ವಿದ್ಯುತ್ ಕಳ್ಳರ ವಿರುದ್ಧ ಬೆಸ್ಕಾಂ ಕ್ರಮವೇನು?
ಪ್ರಶ್ನೆ : ವಿದ್ಯುತ್ ಕಳ್ಳತನ ನಡೆಯುತ್ತಿದೆಯೆ? ಹೌದಾದರೆ, ಕಳ್ಳತನ ತಡೆಗಟ್ಟಲು ಮತ್ತು ಕಳ್ಳರ ವಿರುದ್ಧ ಏನೇನು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ?
ಉತ್ತರ : ಹೌದು, ಹಲವಾರು ವಿದ್ಯುತ್ ಕಳ್ಳತನದ ವರದಿಗಳು ನಮಗೆ ಬಂದಿವೆ. ವಿದ್ಯುತ್ ಕಳ್ಳತನ ನಡೆದಿರುವ ದೂರು ಬಂದಾಗ ಬೆಸ್ಕಾಂನ ಜಾಗೃತದಳ ತನ್ನ ಕೆಲಸ ಆರಂಭಿಸುತ್ತದೆ. ಬೆಂಗಳೂರಿನಲ್ಲಿ 4 ಮತ್ತು ಉಳಿದ 7 ಜಿಲ್ಲೆಗಳಲ್ಲಿ ತಲಾ 1 ಜಾಗೃತದಳದ ಪೊಲೀಸ್ ಸ್ಟೇಷನ್ಗಳಿವೆ. ಅನೈತಿಕ ಸಂಪರ್ಕಗಳಿರುವುದು ತಿಳಿದುಬಂದಾಗ ಜಾಗೃತದಳ ದಾಳಿ ಮಾಡಿ ತಪಾಸಣೆ ನಡೆಸುತ್ತದೆ. 2012ರ ಏಪ್ರಿಲ್ನಿಂದ 2013ರ ಮಾರ್ಚ್ವರೆಗೆ ಜಾಗೃತದಳ 1514 ಕಾಗ್ನಿಜೇಬಲ್ ಮತ್ತು 1738 ನಾನ್ ಕಾಗ್ನಿಜೇಬಲ್ ದೂರುಗಳನ್ನು ದಾಖಲು ಮಾಡಿಕೊಂಡಿದೆ. ತಪ್ಪಿತಸ್ಥರಿಗೆ ಇಂಡಿಯನ್ ಎಲೆಕ್ಟ್ರಿಸಿಟಿ ಆಕ್ಟ್ 2003 ಪ್ರಕಾರ ದಂಡ ವಿಧಿಸಲಾಗಿದೆ. ಹಾಗೆಯೆ, ಕದ್ದಿರುವುದು ಸಾಬೀತಾದರೆ ಅಪರಾಧಿಗಳಿಗೆ ಮೂರು ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಬಹುದಾಗಿದೆ.
ಪ್ರಶ್ನೆ : ಬೆಂಗಳೂರಿನ ಹಲವಾರು ಕಡೆಗಳಲ್ಲಿ ವಿದ್ಯುತ್ತನ್ನು ದುರ್ಬಳಸಲಾಗುತ್ತಿದೆ ಅಥವಾ ಅಧಿಕವಾಗಿ ಬಳಸಲಾಗುತ್ತಿದೆ. ಉದಾಹರಣೆಗೆ, ಅರಮನೆ ಮೈದಾನದಲ್ಲಿ, ರಾಜಕೀಯ ಸಮಾವೇಶಗಳು ನಡೆದಾಗ, ಮೇಳಗಳು ಜರುಗಿದಾಗ. ವಿದ್ಯುತ್ ಉಳಿಸಲು ನಿಮ್ಮ ಸಲಹೆಗಳೇನು?
ಉತ್ತರ : ಅರಮನೆ ಮೈದಾನ, ರಾಜಕೀಯ ಸಮಾವೇಶಗಳಿಗೆ ನೀಡಲಾಗುವ ವಿದ್ಯುತ್ ಸಂಪರ್ಕವನ್ನು ವಾಣಿಜ್ಯ ಬಳಕೆ ಎಂದು ವಿಂಗಡಿಸಲಾಗಿದೆ. ಅಂಥ ಸಂಪರ್ಕಗಳಿಗೆ ಹೆಚ್ಚಿನ ದರವನ್ನು ನಿಗದಿಪಡಿಸಲಾಗಿದೆ. ಆ ರೀತಿಯ ವಿದ್ಯುತ್ ಬಳಕೆಯಾದಾಗ ಹೆಚ್ಚುವರಿ ವಿದ್ಯುತ್ ಸರಬರಾಜು ಆಗದಂತೆ ಬೆಸ್ಕಾಂ ಅಧಿಕಾರಿಗಳು ನಿಗಾವಹಿಸುತ್ತಾರೆ. ಮತ್ತು ಜಾಗೃತದಳ ದುರ್ಬಳಕೆಯಾಗದಂತೆ ಒಂದು ಕಣ್ಣಿಟ್ಟಿರುತ್ತದೆ. ವಿದ್ಯುತ್ ದುರ್ಬಳಕೆಯಾಗುತ್ತಿರುವುದು ತಿಳಿದುಬಂದರೆ ಅಂಥ ಏಜೆನ್ಸಿಗಳಿಗೆ ಮತ್ತು ಬಳಕೆದಾರರಿಗೆ ದಂಡವನ್ನು ವಿಧಿಸಲಾಗುತ್ತದೆ.
ವಿದ್ಯುತ್ ಪೋಲಾಗದಂತೆ ತಡೆಯುವ ಸಾಧನಗಳು, ವಿದ್ಯುತ್ ಮರುಬಳಕೆ ಮಾಡುವ ಸಲಕರಣೆಗಳನ್ನು ಬಳಸುವಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಬೆಸ್ಕಾಂ ಡಿಮಾಂಡ್ ಸೈಡ್ ಮ್ಯಾನೇಜ್ಮೆಂಟ್ ಎಂಬ ಕಾರ್ಯಕ್ರಮವನ್ನು ಕೂಡ ಹಮ್ಮಿಕೊಂಡಿದೆ. ಇದರಿಂದ ವಿದ್ಯತ್ತನ್ನು ಸಾಕಷ್ಟು ಉಳಿಸಬಹುದು.
ಪ್ರಶ್ನೆ : ಬೆಂಗಳೂರಿನ ಹಲವಾರು ಪ್ರದೇಶಗಳಲ್ಲಿ ವಿದ್ಯುತ್ ತಂತಿಗಳು ಮನೆಗಳ ಮಾಳಿಗೆಯ ಅತಿ ಹತ್ತಿರದಲ್ಲಿ ಅಪಾಯಕಾರಿಯಾಗಿ ಅಂತರದಲ್ಲಿ ತೂಗಾಡುತ್ತಿರುತ್ತವೆ. ಇಂಥವುಗಳನ್ನು ಬೆಸ್ಕಾಂ ಗಮನಿಸುತ್ತಿದೆಯೆ?
ಉತ್ತರ : ಅಪಾಯಕಾರಿ ಅಂತರದಲ್ಲಿ ವಿದ್ಯುತ್ ತಂತಿ ಅಳವಡಿಕೆಗಳ ಬಗ್ಗೆ ಬೆಸ್ಕಾಂ ಸಮೀಕ್ಷೆ ಮಾಡುತ್ತಲೇ ಇರುತ್ತದೆ. ಅವುಗಳನ್ನು ಸರಿಪಡಿಸಿದ ನಂತರ ಅವುಗಳ ಫೋಟೋಗಳನ್ನು ಕೆಆರ್ಇಸಿ(Karnataka Electricity Regulatory Commission)ಗೆ ಪ್ರತಿ ತಿಂಗಳು ಕಳಿಸುತ್ತಿರುತ್ತೇವೆ. ಬೆಂಗಳೂರಿನಲ್ಲಿ 34,000 ಮತ್ತು ಬೆಸ್ಕಾಂ ವ್ಯಾಪ್ತಿಯಲ್ಲಿ 1,77,839 ಟ್ರಾನ್ಸ್ಫಾರ್ಮರ್ಸ್ಗಳಿವೆ ಎಂದರೆ ಈ ಪ್ರದೇಶದಲ್ಲೆಲ್ಲ ಎಷ್ಟು ಲೈವ್ ವೈರ್ಗಳು ಇರಬಹುದು ಎಂದು ಲೆಕ್ಕ ಹಾಕಿ.
ಸುರಕ್ಷತಾ ನಿಮಯಗಳನ್ನು ಧಿಕ್ಕರಿಸಿ ಅನಧಿಕೃತವಾಗಿ ಕಟ್ಟಲಾಗಿರುವ ಕಟ್ಟಡಗಳು ವ್ಯವಸ್ಥೆಯನ್ನು ಇನ್ನಷ್ಟು ಜಟಿಲ ಮಾಡುತ್ತವೆ. ಪರಿಸ್ಥಿತಿ ಹೀಗಿರುವಾಗ ಅಂಡರ್ಗ್ರೌಂಡ್ ವಿದ್ಯುತ್ ಸಂಪರ್ಕ ವ್ಯವಸ್ಥೆ ಅತ್ಯುತ್ತಮವಾದುದು. ಆದರೆ, ಭೂಮಿಯ ಒಳಗಿನ ವಿದ್ಯುತ್ ಸಂಪರ್ಕ ಕಲ್ಪಿಸಲು 3,600 ಕೋಟಿ ರು. ತಗಲುತ್ತದೆ. ಬೆಸ್ಕಾಂ ಇದನ್ನು ಹಂತಹಂತವಾಗಿ ಜಾರಿಗೆ ತರಲು ಸಿದ್ಧವಾಗಿದೆ. ಮತ್ತು ಯಾವುದೇ ಹೊಸ ವಿದ್ಯುತ್ ಸಂಪರ್ಕವನ್ನು ಅಂಡರ್ಗ್ರೌಂಡ್ ಮೂಲಕವೇ ಪಡೆಯುವುದನ್ನು ಕಡ್ಡಾಯ ಮಾಡಲಾಗಿದೆ.
ವಿದ್ಯುತ್ ಕಡಿತಗೊಂಡಾಗ ಅಥವಾ ಯಾವುದೇ ಅವಘಡ ಸಂಭವಿಸಿದಾಗ ಬೆಸ್ಕಾಂನ ಫೇಸ್ ಬುಕ್ ತಾಣದ ಮುಖಾಂತರವೂ ಸಾರ್ವಜನಿಕರು ದೂರು ನೀಡಬಹುದಾಗಿದೆ.