ಶೀಲಾ ದೀಕ್ಷಿತ್ ವಿರುದ್ಧ ಕೇಜ್ರೀವಾಲ್ ಕಣಕ್ಕೆ?
ಅರವಿಂದ್ ಕೇಜ್ರೀವಾಲ್ ಈ ಕುರಿತು ಸೋಮವಾರ ಪಕ್ಷಕ್ಕೆ ಮನವಿ ಸಲ್ಲಿಸಲಿದ್ದು, ಪಕ್ಷ ಸಮ್ಮತಿ ನೀಡಿದರೆ ಚುನಾವಣೆಗೆ ಸ್ಪರ್ಧಿಸುವುದಾಗಿ ಹೇಳಿದ್ದಾರೆ. ದೆಹಲಿ ಸಿಎಂ ಶೀಲಾ ದೀಕ್ಷಿತ್ ವಿರುದ್ಧ ಕಣಕ್ಕಿಳಿಯುವ ಕೇಜ್ರೀವಾಲ್ ನಿರ್ಧಾರಕ್ಕೆ ಹಲವಾರು ನಾಯಕರು ಬೆಂಬಲ ಸೂಚಿಸಿದ್ದಾರೆ.
ಶೀಲಾ ದೀಕ್ಷಿತ್ ವಿರುದ್ಧ ಕೇಜ್ರೀವಾಲ್ ಸ್ಪರ್ಧಿಸಿದರೆ, ಬಿಜೆಪಿಗೂ ಸವಾಲು ಎದುರಾಗಲಿದೆ. ದೆಹಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯ್ ಗೋಯಲ್ ಶೀಲಾ ದೀಕ್ಷಿತ್ ವಿರುದ್ಧ ಚುನಾವಣೆಗೆ ಸ್ಪರ್ಧಿಸಲಿದ್ದಾರೆ.
ಬಿಜೆಪಿ ಪ್ರತಿ ಬಾರಿಯ ಸಿಎಂ ವಿರುದ್ಧ ಪ್ರಬಲ ಅಭ್ಯರ್ಥಿ ನಿಲ್ಲಿಸುವುದಿಲ್ಲ ಎಂಬ ಆರೋಪದಿಂದ ಮುಕ್ತವಾಗಲು ಪಕ್ಷದ ರಾಜ್ಯಾಧ್ಯಕ್ಷರೇ ಸ್ಪರ್ಧಿಸುತ್ತಿದ್ದಾರೆ. ಮೂವರು ಒಂದೇ ಕ್ಷೇತ್ರದಲ್ಲಿ ಸ್ಪರ್ಧಿಸಿದರೆ ದಿಗ್ಗಜರ ಭಾರೀ ಪೈಪೋಟಿ ಉಂಟಾಗಲಿದೆ.
ಕೇಜ್ರಿವಾಲ್ ಕಣಕ್ಕಿಳಿಯುವುದು ಅಂತಿಮ ನಿರ್ಧಾರ ಪಕ್ಷದ ನಾಯಕರ ಮೇಲೆ ನಿಂತಿದೆ. ಕೇಜ್ರೀವಾಲ್ ಚುನಾವಣೆಗೆ ಸ್ಪರ್ಧಿಸುವ ಕ್ಷೇತ್ರದ ನೂರು ಜನರ ಸಹಿ ಸಂಗ್ರಹಿಸಿ, ಹಲವು ಜನರನ್ನು ಭೇಟಿ ಮಾಡಿ ಸಂದರ್ಶನ ನಡೆಸಿದ ಬಳಿಕ ಚುನಾವಣೆಗೆ ನಿಲ್ಲಲು ಪಕ್ಷ ಹಸಿರು ನಿಶಾನೆ ತೋರಲಿದೆ.
ಶೀಲಾ ದೀಕ್ಷಿತ್ ಭ್ರಷ್ಟಾಚಾರದ ಲಾಂಚನದಂತಾಗಿದ್ದಾರೆ. ಆದ್ದರಿಂದ ಅವರ ವಿರುದ್ಧ ಚುನಾವಣೆಗೆ ಸ್ಪರ್ಧಿಸುತ್ತೇನೆ. ದೀಕ್ಷಿತ್ ಕ್ಷೇತ್ರವನ್ನು ಬದಲಾವಣೆ ಮಾಡಿದರೆ, ನಾನು ಕ್ಷೇತ್ರ ಬದಲಾವಣೆ ಮಾಡುತ್ತೇನೆ. ಒಟ್ಟಿನಲ್ಲಿ ಈ ಬಾರಿಯ ಸ್ಪರ್ಧೆ ಶೀಲಾ ದೀಕ್ಷಿತ್ ವಿರುದ್ಧ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಆಮ್ ಆದ್ಮಿ ಪಕ್ಷದ ಮುಖಂಡ ಪ್ರಶಾಂತ್ ಭೂಷಣ್ ಕೇಜ್ರಿವಾಲ್ ಗೆ ಸಂಪೂರ್ಣ ಬೆಂಬಲ ನೀಡಿದ್ದಾರೆ. ಶೀಲಾ ದೀಕ್ಷಿತ್ ವಿರುದ್ಧ ಕೇಜ್ರಿವಾಲ್ ಸ್ಪರ್ಧಿಸುವುದು ಉತ್ತಮ ನಿರ್ಧಾರ. ನಿಜವಾದ ನಾಯಕ ಯಾರು ಎಂದು ಜನರು ತೀರ್ಮಾನಿಸಲಿ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರದ ಹಗರಣಗಳ ವಿರುದ್ಧ ಮಾತನಾಡುತ್ತಿದ್ದ ಕೇಜ್ರಿವಾಲ್ ಚುನಾವಣೆಗೆ ಸ್ಪರ್ಧಿಸುವ ಮೂಲಕ ಸಕ್ರಿಯ ರಾಜಕಾರಣಕ್ಕೆ ಪಾದಾರ್ಪಣೆ ಮಾಡಲಿದ್ದಾರೆ. ಕೇಜ್ರೀವಾಲ್ ಸ್ಪರ್ಧಿಸಿದರೆ, ದೆಹಲಿಯ ಚುನಾವಣೆ ಈ ಬಾರಿ ರಂಗು ಪಡೆದುಕೊಳ್ಳುವುದು ಖಂಡಿತ.