೆ.