ಬಿಬಿಎಂಪಿಗೆ ಎಂ.ಲಕ್ಷೀನಾರಾಯಣ ನೂತನ ಆಯುಕ್ತ
ಗುರುವಾರ ಸಂಜೆ ಆದೇಶ ಹೊರಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಬಿಎಂಪಿಯ ನೂತನ ಆಯುಕ್ತರಾಗಿ ಲಕ್ಷೀ ನಾರಾಯಣ ಅವರನ್ನು ನೇಮಿಸಿದ್ದಾರೆ. ಸರ್ಕಾರದ ಈ ಆದೇಶದಿಂದಾಗಿ ಸಿದ್ದಯ್ಯ ಅವರನ್ನು ಸೇವೆಯಲ್ಲಿ ಮುಂದೆವರೆಸಲಾಗುತ್ತದೆ ಎಂಬ ಸುದ್ದಿಗಳಿಗೆ ತೆರೆ ಬಿದ್ದಿದೆ.
ಮೊದಲು ಬಿಬಿಎಂಪಿ ಆಯುಕ್ತರಾಗಿದ್ದ ಸಿದ್ದಯ್ಯ ಅವರ ಜಾಗಕ್ಕೆ ಸರ್ಕಾರ ರಜನೀಶ್ ಗೋಯಲ್ ಅವರನ್ನು ತಂದು ಕೂರಿಸಿತ್ತು. ಬೆಂಗಳೂರಿನ ಕಸ ವಿಲೇವಾರಿ ಸಮಸ್ಯೆ ಗಂಭೀರ ಸ್ವರೂಪ ಪಡೆದಾಗ ರಜನೀಶ್ ಗೋಯಲ್ ಅವರನ್ನು ವರ್ಗಾವಣೆ ಮಾಡಿ ಸಿದ್ದಯ್ಯ ಅವರನ್ನು ಪುನಃ ಆಯುಕ್ತರಾಗಿ ನೇಮಿಸಲಾಗಿತ್ತು.
ತಕ್ಷಣ ಕಾರ್ಯ ಪ್ರವೃತ್ತರಾದ ಸಿದ್ದಯ್ಯ ಕಸದ ಸಮಸ್ಯೆಯನ್ನು ಹತೋಟಿಗೆ ತಂದರು. ಆ ಮೂಲಕ ಹೈಕೋರ್ಟ್ ನಿಂದಲೂ ಮೆಚ್ಚುಗೆ ಪಡೆದರು. ಆದರೆ, ಸಿದ್ದಯ್ಯ ಅವರ ಕಟ್ಟುನಿಟ್ಟಿನ ಕ್ರಮದಿಂದಾಗಿ ಬಿಬಿಎಂಪಿ ಸದಸ್ಯರ ಕೆಂಗಣ್ಣಿಗೆ ಕಾರಣವಾಗಿದ್ದರು.(ಬಿಬಿಎಂಪಿ ಖಡಕ್ ಆಯುಕ್ತ ಸಿದ್ದಯ್ಯ ನಿವೃತ್ತಿ)
ಕಸದ ಸಮಸ್ಯೆ ನಿಯಂತ್ರಣಕ್ಕೆ ಬಂತು ಎಂದು ಕೊಳ್ಳುತ್ತಿರುವಾಗಲೇ ಸಿದ್ದಯ್ಯ ಅವರ ಸೇವಾವಧಿ ಅಂತ್ಯಗೊಂಡಿದೆ. ನಾಳೆ ಸಿದ್ದಯ್ಯ ಅವರು ನಿವೃತ್ತಿ ಹೊಂದಲಿದ್ದಾರೆ. ಅವರ ನಿವೃತ್ತಿಯಿಂದ ತೆರವಾಗುವ ಸ್ಥಾನಕ್ಕೆ ಲಕ್ಷ್ಮೀನಾರಾಯಣ ಅವರನ್ನು ನೇಮಿಸಲಾಗಿದೆ.
ಖಡಕ್ ಅಧಿಕಾರಿ : ಬಿಡಿಎ, ಬಿಬಿಎಂಪಿ ಆಯುಕ್ತರಾಗಿ ಸೇವೆ ಸಲ್ಲಿಸಿರುವ ಸಿದ್ದಯ್ಯ ಖಡಕ್ ಅಧಿಕಾರಿ ಎಂಬ ಹೆಸರು ಪಡೆದಿದ್ದಾರೆ. ಮುಖ್ಯ ಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸಿರುವ ಸಿದ್ದಯ್ಯ, ಸರ್ಕಾರದ ಮಟ್ಟದಲ್ಲೂ ಅತ್ಯಂತ ಪ್ರಭಾವಶಾಲಿ ಅಧಿಕಾರಿಯಾಗಿದ್ದರು.