ಸ್ಪಾಟ್ ಫಿಕ್ಸಿಂಗ್ : ದಾವೂದ್ ಕೈವಾಡ ದೃಢಪಡಿಸಿದ ಪೊಲೀಸರು
ಪ್ರಮುಖ ಬುಕ್ಕಿ ಟಿಕು ಮಂಡಿ ಹಾಗೂ ಡಿ ಕಂಪನಿ ಜೊತೆ ಇರುವ ನೇರ ಸಂಪರ್ಕ ಇರುವುದು ದೃಢಪಟ್ಟಿದೆ. ಬುಕ್ಕಿಗಳು ಪಾಕಿಸ್ತಾನ ಹಾಗೂ ದುಬೈಗೆ ನೂರಾರು ಕರೆ ಮಾಡಿರುವುದು ಸ್ಪಷ್ಟವಾಗಿದೆ. ಐಪಿಎಲ್ ಟೂರ್ನಿಯ ಎಲ್ಲಾ ಪಂದ್ಯಗಳ ಬಗ್ಗೆ ಈಗ ಶಂಕೆ ವ್ಯಕ್ತವಾಗುತ್ತಿದೆ. ಬೆಟ್ಟಿಂಗ್, ಫಿಕ್ಸಿಂಗ್ ನಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಅವರ ಕೈವಾಡ ಇರುವುದು ಸ್ಪಷ್ಟವಾಗಿದೆ.
ಬಿಸಿಸಿಐ ಅಧ್ಯಕ್ಷ ಎನ್ ಶ್ರೀನಿವಾಸನ್ ಅವರ ಅಳಿಯ ಚೆನ್ನೈ ಸೂಪರ್ ಕಿಂಗ್ಸ್ ನ ಗುರುನಾಥ್ ಮೇಯಪ್ಪನ್ ಅವರ ಬಂಧನ ಅವಧಿ ಬುಧವಾರ(ಮೇ.29) ಕೊನೆಗೊಳ್ಳಲಿದೆ. ವಿಂದೂ ದಾರಾ ಸಿಂಗ್ ಹಾಗೂ ಮೇಯಪ್ಪನ್ ಜೊತೆಗೆ ಸಹಕಾರ ನೀಡಿದ ಚೆನ್ನೈನ ಹೋಟೆಲ್ ಮಾಲೀಕ ವಿಕ್ರಮ್ ಅಗರವಾಲ್ ಪತ್ತೆಗಾಗಿ ಪೊಲೀಸರು ಜಾಲ ಹೆಣೆದಿದ್ದಾರೆ.
ಅಗರವಾಲ್ ಅವರು ದೇಶಿ ಹಾಗೂ ಅಂತಾರಾಷ್ಟ್ರೀಯ ಬುಕ್ಕಿಗಳ ಜೊತೆ ನೇರ ಸಂಪರ್ಕ ಇಟ್ಟುಕೊಂಡಿರುವ ಶಂಕೆ ವ್ಯಕ್ತವಾಗಿದೆ. ಅಗರವಾಲ್ ಸೆರೆ ಸಿಕ್ಕ ಮೇಲೆ ಹೆಚ್ಚಿನ ವಿಚಾರಣೆ ನಡೆಸಿದರೆ ಇನ್ನಷ್ಟು ಮಹತ್ವದ ಮಾಹಿತಿ ಹೊರ ಬೀಳುವ ಸಾಧ್ಯತೆಯಿದೆ ಎಂದು ಮುಂಬೈ ಪೊಲೀಸರು ಹೇಳಿದ್ದಾರೆ.
ಪಾಕಿಸ್ತಾನಿ ಅಂಪೈರ್ ಅಸಾದ್ ರೌಫ್ ಅವರು ಐಪಿಎಲ್ ಟೂರ್ನಿ ಮುಗಿಸಿಕೊಂಡು ತಮ್ನ ದೇಶಕ್ಕೆ ಮರಳಿದ್ದಾರೆ. ಆದರೆ, ಸಿಎನ್ ಎನ್ ಐಬಿನ್ ಪ್ರಕಾರ ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ರೌಫ್ ವಿಚಾರಣೆ ನಡೆಸಲು ಮುಂಬೈ ಪೊಲೀಸರು ಸಿದ್ದರಾಗುತ್ತಿದ್ದಾರೆ. ಅಸಾದ್ ರೌಫ್ ಅವರು ಭಾರತ ಬುಕ್ಕಿಗಳಿಗೆ ಸಂಪರ್ಕ ಸೇತು ಆಗಿದ್ದರು ಎನ್ನಲಾಗಿದೆ.