ಲಕ್ನೋ : ವರ ಕಪ್ಪು ಎಂದು ಮದುವೆ ನಿಲ್ಲಿಸಿದ ವಧು
ಶುಕ್ರವಾರದ ಶುಭದಿನ ಉತ್ತರ ಪ್ರದೇಶದ ರಾಯಭರೇಲಿಯಲ್ಲಿ ಜಮಾಲಾಪುರದ ನಿವಾಸಿ ಭರತ್ ಎಂಬುವವರ ವಿವಾಹ ಸಮಾರಂಭ ಏರ್ಪಡಿಸಲಾಗಿತ್ತು. ಮದುವೆಗೆ ತಯಾರಾಗಿ ಹುಡುಗ ಹಸೆಮಣೆ ಏರಿ ಕುಳಿತಿದ್ದ. ಶಾಸ್ತ್ರದಂತೆ ಹುಡುಗಿ ಬಂದು ಪಕ್ಕದಲ್ಲಿ ಕುಳಿತಳು.
ತುಸು ನಾಚಿಕೆಯಿಂದಲೇ ವರನ ಮುಖವನ್ನು ಪರದೆಯಿಂದಲೇ ಇಣುಕಿ ನೋಡಿದ ವಧುವಿಗೆ ಶಾಕ್ ಆಗಿತ್ತು. ವರ ಭರತ್ ಕಡುಗಪ್ಪು ಬಣ್ಣ ಹೊಂದಿದ್ದ, ನನಗೆ ಮದುವೆ ಬೇಡ ಎಂದು ಹಠ ಹಿಡಿದು ಕುಳಿತಳು.
ಮದುವೆಗೆ ಹೆಣ್ಣು-ಗಂಡು ತೋರಿಸುವಾಗ ಸರಿಯಾಗಿ ಹುಡುಗನ ಮುಖ ನೋಡಿ ನೋಡಿರಲಿಲ್ಲವೇನೋ? ಮದುವೆ ಮಂಟಪದಲ್ಲಿ ಹುಡುಗಿಯ ಮಾತು ಕೇಳಿ ಕುಟುಂಬದವರಿಗೆ ಆತಂಕ ಉಂಟಾಯಿತು.
ನೋಡಮ್ಮ ಆಗಿದ್ದು ಆಗಿ ಹೋಯಿತು. ಮಂಟಪದಲ್ಲಿ ಮದುವೆ ಬೇಡ ಎಂದು ಹೇಳಬೇಡ, ಎಂದು ಹಿರಿಯರು ವಧುವಿನ ಮನವೊಲಿಸಿದರು. ಆದರೆ, ಹುಡುಗಿ ತನ್ನ ಹಠ ಬಿಡಲಿಲ್ಲ. ಕೊನೆಗೆ ಕುಟುಂಬದವರು ಪೊಲೀಸರ ಮೊರೆ ಹೋದರು.
ಸ್ಥಳಕ್ಕಾಗಮಿಸಿದ ಪೊಲೀಸರು ಹುಡುಗಿಯ ಮಾತು ಕೇಳಿ ಆಶ್ಚರ್ಯಪಟ್ಟರು. ಇದು ನಿಮ್ಮ ಕುಟುಂಬದ ವಿಷಯ ಬಲವಂತದಿಂದ ಮದುವೆ ಮಾಡಿದರೆ, ಮುಂದೆ ಅನಾಹುತವಾಗುತ್ತದೆ ತಿಳಿದುಕೊಳ್ಳಿ ಎಂದು ಹೇಳಿ ಸ್ಥಳದಿಂದ ಹೊರಟು ಹೋದರು.
ಮುಂದೆ ಬದುಕಿ ಬಾಳಬೇಕಾದ ವಧುವೇ ಮದುವೆ ಬೇಡವೆಂದ ಮೇಲೆ ನಮ್ಮದೇನಿದೆ ಎಂದು ಹಿರಿಯರು ಮದುವೆ ನಿಲ್ಲಿಸುವುದಾಗಿ ಘೋಷಿಸಿದರು. ಹಸೆಮಣೆ ಮೇಲೆ ಕುಳಿತ ಹುಡುಗ ಮದುವೆ ಆಗುವ ಅದೃಷ್ಟ ನನಗಿಲ್ಲ ಎಂದು ಪೆಚ್ಚುಮೊರೆ ಹಾಕಿಕೊಂಡು ಕುಳಿತ.