ಬೆಂಗಳೂರು : ಇಪ್ಪತ್ತು ಸಾವಿರ ಗುಟ್ಕಾ ಪ್ಯಾಕೆಟ್ ವಶ
ಮಂಗಳವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು, ಬೆಂಗಳೂರಿನ ಕಲಾಸಿಪಾಳ್ಯ, ಕೆ.ಆರ್.ಮಾರುಕಟ್ಟೆ ಸುತ್ತಮುತ್ತಲಿನ ಹಲವು ಅಂಗಡಿಗಳ ಮೇಲೆ ದಾಳಿ ನಡೆಸಿ ಸುಮಾರು 20,000ಕ್ಕೂ ಅಧಿಕ ಗುಟ್ಕಾ ಪ್ಯಾಕೆಟ್ ಗಳನ್ನು ವಶಪಡಿಸಿಕೊಂಡರು.
ಕಲಾಸಿಪಾಳ್ಯದಲ್ಲಿ ದಾಸ್ತಾನು ಅಂಗಡಿಗಳ ಮೇಲೆ ದಾಳಿ ನಡೆಸಿದ ಅಧಿಕಾರಿಗಳು, ನಗರದ ವಿವಿಧ ಪ್ರದೇಶಗಳ ಅಂಗಡಿಗಳಿಗೆ ಮಾರಾಟ ಮಾಡಲು ಸಂಗ್ರಹಿಸಿದ್ದ ಗುಟ್ಕಾ ಪ್ಯಾಕೆಟ್ ಗಳನ್ನು ವಶಕ್ಕೆ ಪಡೆದರು. ಆದರೆ, ಯಾವ ಡೀಲರ್ ಗಳ ವಿರುದ್ಧವೂ ಪ್ರಕರಣ ದಾಖಲಿಸಿದೆ, ಎಚ್ಚರಿಗೆ ನೀಡಲಾಗಿದೆ.
ಕಾಳಸಂತೆಯಲ್ಲಿಯೂ ಗುಟ್ಕಾ ಮಾರಾಟ ನಿಯಂತ್ರಣಕ್ಕೆ ತರಲು ಮುಂದಾಗಿರುವ ಸರ್ಕಾರ, ಡೀಲರ್ ಗಳ ಅಂಗಡಿಗಳನ್ನು ಹುಡುಕಾಡುತ್ತಿದೆ. ಗುಟ್ಕಾ ಪ್ಯಾಕೆಟ್ ಗಳನ್ನು ವಶಕ್ಕೆ ಪಡೆಯುತ್ತಿರುವ ಅಧಿಕಾರಿಗಳು ಮೊದಲ ಹಂತದಲ್ಲಿ ಕೇವಲ ಎಚ್ಚರಿಕೆ ನೀಡುತ್ತಿದ್ದಾರೆ. ಮುಂದಿನ ಹಂತದಲ್ಲಿ ಪ್ರಕರಣ ದಾಖಲಿಸಿಕೊಂಡು ಶಿಕ್ಷೆ ನೀಡಲು ಚಿಂತನೆ ನಡೆದಿದೆ.
ಬೀದರ್, ಬಳ್ಳಾರಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲೂ ಅಧಿಕಾರಿಗಳು ದಾಳಿ ನಡೆಸಿದ್ದು, ಗುಟ್ಕಾವನ್ನು ಮಾರಾಟ ಮಾಡದಂತೆ ಅಂಗಡಿ ಮಾಲೀಕರಿಗೆ ನಿರ್ದೇಶನ ನೀಡಿದ್ದಾರೆ. ಬುಧವಾರದಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಂತಹ ದಾಳಿ ನಡೆಯಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ( ಗುಟ್ಕಾ ನಿಷೇಧ ಮುಂದೇನು?)
ದೊಡ್ಡ ಸಮಸ್ಯೆ : ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶದಂತೆ ಗುಟ್ಕಾ ಪ್ಯಾಕೆಟ್ ಗಳನ್ನು ಸುಡುವಂತಿಲ್ಲ. ಆದ್ದರಿಂದ ಅಧಿಕಾರಿಗಳು ವಶಪಡಿಸಿಕೊಂಡ ಪ್ಯಾಕೆಟ್ ಗಳನ್ನು ಏನು ಮಾಡುವುದು ಎಂದು ಅಧಿಕಾರಿಗಳಿಗೆ ತಲೆನೋವಾಗಿದೆ. ಬುಧವಾರ ಆರೋಗ್ಯ ಇಲಾಖೆ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ನಭೆ ನಡೆಸಲಿದ್ದು, ನಂತರ ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು.