ಹೊಗೇನಕಲ್ ಯೋಜನೆ ಆರಂಭಿಸಿದ ಜಯಲಲಿತಾ
ಧರ್ಮಗಿರಿ, ಕೃಷ್ಣಗಿರಿ ಜಿಲ್ಲೆಯ ಸುಮಾರು 30 ಲಕ್ಷ ಜನರಿಗೆ ಕುಡಿಯುವ ನೀರು ಒದಗಿಸಲು ಹೊಗೇನಕಲ್ ನೀರಾವರಿ ಯೋಜನೆಯನ್ನು 2008ರಲ್ಲಿ ತಮಿಳುನಾಡು ಸರ್ಕಾರ ಕೈಗೆತ್ತಿಕೊಂಡಿತ್ತು.
ಅಂದು ಕರ್ನಾಟಕ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಮತ್ತು ಕನ್ನಡ ಪರ ಸಂಘಟನೆಗಳು ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದವು. ಆದ್ದರಿಂದ ಯೋಜನೆ ಸ್ಥಗಿತಗೊಳಿಸಲಾಗಿತ್ತು. (ಹೊಗೇನಕಲ್ ವಿವಾದ)
ಆದರೆ, ಬುಧವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಯೋಜನೆಗೆ ಚಾಲನೆ ನೀಡಿದ್ದಾರೆ. ಯೋಜನೆಯ ಟೆಂಡರ್ ಪೂರೈಸುವ ಜಪಾನ್ ಕಂಪನಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು. ಶಂಕುಸ್ಥಾಪನೆಯಿಂದಾಗಿ ಮತ್ತೊಂದು ವಿವಾದ ಭುಗಿಲೇಳುವ ಸಂಭವವಿದೆ.
ತಮಿಳುನಾಡು ಸರ್ಕಾರದ ಈ ಯೋಜನೆ 1,928 ಕೋಟಿಗಳ ಮೊತ್ತದ್ದಾಗಿದೆ. 2008ರಲ್ಲಿ ಕರುಣಾನಿಧಿ ತಮಿಳುನಾಡು ಮುಖ್ಯಮಂತ್ರಿ ಆಗಿದ್ದಾಗ ಯೋಜನೆ ಪ್ರಾರಂಭಿಸಲು ಬಯಸಿದ್ದರು. ಆದರೆ, ವಿರೋಧದ ಕಾರಣ ಯೋಜನೆ ಕೈ ಬಿಟ್ಟಿದ್ದರು. (ಕರವೇ ಹೊಗೆ ಹತ್ತಿಕ್ಕಿದ್ದ ಪೊಲೀಸರು)
ಸದ್ಯ ಜಯಲಲಿತಾ ಯೋಜನೆಗೆ ಚಾಲನೆ ನೀಡಿ, 1986ರಲ್ಲಿಯೇ ಎಐಎಡಿಎಂಕೆ ನೇತೃತ್ವದ ಎಂ.ಜಿ. ರಾಮಚಂದ್ರನ್ ಸರ್ಕಾರ ಈ ಯೋಜನೆಯನ್ನು ತಯಾರಿಸಿತ್ತು. ಆ ಸಂದರ್ಭದಲ್ಲಿ 350 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿತ್ತು ಎಂದು ಹೇಳಿದ್ದಾರೆ.
ಕರ್ನಾಟಕದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಯೋಜನೆಗೆ ತಮಿಳುನಾಡು ಸರ್ಕಾರ ಶಂಕು ಸ್ಥಾಪನೆ ನೆರವೇರಿಸಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರ ಇದಕ್ಕೆ ಹೇಗೆ ಪ್ರತಿಕ್ರಿಯೆ ನೀಡುತ್ತದೆ ಎಂದು ಕಾದು ನೋಡಬೇಕು.