ಬೆಸ್ಕಾಂ ಚೀಫ್ ಜನರಲ್ ಮ್ಯಾನೇಜರ್ ಸಂದರ್ಶನ
ಬೆಂಗಳೂರಿನ ಜನರು ಇತರ ನಗರ ಮತ್ತು ಗ್ರಾಮಾಂತರ ಜನರಿಗೆ ಹೋಲಿಸಿದರೆ ನಿಜಕ್ಕೂ ಅದೃಷ್ಟವಂತರು. ಹಳ್ಳಿಯ ಜನರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಲಭಿಸುತ್ತಿದೆ! ಹಾಗಾಗಿ, ಕರೆಂಟ್ ಸರಿಯಾಗಿ ಕೊಡಲ್ಲ, ಕಟ್ ಆದ್ರೆ ಬೇಗ ರಿಪೇರಿ ಮಾಡಲ್ಲ, ಮೀಟರ್ ಸರಿಯಿಲ್ಲ ಅಂತ ವಿದ್ಯುತ್ ಕಂಪನಿಯ ವಿರುದ್ಧದ ಗೊಣಗಾಟವೂ ಸ್ವಲ್ಪ ಜಾಸ್ತಿಯೆ. ಹೆಚ್ಚಿನ ವಿದ್ಯುತ್ ಲಭಿಸುತ್ತಿರುವುದರಿಂದ ಅನುಕೂಲಗಳೂ ಜಾಸ್ತಿ, ತೊಂದರೆಗಳೂ ಜಾಸ್ತಿ.
ಮಳೆ ಬಂದ್ರೂ ಕಷ್ಟ, ಜೋರಾಗಿ ಗಾಳಿ ಬೀಸಿ ಮರ ಉರುಳಿದರೂ ಕಷ್ಟ. ಇನ್ನೇನು ನೆಚ್ಚಿನ ಧಾರಾವಾಹಿ ಬರಬೇಕು ಅಷ್ಟರಲ್ಲಿ ಕರೆಂಟ್ ಕಟ್ ಮಾಡಿದರು ಎಂದು ವಿದ್ಯುತ್ ಕಂಪನಿಯ ವಿರುದ್ಧ ಬೈಗುಳಗಳ ಸಹಸ್ರನಾಮಾವಳಿ ಶುರು. ಮುಂಗಾರು ಇನ್ನೇನು ಆರಂಭವಾಗಿದೆ, ವಿದ್ಯುತ್ ಸಂಪರ್ಕಕ್ಕೆ ಸಂಬಂಧಿಸಿದಂತೆ ತೊಂದರೆಗಳ ಸರಮಾಲೆಗಳೂ ಶುರುವಾಗಲಿವೆ. ನಾಗರಿಕರೂ ಸಾಕಷ್ಟು ಎಚ್ಚರದಿಂದ ಇರಬೇಕು.
ಆದರೆ, ನೈಸರ್ಗಿಕ ವಿಕೋಪ ಬಂದು ವಿದ್ಯುತ್ ಕಡಿತಗೊಂಡಾಗ, ಕಟ್ ಆಗಿ ಬಿದ್ದ ತಂತಿಯಿಂದ ವಿದ್ಯುತ್ ಹರಿದು ಅಪಘಾತ ಸಂಭವಿಸಿದಾಗ, ವಿದ್ಯುತ್ ಕಳ್ಳತನಗಳಾದಾಗ, ಕರೆಂಟ್ ದುರ್ಬಳಕೆಗಳಾದಾಗ ಅಥವಾ ಮತ್ತಾವುದೇ ಪರಿಸ್ಥಿತಿ ಒದಗಿಬಂದಾಗ ಬೆಸ್ಕಾಂ (Bangalore Electricity Supply Company) ಯಾವ ರೀತಿ ಕಾರ್ಯನಿರ್ವಹಿಸುತ್ತದೆ, ಸಾರ್ವಜನಿಕರಿಗೆ ಯಾವ ರೀತಿಯ ಸುರಕ್ಷತೆಗಳನ್ನು ಒದಗಿಸುತ್ತದೆ ಎಂಬ ಬಗ್ಗೆ ಒನ್ಇಂಡಿಯಾ ಕನ್ನಡ ಕೇಳಿದ ಪ್ರಶ್ನೆಗಳಿಗೆ ಬೆಸ್ಕಾಂನ ಚೀಫ್ ಜನರಲ್ ಮ್ಯಾನೇಜರ್ ಆನಂದ್ ನಾಯಕ್ ಅವರು ಉತ್ತರಿಸಿದ್ದಾರೆ.
ಅತ್ಯಂತ ದಕ್ಷ ಅಧಿಕಾರಿಗಳಲ್ಲಿ ಒಬ್ಬರು ಎಂದು ಹೆಸರು ಮಾಡಿರುವ ಮಣಿವಣ್ಣನ್ ಅವರು ಬೆಂಗಳೂರಿನ ಜನರಿಗೆ ಅತ್ಯುತ್ತಮ ಸೇವೆ ಒದಗಿಸುವ ಉದ್ದೇಶದಿಂದ ಬೆಸ್ಕಾಂನಲ್ಲಿ ಹಲವಾರು ಯೋಜನೆಗಳನ್ನು ರೂಪಿಸಿದ್ದಾರೆ. ಕರ್ನಾಟಕದಲ್ಲಿ ಮುಂಗಾರು ಆರಂಭವಾಗಿದ್ದು, ಈ ಸಂದರ್ಭದಲ್ಲಿ ಜನರಿಗೆ ಯಾವುದೇ ತೊಂದರೆ ಸಂಭವಿಸದಂತೆ ಹೆಚ್ಚಿನ ನಿಗಾ ವಹಿಸಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ನಾಯಕ್ ಅವರು ವಿವರಿಸಿದ್ದಾರೆ. (ಪ್ರಶ್ನೋತ್ತರಗಳು ಮುಂದಿವೆ ಓದಿ)