ಹರ್ಯಾಣ :ಕೊಳವೆಬಾವಿಗೆ ಬಿದಿದ್ದ ಮಗುವಿನ ರಕ್ಷಣೆ
ಪಲ್ವಾಲಾ ಜಿಲ್ಲೆಯ ಅಮರಾಪುರ ಗ್ರಾಮಕ್ಕೆ ತಾಯಿಯೊಂದಿಗೆ ಆಗಮಿಸಿದ್ದ ತನು (4) ಬುಧವಾರ ಸಂಜೆ 5 ಗಂಟೆ ಸುಮಾರಿಗೆ ಆಟವಾಡುತ್ತಿದ್ದಾಗ ಕಾಲುಜಾರಿ 200 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿದ್ದಳು. ಬಾವಿಯಲ್ಲಿ ಸುಮಾರು 20 ಅಡಿಗಳ ಕೆಳಗೆ ಬಾಲಕಿ ಸಿಲುಕಿದ್ದಳು.
ಬಾಲಕಿಗೆ ಉಸಿರಾಟಕ್ಕೆ ತೊಂದರೆ ಆಗದಂತೆ ಆಮ್ಲಜನಕ ಪೂರೈಸಿ ರಕ್ಷಣಾ ಕಾರ್ಯ ಪ್ರಾರಂಭಿಸಲಾಯಿತು. ಪೊಲೀಸರು ಮತ್ತು ಅಗ್ನಿ ಶಾಮಕ ದಳದವರು ಜಂಟಿಯಾಗಿ ರಕ್ಷಣಾ ಕಾರ್ಯ ಕೈಗೊಂಡಿದ್ದರು. ಗುರುವಾರ ತಡರಾತ್ರಿಯವರೆಗೂ ರಕ್ಷಣಾ ಕಾರ್ಯ ನಡೆಸಿ, ಬಾಲಕಿಯನ್ನು ರಕ್ಷಿಸಲಾಗಿದೆ.
ಜೆಸಿಬಿ ಯಂತ್ರಗಳ ಸಹಾಯದಿಂದ ಕೊಳವೆ ಬಾವಿಗೆ ಮುಖಾಮುಖಿಯಾಗಿ ಸುರಂಗ ಮಾರ್ಗ ಕೊರೆದು, ನಂತರ ಬಾಲಕಿಯನ್ನು ರಕ್ಷಿಸಲಾಯಿತು. ದೆಹಲಿ ಮೆಟ್ರೋ ನಿಗಮದ ರಕ್ಷಣಾ ತಂಡಗಳು ಸ್ಥಳಕ್ಕೆ ಧಾಮಿಸಿ, ರಕ್ಷಣಾ ಕಾರ್ಯಕ್ಕೆ ಸಹಕರಿಸಿದರು.
ದುರಂತ ನಡೆದ ಸ್ಥಳಕ್ಕೆ ವೈದ್ಯಕೀಯ ಸಿಬ್ಭಂದಿ ಆಗಮಿಸಿದ್ದರು. ಕೊಳವೆಬಾವಿಯಿಂದ ಬಾಲಕಿಯನ್ನು ಹೊರಕ್ಕೆ ತೆಗೆದ ನಂತರ, ಆಕೆಗೆ ಪ್ರಾಥಮಿಕ ಚಿಕಿತ್ಸೆ ನೀಡಿ, ನಂತರ ಆಸ್ಪತೆಗೆ ದಾಖಲಿಸಲಾಯಿತು. ಬಾಲಕಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂದು ವೈದ್ಯರು ಹೇಳಿದ್ದಾರೆ.