ಜುಲೈನಿಂದ ಕಸ ವಿಂಗಡನೆ ಕಡ್ಡಾಯ, ತಪ್ಪಿದರೆ ದಂಡ
ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಬಿಎಂಪಿ ಆಯಕ್ತ ಸಿದ್ದಯ್ಯ, 140 ವಾರ್ಡ್ಗಳಲ್ಲಿ ಒಣ ತ್ಯಾಜ್ಯ ಸಂಗ್ರಹ ಕೇಂದ್ರ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಉಳಿದ 58 ವಾರ್ಡ್ಗಳಲ್ಲಿ ತಿಂಗಳೊಳಗೆ ಕಾಮಗಾರಿ ಪೂರ್ಣಗೊಳ್ಳಲಿದ್ದು, ಜುಲೈ ಒಂದರಿಂದ ಕಸ ವಿಂಗಡಣೆ ಕಡ್ಡಾಯಗೊಳಿಸಲಾಗುವುದು ಎಂದು ಹೇಳಿದರು.
ನಗರದಲ್ಲಿ ಕಟ್ಟಡ ನಿರ್ಮಾಣಗಳ ತ್ಯಾಜ್ಯವನ್ನು ರಸ್ತೆ, ಫುಟ್ಪಾತ್ ಮುಂತಾದ ಕಡೆ ಸುರಿಯುತ್ತಿದ್ದಾರೆ. ಕಟ್ಟಡ ನಿರ್ಮಾಣ ತ್ಯಾಜ್ಯ ವಿಲೇವಾರಿಗೆ ನಗರದಲ್ಲಿ ಏಳು ಸ್ಥಳಗಳನ್ನು ಗುರುತಿಸಲಾಗಿದ್ದು, ನಿರ್ದಿಷ್ಟ ಸ್ಥಳದಲ್ಲೇ ಕಸ ವಿಲೇವಾರಿ ಮಾಡಬೇಕು. ಬೇರೆಡೆ ಕಸ ಸುರಿಸದರೆ, ಅಂತಹ ವಾಹನವನ್ನು ಒಂದು ತಿಂಗಳ ಕಾಲ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದರು.
ಮಾಲ್ ಗಳಿಗೂ ನಿಯಮ : ನಗರದ ದೊಡ್ಡ ದೊಡ್ಡ ಮಾಲ್ ಗಳು ಸಾರ್ವಜನಿಕ ಸ್ಥಳಗಳಲ್ಲಿ ಕಸ ಸುರಿಯುವು ಮೂಲಕ ನೈರ್ಮಲ್ಯ ಹಾಳುಮಾಡುತ್ತಿವೆ. ಆದ್ದರಿಂದ ಮಾಲ್ ಗಳಿಗೆ ಈಗಾಗಲೇ ನಿರ್ದೇಶನ ನೀಡಲಾಗಿದೆ. ರಸ್ತೆ ಮೇಲೆ ಕಸ ಸುರಿದರೆ, ಮೊದಲ ಬಾರಿ 5,000 ರೂ ದಂಡ ವಿಧಿಸಲಾಗುತ್ತದೆ.
ಎರಡನೇ ಬಾರಿ ಕಸ ಸುರಿದರೆ, 10,000 ರೂ. ದಂಡ ವಿಧಿಸುವುದು ಹಾಗೂ ಮೂರನೇ ಬಾರಿ ಮಾಲ್ ಗಳ ಲೈಸೆನ್ಸ್ ರದ್ದುಪಡಿಸುವ ಬಗ್ಗೆಯೂ ಚಿಂತನೆ ನಡೆದಿದೆ. ಸಮರ್ಪಕ ಕಸ ವಿಲೇವಾರಿಗಾಗಿ ಕಠಿಣ ಕ್ರಮಗಳು ಅನಿವಾರ್ಯವಾಗಿವೆ ಎಂದು ಸಿದ್ದಯ್ಯ ವಿವರ ನೀಡಿದರು.
ಪ್ರತ್ಯೇಕ ಸಂಸ್ಕರಣಾ ಘಟಕ : ನಗರದ ಹೋಟೆಲ್ಗಳಿಂದ ಪ್ರತಿದಿನ 500 ರಿಂದ 750 ಟನ್ ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಇವುಗಳನ್ನು ಪ್ರತ್ಯೇಕವಾಗಿ ಅವುಗಳೆ ಸಂಸ್ಕರಿಸಲಿವೆ. ಇದರಿಂದಾಗಿ ಬಿಬಿಎಂಪಿಗೆ 750 ಟನ್ ತಾಜ್ಯ ಸಂಸ್ಕರಿಸಲು ತಗಲುವ ವೆಚ್ಚ ಉಳಿತಾಯವಾಗದೆ ಎಂದರು.
ಮಣಿಪಾಲ್ ಮಾದರಿ : ಆಸ್ಪತ್ರೆಗಳ ವೈದ್ಯ ತ್ಯಾಜ್ಯ ಸಂಗ್ರಹಿಸಲು ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗುವುದು. ಆದ್ದರಿಂದ ಪ್ರತಿಯೊಂದು ಆಸ್ಪತ್ರೆಗಳು ನೋಂದಣಿ ಮಾಡಿಕೊಳ್ಳಬೇಕು. ಪಾಲಿಕೆಯೊಡನೆ ತಾಜ್ಯ ವಿಲೇವಾರಿಗೆ ಸಹಕರಿಸಬೇಕು. ಈ ಕಾರ್ಯಕ್ಕೆ ಮಣಿಪಾಲ್ ಆಸ್ಪತ್ರೆಯನ್ನು ಮಾದರಿ ಸಂಸ್ಥೆಯಾಗಿ ನೇಮಿಸಲಾಗಿದೆ ಎಂದರು.
ಸಾರ್ವಜನಿಕರಿಗೆ ತಿಳುವಳಿಕೆ : ಸಮೂಹ ಮಾಧ್ಯಮಗಳ ಮೂಲಕ ಸಾರ್ವಜನಿಕರಿಗೆ ಕಸ ವಿಂಗಡನೆ ಬಗ್ಗೆ ಮಾಹಿತಿ ನೀಡುತ್ತೇವೆ. ಜುಲೈ 1ರಿಂದ ಜನರು ಮನೆಯ ಕಸವನ್ನು ಕಡ್ಡಾಯವಾಗಿ ವಿಂಗಡಿಸಿ ನೀಡಬೇಕಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಖಾಲಿ ನಿವೇಶನಗಳಲ್ಲಿ ಕಸ ಸುರಿದರೆ ಅಂತಹವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ವಿವರಣೆ ನೀಡಿದರು.